ಒಳ್ಳೆಯವರು ಏನು ಪ್ರಶ್ನೆ ಮಾಡದೆ ಮೌನ್ಯವಹಿಸಿರುವುದರಿಂದಲೇ ಸಮಾಜ ವಿಷಮಯ ಸ್ಥಿತಿಯತ್ತ ಸಾಗುತ್ತಿದೆ. ಸಮಾಜದಲ್ಲಿ ಒಳ್ಳೆಯವರು ಮಾತನಾಡುವ ಜತೆಗೆ ಒಳ್ಳೆಯದನ್ನು ಕೇಳಿಸಿಕೊಂಡು ಸಮಾಜ ತಿದ್ದುವ ಕೆಲಸ ಮಾಡಬೇಕು, ಸಮಾಜ ಸುಧಾರಣೆ ಮಾಡಲು ಸಾಧ್ಯ.
ಕನ್ನಡಪ್ರಭ ವಾರ್ತೆ ಪಾಂಡವಪುರ
ಒಳ್ಳೆಯವರು ಏನು ಪ್ರಶ್ನೆ ಮಾಡದೆ ಮೌನ್ಯವಹಿಸಿರುವುದರಿಂದಲೇ ಸಮಾಜ ವಿಷಮಯ ಸ್ಥಿತಿಯತ್ತ ಸಾಗುತ್ತಿದೆ ಎಂದು ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥಸ್ವಾಮೀಜಿ ವಿಷಾದ ವ್ಯಕ್ತಪಡಿಸಿದರು.ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಕಾವೇರಮ್ಮ ಕೃಷ್ಣೇಗೌಡ ಪ್ರತಿಷ್ಠಾನ ಸಹಯೋಗದಲ್ಲಿ ಹಸಿರು ಭೂಮಿ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ, ನರಹಳ್ಳಿ ಬಾಲ ಸುಬ್ರಹ್ಮಣ್ಯ ಗುರು ಶ್ರೇಷ್ಠ ಪ್ರಶಸ್ತಿ ಪ್ರದಾನ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯವರು ಮಾತನಾಡುವ ಜತೆಗೆ ಒಳ್ಳೆಯದನ್ನು ಕೇಳಿಸಿಕೊಂಡು ಸಮಾಜ ತಿದ್ದುವ ಕೆಲಸ ಮಾಡಬೇಕು, ಸಮಾಜ ಸುಧಾರಣೆ ಮಾಡಲು ಸಾಧ್ಯ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸಮಾಜವನ್ನು ತಿದ್ದಿ ಸರಿದಾರಿಗೆ ತರುವ ಜವಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆಯಾದರೆ ಸಮಾಜ ಪ್ರಗತಿಯತ್ತ ಸಾಗಲಿದೆ ಎಂದರು.ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ.ಪದ್ಮ ಶೇಖರ್ ಮಾತನಾಡಿ, ರಾಜಕೀಯ, ಧಾರ್ಮಿಕ ಕ್ಷೇತ್ರಗಳು ಕಲುಷಿತಗೊಂಡಿವೆ. ಸಮಾಜದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ಕೊಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಸಲಹೆ ನೀಡಿದರು.
ಇದೇ ವೇಳೆ ವಿಶ್ರಾಂತ ಪ್ರಾಂಶುಪಾಲ ಪ್ರೊ.ದೊಡ್ಡರಸಿಕೆರೆ ಮಾಯಪ್ಪ ಅವರಿಗೆ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಗುರುಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಕರಾದ ಆನಂದ್, ಪುಷ್ಪ, ಸಿ.ಎಚ್.ವೆಂಕಟೇಶ್, ಎಚ್.ಆರ್.ಪೂರ್ಣಿಮಾ, ಎಂ.ಎಸ್.ಶಿವರಾಮ್, ಅನಿತ ಎಸ್.ವೈ., ಕೆ.ಆರ್.ಚಂದ್ರು, ಕೀರ್ತಿ ಅವರಿಗೆ ಕುವೆಂಪು ಶಿಕ್ಷಣ ಚೇತನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಚ್.ಸಿ.ಪುಟ್ಟಸ್ವಾಮೀಗೌಡ, ಬಸವೇಶ್ವರ ವಿವಿದ್ದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಅಮೃತಿರಾಜಶೇಖರ್, ಕ.ರಾ.ಸ.ನೌ.ಸಂಘದ ರಾಜ್ಯ ಕಾರ್ಯದರ್ಶಿ ಎಂ.ಜಯರಾಮ್, ಎಸ್.ಎನ್.ಕೆಂಪೇಗೌಡ, ಶಿವಕುಮಾರ್, ಲೋಕೇಶ್, ಡಾ.ಬಿ.ಬಸವರಾಜ್(ಕಂದ), ಹಸಿರು ಭೂಮಿ ಟ್ರಸ್ಟ್ನ ಜ್ಞಾನೇಶ್, ಕೋಕಿಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.