ಮುರುಗೀ ಪರಂಪರೆಯಿಂದ ಸಮಾಜಮುಖಿ ಕಾರ್ಯ: ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ

| Published : Aug 11 2024, 01:37 AM IST

ಮುರುಗೀ ಪರಂಪರೆಯಿಂದ ಸಮಾಜಮುಖಿ ಕಾರ್ಯ: ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳಲ್ಕೆರೆ ತಾಲೂಕಿನ ಗಿಲಿಕೇನಹಳ್ಳಿಯಲ್ಲಿ ಆಯೋಜಿಸಿದ್ದ ಅನುಭಾವ ಶ್ರಾವಣ ಕಾರ್ಯಕ್ರಮದಲ್ಲಿ ಬಸವಪ್ರಭು ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ವ್ಯಕ್ತಿಗೆ ಸಾವು ಸಹಜ, ಸತ್ತ ನಂತರವೂ ಆತ ಮಾಡಿದ ಘನತೆವೆತ್ತ ಸಮಾಜಮುಖಿ ಕಾರ್ಯಗಳ ಮೂಲಕ ಸದಾ ನಮ್ಮೊಡನಿರುತ್ತಾರೆ. ಅಂಥವರ ಸಾಲಿಗೆ ಚಿತ್ರದುರ್ಗ ಬೃಹನ್ಮಠದ ಶೂನ್ಯಪೀಠ ಹಾಗೂ ಮುರುಗೀ ಪರಂಪರೆಯ ಮಹಾನುಭಾವರಿದ್ದಾರೆ ಎಂದು ಗುರುಮಠಕಲ್‍ನ ಖಾಸಾ ಮುರುಘಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸ್ಮರಿಸಿದರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಿಂದ ಹೊಳಲ್ಕೆರೆ ತಾಲೂಕು ಗಿಲಿಕೇನಹಳ್ಳಿ ಗ್ರಾಮದಲ್ಲಿ ನಡೆದ ಅನುಭಾವ ಶ್ರಾವಣದ 3ನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಸರ್ವಕ್ಷೇತ್ರಗಳಲ್ಲಿ ಶ್ರೀಮಠದ ಗುರುತರವಾದ ಕೊಡುಗೆ ಕಾಣಬಹುದಾಗಿದೆ. ಹಾಗಾಗಿ ಗಿಲಿಕೇನಹಳ್ಳಿ ಗ್ರಾಮ ಸಹ ಪೀಠ ಪರಂಪರೆ ಜತೆಗೆ ಗುರುತಿಸಿಕೊಂಡಿರುವುದು ಸಹಿತವಾಗಿದೆ ಎಂದು ನುಡಿದರು.

ರಾವಂದೂರು ಮುರುಘಾಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ ಮಾತನಾಡಿ, ಜನಮಾನಸದಲ್ಲಿ ಮುರುಘಾಮಠವು ಮುರಿಗಿಮಠವೆಂದೇ ಜನಜನಿತವಾಗಿದೆ. ಸಾರ್ವಜನಿಕರ ಹಿತಕ್ಕಾಗಿಯೇ ಶ್ರೀಮಠದ ಎಲ್ಲ ಕಾರ್ಯಗಳು ಯೋಜನೆಗಳು ಇವೆ. ಮಹಾತ್ಮರನ್ನು ನೆನೆಯುವ ಈ ಶ್ರಾವಣ ಒಳ್ಳೆಯದನ್ನೇ ಶ್ರವಣ ಮಾಡಿಕೊಳ್ಳಲು ಇರುವುದು ಎಂದರು.

ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ, ಗಣ್ಯ ಪರಂಪರೆ ಹೊಂದಿರುವ ಮುರುಘಾಮಠವು ಸಾಮಾಜಿಕ, ಧಾರ್ಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಾ ಬಂದಿದೆ. ಶ್ರೀಮಠವು ನಾಡಿನಾದ್ಯಂತ ಸ್ಥಾಪಿಸಿರುವ ಹಾಸ್ಟೆಲ್‍ಗಳಲ್ಲಿದ್ದು ಓದಿದವರು ಸಮಾಜದಲ್ಲಿ ಅತ್ಯುನ್ನತ ಸ್ಥಾನದಲ್ಲಿರುವು ಈ ನಾಡಿಗೆ ಶೋಭೆ ತರುವ ವಿಚಾರವೆಂದರು.

ಮುರುಘಾಮಠ ಎಂದರೆ ಅದೊಂದು ಶಕ್ತಿಪೀಠ. ಮುರಿಗಿ ಶಾಂತವೀರ ಸ್ವಾಮೀಜಿ ಗದ್ದುಗೆ ಪವಾಡ ಸದೃಶವಾದದ್ದು ಎಂದೇ ಜನ ಭಾವಿಸಿದ್ದಾರೆ. ಜನ ಯಾವುದನ್ನು ಸುಲಭವಾಗಿ ಪರಿಗಣಿಸಬಾರದು ಮತ್ತು ಅಲಕ್ಷ್ಯ ವಹಿಸಬಾರದು. ಅರಿತು ನಡೆದರೆ ಆರು ಪಟ್ಟ ಮರೆತು ನಡೆದರೆ ಮೂರೇ ಅಥವಾ ಮುಗಿದ ಪಟ್ಟ ಎನ್ನುವ ಮಾತಿದೆ. ನಾವು ಜೀವನದಲ್ಲಿ ಅರಿತು ನಡೆಯಲಿಕ್ಕೆ ಮುರುಘಾಮಠವೇ ಸಾಕ್ಷಿ ಎಂದು ಮುರುಘಾಮಠ ಗುರುಕುಲದ ಶ್ರೀ ಮುರುಘೇಶ ಸ್ವಾಮೀಜಿ ಹೇಳಿದರು.

ಶ್ರೀಮುರುಘಾಮಠ ಮತ್ತು ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಸಾಮಾಜಿಕ ಕಳಕಳಿಯೇ ಮುರುಘಾಮಠದ ಮೂಲ ಧ್ಯೇಯವಾಗಿತ್ತು. ಅದು ಈಗಲೂ ನಡೆದಿದೆ ಎಂದು ನುಡಿದರು. ಬಸವಕಲ್ಯಾಣದ ಶಿವಕುಮಾರ ಸ್ವಾಮೀಜಿ, ಒಂಟಿಕುಂಬ ಮುರುಘಾಮಠದ ಶ್ರೀ ತಿಪ್ಪೇರುದ್ರ ಸ್ವಾಮೀಜಿ, ಕಲ್ಕೆರೆಯ ಶ್ರೀ ಪೂರ್ಣಾನಂದ ಸ್ವಾಮೀಜಿ ವೇದಿಕೆಯಲ್ಲಿದ್ದರು. ಮುರಿಗೆ ಶಾಂತವೀರ ಸ್ವಾಮೀಜಿ ಕಾಲದಿಂದ ಸಾಗಿಬಂದಿರುವ ಗುರುಪರಂಪರೆ ಒಂದನೇಯ ಮುರಿಗೆ ಶಾಂತವೀರ ಸ್ವಾಮೀಜಿಗಳಿಂದ ಹಿಡಿದು ಒಟ್ಟು ಪೀಠ ಪರಂಪರೆ ಇಪ್ಪತ್ತು ಪೀಠಾಧೀಶರ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕೆಲಸಗಳನ್ನು ಅಲ್ಲಮಪ್ರಭು ಸಂಶೋಧನಾ ಕೇಂದ್ರದ ಡಾ.ವಿ ನಾಗರಾಜ್ ಸಭೆಯಲ್ಲಿ ವಿವರಿಸಿದರು.

ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಸಸಿ ನಡೆಲಾಯಿತು. ಬಸವೇಶ್ವರ ಆಸ್ಪತ್ರೆ ತಜ್ಞವೈದ್ಯರ ತಂಡ ಗ್ರಾಮದ 166 ಜನರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಿ, ಔಷಧಿ ವಿತರಣೆ ಮಾಡಿದರು. ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. ರಂಗಸ್ವಾಮಿ ಸ್ವಾಗತಿಸಿದರು. ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.