ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪುಟಾಣಿ ಮಕ್ಕಳಿಗಾಗಿ ಶ್ರೀಕೃಷ್ಣ- ರಾಧೆ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದ್ದು, ನೂರಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ನೆನಪಿನ ಕಾಣಿಕೆ ಹಾಗೂ ವಿಶೇಷ ಬಹುಮಾನಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ‘ಪುಣ್ಯಕೋಟಿ’ ಕಿರುಚಿತ್ರ ಪ್ರದರ್ಶನ ನಡೆಯಿತು.

ಅರಸೀಕೆರೆ: ಸನಾತನ ಪರಂಪರೆಯಲ್ಲಿ ಗೋವುಗಳಿಗೆ ವಿಶೇಷ ಸ್ಥಾನವಿದ್ದು, ಕುಟುಂಬದಲ್ಲಿ ನಡೆಯುವ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ವಿವಿಧ ಶುಭ ಸಮಾರಂಭಗಳ ಸಂದರ್ಭದಲ್ಲಿ ಗೋವುಗಳಿಗೆ ಗೋಗ್ರಾಸ ಅರ್ಪಿಸಿ ಪೂಜಿಸುವ ಸಂಪ್ರದಾಯವನ್ನು ಬೆಳೆಸಿಕೊಳ್ಳಬೇಕು ಎಂದು ಅನಂತ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ಅನಂತ್ ಕುಮಾರ್ ಹೇಳಿದರು.

ತಾಲೂಕಿನ ಮಹಾತ್ಮ ಗಾಂಧೀಜಿ ಚಿತಾಭಸ್ಮದ ಪಕ್ಕದಲ್ಲಿರುವ ಕಸ್ತೂರ್ ಬಾ ಗೋಶಾಲೆಯಲ್ಲಿ ಆಯೋಜಿಸಿದ್ದ 10ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗೋಶಾಲೆ ಆರಂಭವಾದ ಸಂದರ್ಭದಲ್ಲಿ ಕೇವಲ ಐದು ಹಸುಗಳಿದ್ದವು. ಇಂದು 400ಕ್ಕೂ ಹೆಚ್ಚು ವಿವಿಧ ತಳಿಯ ಗೋವುಗಳನ್ನು ಸಂರಕ್ಷಿಸಲಾಗುತ್ತಿದೆ. ಪ್ರತಿನಿತ್ಯ ನಿರ್ವಹಣಾ ವೆಚ್ಚ ಹೆಚ್ಚಾಗುತ್ತಿದ್ದರೂ ಗೋಶಾಲೆಯ ಮೇಲ್ವಿಚಾರಕರು ಹಾಗೂ ಸೇವಕರು ನಿರಂತರವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.

ಗೋವುಗಳ ಸಂರಕ್ಷಣೆ ಕೇವಲ ಕೆಲವರ ಜವಾಬ್ದಾರಿಯಾಗದೆ ಸಮಾಜದ ಪ್ರತಿಯೊಬ್ಬರೂ ತಮ್ಮ ಕೈಲಾದ ರೀತಿಯಲ್ಲಿ ಸಹಕಾರ ನೀಡಬೇಕು. ಗೋಶಾಲೆಗಳನ್ನು ಉಳಿಸಿ ಬೆಳೆಸುವ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಹೇಳಿದರು.

ಗೋಶಾಲೆಗೆ ನಿರಂತರ ಸೇವೆ ಸಲ್ಲಿಸಿದ ಡಾ. ಬಸವರಾಜ ರಾಮಪ್ಪ ಬಾಳಪ್ಪನವರ್, ಡಾ. ಮಂಜುನಾಥ್ ಹಾಗೂ ಡಾ. ಶಿವಕುಮಾರ್ ಅವರಿಗೆ ಕಸ್ತೂರ್ ಬಾ ಗೋ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀ ಗಂಗಾಧರಪ್ಪ, ಹಾಸನದ ಉಪ ಪೊಲೀಸ್ ಅಧೀಕ್ಷಕಿ ಕುಮಾರಿ ಲೇಖನ್ ಜೈನ್ ಹಾಗೂ ದೀಪಕ್ ರಾಜ್ ಅವರಿಗೆ ಕಸ್ತೂರ್ ಬಾ ಗೋ ರಕ್ಷಾ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಪುಟಾಣಿ ಮಕ್ಕಳಿಗಾಗಿ ಶ್ರೀಕೃಷ್ಣ- ರಾಧೆ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದ್ದು, ನೂರಕ್ಕೂ ಹೆಚ್ಚು ಮಕ್ಕಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ನೆನಪಿನ ಕಾಣಿಕೆ ಹಾಗೂ ವಿಶೇಷ ಬಹುಮಾನಗಳನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ‘ಪುಣ್ಯಕೋಟಿ’ ಕಿರುಚಿತ್ರ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಕಸ್ತೂರ್ ಬಾ ಗೋಶಾಲೆ ಅಧ್ಯಕ್ಷ ಜಯರಾಮ್, ಭಾರತೀಯ ಗೋ ಪರಿವಾರ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪಂಕಜ್ ಪಟೇಲ್, ಮುರಳೀಧರ್, ಪಾರಸ್, ರಾಜಶೇಖರ್, ಗೀತಾ ಉಮೇಶ್, ಕುಸುಮ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.