ಶರಣರ ದಾರಿಯಲ್ಲಿ ಸಾಗಿದರೆ ಸಮಾಜ ಅಭಿವೃದ್ಧಿ: ಎಡಿಸಿ ಶಿವಕುಮಾರ ಶೀಲವಂತ

| Published : Jan 22 2025, 12:32 AM IST

ಸಾರಾಂಶ

ಬೀದರ್ ನಗರದ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯೋತ್ಸವ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್ ಸಮಾಜ ಅಭಿವೃದ್ಧಿಯಾಗಬೇಕು ಎಂದರೇ ಏನು ಮಾಡಬೇಕು ಎನ್ನುವ ವಿಚಾರ ಮಾಡುವಂತಹವರು ನಾವಾಗಬೇಕಿದೆ. ನಮ್ಮಿಂದ ಸಾಧ್ಯವಾದಷ್ಟು ಅಸಹಾಯಕರಿಗೆ ಸಹಾಯ ಮಾಡಬೇಕೆಂದು ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಹೇಳಿದರು.ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಅವರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶರಣರು ಹೇಳಿದ ದಾರಿಯಲ್ಲಿ ನಾವು ಸಾಗಿದಾಗ ಮಾತ್ರ ನಮ್ಮ ಹಾಗೂ ಸಮಾಜ ಅಭಿವೃದ್ಧಿ ಸಾಧ್ಯವಾಗುತ್ತದೆ. ಅಂಬಿಗರ ಚೌಡಯ್ಯ ಸೇರಿದಂತೆ ಎಲ್ಲಾ ಶರಣರು ಬರೆದ ವಚನಗಳಲ್ಲಿನ ಮಹತ್ವ ವನ್ನು ಅರಿಯಬೇಕೆಂದರು.ನಿಜ ಶರಣ ಅಂಬಿಗರ ಚೌಡಯ್ಯ ಭವನಕ್ಕಾಗಿ ನಿವೇಶನ ಮಂಜೂರು ಮಾಡುವಂತೆ ಸಮಾಜದ ವತಿಯಿಂದ ಮನವಿ ಸಲ್ಲಿಸಲಾಗಿದ್ದು, ಈ ಕುರಿತು ಪರಿಶೀಲನೆ ನಡೆಸಿ ಆದಷ್ಟು ಶೀಘ್ರದಲ್ಲಿ ಮಂಜೂರಾತಿಗೆ ಕ್ರಮ ವಹಿಸಲಾಗುವುದು ಎಂದರು.ಬಸವ ಮಹಾಮನೆ ಟ್ರಸ್ಟ್‌ನ ಅಧ್ಯಕ್ಷ ಸಿದ್ದರಾಮ ಶರಣರು ಬೆಲ್ದಾರ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅಂಬಿಗರ ಚೌಡಯ್ಯ ನವರ ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ನ್ಯಾಯ, ನಿಷ್ಠುರದ ಮೂಲಕ ಖಂಡಿಸಿ, ಸಮಾಜದಲ್ಲಿ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಿದ್ದಾರೆ. ಸಮಾಜದ ಬಂಧುಗಳು ದುಶ್ಚಟಗಳಿಗೆ ಬಲಿಯಾಗಬಾರದು. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು. ಪೋಷಕರು ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕೆಂದರು.ಸಚಿವರು, ಸಂಸದರು, ಶಾಸಕರು ಓಟಿಗಾಗಿ, ಜಾತಿ, ಸಂಖ್ಯೆ ಬಲ ನೋಡಿ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ. ಬಡವರ, ದೀನ ದಲಿತರ ಕಾರ್ಯಕ್ರಮಗಳು ಇದ್ದರೆ ಅವರಿಗೆ ಸಭೆ ಸಮಾರಂಭಗಳ ನೆಪವೊಡ್ಡುತ್ತಾರೆ ಎಂದು ಯಾವುದೇ ಜನಪ್ರತಿನಿಧಿಗಳು ಹಾಜರಾಗದ ಹಿನ್ನೆಲೆಯಲ್ಲಿ ಅಸಮಾಧಾನ ಹೊರಹಾಕಿದ್ದರು.ಸಮಾಜದ ಮುಖಂಡ ನಾರಾಯಣ ಭಂಗಿ ಮಾತನಾಡಿದರು. ಇನ್ನು, ಕಾರ್ಯಕ್ರಮಕ್ಕೂ ಮುನ್ನ ನಿಜ ಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರ ಮೆರವಣಿಗೆಯೂ ಜಿಲ್ಲಾಧಿಕಾರಿ ಕಛೇರಿಯಿಂದ ನಗರದ ಪ್ರಮುಖ ಬೀದಿಗಳಿಂದ ಸಾಗಿ ಚನ್ನಬಸವ ಪಟ್ಟದೇವರ ರಂಗಮಂದಿರ ತಲುಪಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಟೋಕರಿ ಕೋಳಿ ಸಮಾಜದ ಅಧ್ಯಕ್ಷ ಜಗನ್ನಾಥ ಜಮಾದಾರ, ಉಪಾಧ್ಯಕ್ಷ ಸುನೀಲ್ ಖಾಶಂಪುರ, ನಿಜಶರಣ ಅಂಬಿಗರ ಚೌಡಯ್ಯ ಯುವಸೇನೆ ಅಧ್ಯಕ್ಷ ಸುನೀಲ್ ಭಾವಿಕಟ್ಟಿ, ಶ್ರೀಕಾಂತ ಬಿ. ಕೋಲಿ, ಮಾರುತಿ ಮಾಸ್ಟರ್, ಚಂದ್ರಕಾಂತ ಹಳ್ಳಿಖೇಡಕರ್, ಷಣ್ಮುಖಪ್ಪ ಶೇಖಪೂರ, ಶರಣಪ್ಪ ಅಣ್ಣಾಜಿ, ಗೋವಿಂದ ಜಾಲಿ, ಇತರರು ಉಪಸ್ಥಿತರಿದ್ದರು.