ಬಹು ದಿನಗಳ ನಂತರದಲ್ಲಿ ಕನಕ ಸಮುದಾಯ ಭವನ ಲೋಕಾರ್ಪಣೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಡೀ ಸಮಾಜ ವಿಶಾಲ ಮನೋಭಾವ ಹೊಂದುವ ಜತೆಗೆ ಒಗ್ಗಟ್ಟಾಗಿರಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.

ಹೂವಿನಹಡಗಲಿ: ಪಟ್ಟಣದ ಕನಕ ಸಮುದಾಯ ಭವನ ಉದ್ಘಾಟನೆಗೆ ಸಮಾಜದ ಒಗ್ಗಟ್ಟಿನ ಕೊರತೆಯೋ? ಜಾಗದ ಮಹಿಮೆಯೋ ಗೊತ್ತಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಎಲ್ಲದಕ್ಕೂ ಹಿನ್ನೆಡೆಯಾಗುತ್ತಿದೆ. ಆದರೆ, ನಿಮ್ಮ ಸ್ವ ಪ್ರತಿಷ್ಠೆಗಿಂತ ಗುರುವಿನ ಪ್ರತಿಷ್ಠೆಯೇ ಮೇಲಾಗಿದ್ದು, ನಮ್ಮಿಂದ ಭವನ ಉದ್ಘಾಟನೆಯಾಗಿದೆ ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.

ಇಲ್ಲಿನ ತಾಲೂಕು ಕುರುಬ ಸಮಾಜದಿಂದ ಆಯೋಜಿಸಿದ್ದ, ಕನಕ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಹು ದಿನಗಳ ನಂತರದಲ್ಲಿ ಕನಕ ಸಮುದಾಯ ಭವನ ಲೋಕಾರ್ಪಣೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇಡೀ ಸಮಾಜ ವಿಶಾಲ ಮನೋಭಾವ ಹೊಂದುವ ಜತೆಗೆ ಒಗ್ಗಟ್ಟಾಗಿರಬೇಕು. ಅದು ಬಿಟ್ಟು ಸ್ವಪ್ರತಿಷ್ಠೆಯನ್ನೇ ಪಣವಾಗಿ, ಆಹ್ವಾನ ಪತ್ರಿಕೆಯಲ್ಲಿ ಬೇರೆ ಬೇರೆ ಹೆಸರನ್ನು ಹಾಕಬೇಕೆಂಬ ಗೊಂದಲವನ್ನು ನಾವೇ ಪರಿಹರಿಸಿ, ನಮ್ಮಿಂದಲೇ ಉದ್ಘಾಟನೆಯಾಗಿದೆ. ನಮ್ಮೊಳಗಿನ ದ್ವೇಷ, ಅಸೂಯೆಗಳನ್ನು ದೂರ ಮಾಡಬೇಕಿದೆ. ಮನುಷ್ಯ ತೀರಾ ಕನಿಷ್ಠ ಪರಿಸ್ಥಿತಿಗೆ ಬಂದು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಆಗಬಾರದು ಎಂದು ಹೇಳಿದರು.

ಕಾಗಿನೆಲೆ ಗುರು ಪೀಠಕ್ಕೆ ಬರುವ ಪ್ರತಿಯೊಬ್ಬರಿಗೂ ಅರಿವು, ತಿಳಿವಳಿಕೆ ನೀಡುತ್ತೇವೆ. ಆದರೆ ಅದನ್ನರಿತು ಯಾರೂ ಜೀವನ ಮಾಡುತ್ತಿಲ್ಲ. ನಿಮ್ಮನ್ನು ಎಷ್ಟೇ ತಿದ್ದಿದರೂ ನೀವು ಮೂರ್ತಿಯಾಗುವ ಲಕ್ಷಣಗಳು ಕಾಣುತ್ತಿಲ್ಲ, ಆದ್ದರಿಂದ ನಾವು ನಿಮ್ಮನ್ನು ತಿದ್ದುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕನಕ ಭವನ ಉದ್ಘಾಟನೆ ಮಾಡಬೇಕೆಂದು ನನ್ನ ಹಣೆ ಬರಹದಲ್ಲಿತ್ತು. ಭವನದಲ್ಲಿ ಬೆಳಗಿನಿಂದ ಹೋಮ, ಹವನ ವಿವಿಧ ಧಾರ್ಮಿಕಗಳು ನಡೆದಿದ್ದು, ಪೂಜಾ ಕಾರ್ಯಕ್ರಮಗಳೊಂದಿಗೆ ಉದ್ಘಾಟಿಸಿದ್ದೇನೆ. ನಿಮ್ಮ ಮಲೀನ ಮನಸ್ಸುಗಳನ್ನು ತೊಳೆದುಕೊಂಡು ಉತ್ತಮ ಸಂಸ್ಕಾರವಂತರಾಗಿ, ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಜೀವನ ಸಾಗಿಸಬೇಕು ಎಂದು ಹೇಳಿದರು.

ಸಮಾಜದ ಮುಖಂಡ ಬಿ. ಹನುಮಂತಪ್ಪ ಮಾತನಾಡಿ, ಪಟ್ಟಣದ ಕನಕ ಸಮುದಾಯ ಭವನದ ಕಾಮಗಾರಿ ಕಳೆದ 20 ವರ್ಷಗಳಿಂದ ನಡೆಯುತ್ತಲೇ ಇತ್ತು. ಇದಕ್ಕೆ ಸರ್ಕಾರದಿಂದ ಮತ್ತು ಸಚಿವರು, ಶಾಸಕರು, ಸಂಸದರು ತಮ್ಮ ನಿಧಿಯಿಂದ ಅನುದಾನ ನೀಡಿದ್ದಾರೆ. ಅದರ ಜತೆಗೆ ಕಾಗಿನೆಲೆ ಪೀಠದ ಶ್ರೀಗಳು ₹7.50 ಲಕ್ಷ ನೀಡಿ ಭವನದ ಕಾಮಗಾರಿ ಪೂರ್ಣಗೊಳಿಸಿದ್ದಾರೆ ಎಂದು ಸ್ಮರಿಸಿದರು.

ಶ್ರೀರಾಮ ದೇವರ ದೇವಸ್ಥಾನದ ಧರ್ಮದರ್ಶಿ ರಾಕೇಶಯ್ಯ ರಾಮಸ್ವಾಮಿ, ಕಾರ್ಣಿಕದ ರಾಮಜ್ಜ, ಕುರುಬ ಸಮಾಜದ ತಾಲೂಕಾಧ್ಯಕ್ಷ ಹೊಸ್ಕೇರಿ ಬೀರಪ್ಪ, ಈಟಿ ಲಿಂಗರಾಜ, ಎಂ. ಪರಮೇಶ್ವರಪ್ಪ, ಪ್ರಮೋದ್‌ ಭಟ್‌, ವೇದಮೂರ್ತಿ, ಪ್ರಭಾವತಿ, ಡಿ. ವಿರೂಪಣ್ಣ, ಪಿ. ಪ್ರಕಾಶ, ದ್ಯಾಮಜ್ಜ, ದ್ಯಾಮಪ್ಪ, ಪಿಎಸ್‌ಐ ಮಣಿಕಂಠ, ನವೀನ ಮಾಲ್ದಾರ, ಈಟಿ ಲಕ್ಷ್ಮಣ, ಈಟಿ ಮಚ್ಚಪ್ಪ ಸೇರಿದಂತೆ ಇತರರಿದ್ದರು.