ಜಗತ್ತಿನ ಬೇರೆ ಕಡೆ ಇದ್ದಂತೆ ಭಾರತದಲ್ಲಿ ಕಾರ್ಮಿಕ ವರ್ಗವೇ ಇರಲಿಲ್ಲ. ಗ್ರಾಮೀಣ ಉಳಿಗಮಾನ್ಯ ಸಂಬಂಧಗಳನ್ನು ಕಳೆದುಕೊಳ್ಳಲು ಸಾಧ್ಯವಾಗಿಲ್ಲ. ಭಾರತದಲ್ಲಿ ಕಾರ್ಮಿಕ ವರ್ಗದಲ್ಲಿ ಜಾತಿ ಸಂಬಂಧ ನಶಿಸಲಿಲ್ಲ. ಆದರೆ, ಕಾರ್ಮಿಕರ ಆಶಯ ಮತ್ತು ತಿಳವಳಿಕೆಯಾಗಿ ಸಮಾಜವಾದ ಕೆಲಸ ಮಾಡಿದೆ. ನಮಗೇ ರಾಜಕೀಯ ಪ್ರಜಾಪ್ರಭುತ್ವ ಬಂದಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಸಮಾಜವಾದಕ್ಕೆ ಪ್ರಪಂಚವನ್ನು ಆಕರ್ಷಿಸುವ ಗುಣ ಇದೆ. ಏಕೆಂದರೇ ಸಮಾಜವಾದ ಸಮಾನತೆಯ ಭರವಸೆ ಎಂದು ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್ ತಿಳಿಸಿದರು.ಮೈಸೂರು ವಿವಿ ಮಾನಸಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಮಾಳವೀಯ ಮಿಷನ್ ಅಧ್ಯಾಪಕರ ತರಬೇತಿ ಕೇಂದ್ರ ಸಹಯೋಗದಲ್ಲಿ ನಡೆದ 2 ದಿನಗಳ ಸಿದ್ಧಾಂತಗಳು ಮತ್ತು ಸಾಹಿತ್ಯ ಪಠ್ಯಗಳು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು, ಸಮಾಜವಾದಿ ಸಿದ್ಧಾಂತ: ಸಾಹಿತ್ಯ ಪಠ್ಯಗಳು ಕುರಿತು ಮಾತನಾಡಿದರು.
ಜಗತ್ತಿನ ಬೇರೆ ಕಡೆ ಇದ್ದಂತೆ ಭಾರತದಲ್ಲಿ ಕಾರ್ಮಿಕ ವರ್ಗವೇ ಇರಲಿಲ್ಲ. ಗ್ರಾಮೀಣ ಉಳಿಗಮಾನ್ಯ ಸಂಬಂಧಗಳನ್ನು ಕಳೆದುಕೊಳ್ಳಲು ಸಾಧ್ಯವಾಗಿಲ್ಲ. ಭಾರತದಲ್ಲಿ ಕಾರ್ಮಿಕ ವರ್ಗದಲ್ಲಿ ಜಾತಿ ಸಂಬಂಧ ನಶಿಸಲಿಲ್ಲ. ಆದರೆ, ಕಾರ್ಮಿಕರ ಆಶಯ ಮತ್ತು ತಿಳವಳಿಕೆಯಾಗಿ ಸಮಾಜವಾದ ಕೆಲಸ ಮಾಡಿದೆ. ನಮಗೇ ರಾಜಕೀಯ ಪ್ರಜಾಪ್ರಭುತ್ವ ಬಂದಿದೆ. ಸಾಂಸ್ಕೃತಿಕ ಪ್ರಜಾಪ್ರಭುತ್ವ ಬರಬೇಕಿದೆ ಎಂದರು.ಭಾರತದಲ್ಲಿ ಕಾರ್ಮಿಕ ಅಥವಾ ಪ್ರಾಧ್ಯಾಪಕನಾದರೂ ಪರಂಪರೆಯಿಂದ ಬಿಡುಗಡೆ ಇಲ್ಲ. ಕರ್ನಾಟಕದ ಮಟ್ಟಿಗೆ ಎರಡೂ ಪ್ರಬಲ ಜಾತಿಗಳು ಅಧಿಕಾರ ಸ್ಥಾನದಲ್ಲಿವೆ. ಉಳಿದವರು ಸ್ಪರ್ಧಿಗಳಷ್ಟೇ. ಸಿದ್ದರಾಮಯ್ಯ ಸಮಾಜವಾದಿಯಾಗದಿದ್ದರೆ ಲೇಖಕಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟಿಸಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಧರ್ಮವಿಲ್ಲದೇ ನಾನು ಬದುಕಬಲ್ಲೆ ಎಂದ ಡಾ. ಅಂಬೇಡ್ಕರ್ ಅವರು ಧಮ್ಮ ಜನರಿಗೆ ಬೇಕೆಂದು ಬೌದ್ಧ ಧಮ್ಮ ಸ್ವೀಕಾರ ಮಾಡಿದರು. ರಾಜಕೀಯ ಭಾಷಣದಿಂದ ಮನಃಪರಿವರ್ತನೆ ಸಾಧ್ಯವಿಲ್ಲ. ನಮ್ಮ ಒಳಗಡೆಯ ಪರಿವರ್ತನೆ ಆಗಬೇಕಿದೆ. ಸಮಾಜವಾದವನ್ನು ಭ್ರಮೆಗಳಿಲ್ಲದೇ ಗುರುತಿಸಬೇಕು. ವಿಮರ್ಶರಹಿತವಾಗಿ ತುಂಡು ತುಂಡು ಉತ್ತರ ಹೇಳಿ ಸುಮ್ಮನಾಗಿಸುವುದು ವ್ಯರ್ಥ. ಮನುಷ್ಯನೊಳಗಡೆ ಕೇಡು ಇದೆ. ಕೇಡು ಸಂಪತ್ತು ಅಧಿಕಾರದೊಳಗಡೆ ಇಲ್ಲ ಎಂದು ಅವರು ತಿಳಿಸಿದರು.ಚಿಕ್ಕೋಡಿಯ ಸಹಾಯಕ ಪ್ರಾಧ್ಯಾಪಕ ಡಾ. ಹೊಂಬಯ್ಯ ಹೊನ್ನಲಗೆರೆ ಮಾತನಾಡಿ, ಬಹುಶಿಸ್ತೀಯ ಸಿದ್ಧಾಂತಗಳಲ್ಲಿ ಸಮಾಜವಾದವಾದವೂ ಒಂದು. ಭಿನ್ನ ಭಿನ್ನವಾದ ಚಿಂತನೆಗಳನ್ನು ಒಳಗೊಂಡು ಮುಖ್ಯವಾಹಿನಿಗೆ ತಂದು ಸಮಾಜವನ್ನು ಅಪ್ಪಿಕೊಳ್ಳುವುದೇ ನಿಜವಾದ ಸಮಾಜವಾದ ಚಿಂತನೆ ಸಾಧ್ಯವಾಗಲಿದೆ ಎಂದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ, ಪ್ರಾಧ್ಯಾಪಕರಾದ ಡಾ. ಕವಿತಾ ರೈ, ಡಾ. ನಾಗರಾಜ್ ತಲಕಾಡು, ಡಾ. ಶೈಲಜಾ, ನಂಜುಂಡಯ್ಯ, ಪಿ.ಎಂ. ಕುಮಾರ್, ಡಾ.ಎಚ್.ಪಿ. ಮಂಜು, ಡಾ. ಗೌರೀಶ್, ಶಂಕರ್ ಮೊದಲಾದವರು ಇದ್ದರು.