ಸಾರಾಂಶ
ಕೊಪ್ಪಳದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.
ಕೊಪ್ಪಳ: ಮನುಷ್ಯನಾಗಿ ಹುಟ್ಟಿದೆ ಮೇಲೆ ಸಮಾಜಮುಖಿಯಾಗಿ ಬದುಕಬೇಕು ಮತ್ತು ಕಷ್ಟಗಳಿಗೆ ಸ್ಪಂದಿಸುವ ಮೂಲಕ ಬದುಕು ಸಾರ್ಥಕ ಮಾಡಿಕೊಳ್ಳಬೇಕು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
ಭಾರತೀಯ ರೆಡ್ಕ್ರಾಸ್ ಸಂಸ್ಥೆ ಮಹಾವೀರ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ರೆಡ್ ಕ್ರಾಸ್ ಯುವ ಕಾರ್ಯಾಗಾರದಲ್ಲಿ ಮಾತನಾಡಿದರು.ಕಾರ್ಯಾಗಾರದಲ್ಲಿ ಏಳು ಜಿಲ್ಲೆಯ ವಿದ್ಯಾರ್ಥಿಗಳು ಭಾಗವಹಿಸಿರುವುದು ಖುಷಿಯಾಗುತ್ತದೆ. ವಿಭಾಗಮಟ್ಟದ ಕಾರ್ಯಾಗಾರವೊಂದನ್ನು ಹಮ್ಮಿಕೊಳ್ಳುವ ಮೂಲಕ ಯುವಕರಲ್ಲಿ ಜಾಗೃತಿ ಮೂಡಿಸುತ್ತಿರುವುದು ಅತ್ಯುತ್ತಮ ಕಾರ್ಯವಾಗಿದೆ. ಕಾರ್ಯಾಗಾರದ ಮೂಲಕ ಮನವರಿಕೆಯಾದ ಸಮಾಜ ಸೇವೆಯನ್ನು ನೀವು ಮೈಗೂಡಿಸಿಕೊಳ್ಳಬೇಕು. ಅದನ್ನು ಪಾಲನೆ ಮಾಡಬೇಕು ಎಂದರು.
ಕೊಪ್ಪಳದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅದರಲ್ಲಿ ಇರುವವರೂ ಸದಾ ಒಂದಿಲ್ಲೊಂದು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಸದಾ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಾರೆ. ಅದರಲ್ಲೂ ಕೊಪ್ಪಳದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸ್ಥಾಪಿಸುವ ಬ್ಲಡ್ ಬ್ಯಾಂಕ್ ರಾಜ್ಯದಲ್ಲಿಯೇ ನಂಬರ್ ಒನ್ ಎನ್ನುವಂತೆ ಕಾರ್ಯನಿರ್ವಹಿಸುತ್ತದೆ. ಇದರಿಂದ ಸಾಕಷ್ಟು ಪ್ರಯೋಜನವಾಗಿದೆ. ಅನೇಕ ಜನರ ಜೀವ ಉಳಿಯಲು ಸಾಧ್ಯವಾಗಿದೆ. ಇಂಥ ರಕ್ತವನ್ನು ಅವರಿವರಿಂದ ದಾನ ಪಡೆದು, ಸಂಗ್ರಹಿಸಿಯೇ ನೀಡಬೇಕು. ಇದನ್ನು ಎಲ್ಲಿಯೂ ತಯಾರು ಮಾಡುವುದಕ್ಕೆ ಆಗುವುದಿಲ್ಲ ಎಂದರು.ದೇವರು ನಮಗೆ ಸತ್ತವರನ್ನು ಬದುಕಿಸುವ ಶಕ್ತಿಯನ್ನು ನೀಡಿಲ್ಲ. ಆದರೆ, ಸಾಯುವವರನ್ನು ಬದುಕಿಸುವ ಶಕ್ತಿಯನ್ನು ನೀಡಿದ್ದಾನೆ. ರಕ್ತದಾನ ಮೂಲಕ ನಾವು ಸಾಯುವವರನ್ನು ಉಳಿಸುವ ಮಹಾನ್ ಕಾರ್ಯ ಮಾಡಬಹುದಾಗಿದೆ ಎಂದರು. ಹಿರಿಯ ವಕೀಲರಾದ ಹನುಮಂತ ಕೆಂಪಣ್ಣ ಹಾಗೂ ಡಾ. ಎಂ.ಬಿ. ಪಾಟೀಲ್ ವಿಶೇಷ ಉಪನ್ಯಾಸ ನೀಡಿದರು.