ಸಾರಾಂಶ
ರಾಣಿಬೆನ್ನೂರು: ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು ಮತ್ತು ನೀರನ್ನು ಸಮರ್ಪಕವಾಗಿ ನಿರ್ವಹಿಸುವ ತಂತ್ರಜ್ಞಾನವನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪ್ರಚಲಿತಗೊಳಿಸುವ ಅವಶ್ಯಕತೆಯಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಡಾ. ಪಿ.ಎಲ್. ಪಾಟೀಲ ಹೇಳಿದರು.
ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 47ನೇ ವೈಜ್ಞಾನಿಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೃಷಿ ತ್ಯಾಜ್ಯ ಸುಡುವುದರ ಬದಲು ಮರುಪೂರಣ ಮಾಡಲು ಧಾರವಾಡ ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿದ ಕಾಂಪೋಸ್ಟ್ ಕಲ್ಚರ್ ಮತ್ತು ವೇಸ್ಟ್-ಡಿ ಕಾಂಪೋಸರ್ ತಂತ್ರಜ್ಞಾನ ಜನಪ್ರಿಯಗೊಳಿಸಿ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಜಾಗೃತಿ ಕಾರ್ಯಕ್ರಮಗಳು ಆಗಬೇಕು. ನಾವೀನ್ಯತೆ ಮತ್ತು ಕೃಷಿ ಉದ್ಯಮಶೀಲತೆ ಯೋಜನೆಯ ಲಾಭವನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.ಬೆಂಗಳೂರಿನ ಅಟಾರಿಯ ಪ್ರಧಾನ ವಿಜ್ಞಾನಿ ಡಾ. ಬಿ.ಟಿ. ರಾಯ್ಡು ಮಾತನಾಡಿ, ಸಮಗ್ರ ಕೃಷಿ ಪದ್ಧತಿಯ ಲಾಭ ರೈತರಿಗೆ ಮನವರಿಕೆಯಾಗಲು ಪ್ರಾತ್ಯಕ್ಷಿಕೆಗಳ ಮೂಲಕ ಜಾಗೃತಿ ಮೂಡಿಸುವ ಅಗತ್ಯತೆಯಿದೆ ಎಂದು ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ಡಾ. ಮಲ್ಲಿಕಾರ್ಜುನ ಕೆ. ಮಾತನಾಡಿ, ಜಿಲ್ಲೆಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಇಲಾಖೆಯಿಂದ ರೈತರಿಗೆ ಇರುವ ಯೋಜನೆಗಳಿಗೆ ಕೃಷಿ ವಿಜ್ಞಾನ ಕೇಂದ್ರದಿಂದ ತಾಂತ್ರಿಕ ಸಲಹೆ ನೀಡುವ ಅಗತ್ಯವಿದೆ ಎಂದರು.ಧಾರವಾಡ ಕೃಷಿ ವಿಶ್ವವಿದ್ಯಾಲಯ ವಿಸ್ತರಣಾ ನಿರ್ದೇಶಕ ಡಾ. ಆರ್. ಬಸವರಾಜಪ್ಪ, ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯ ಡೀನ್ ಹಾಗೂ ಆವರಣ ಮುಖ್ಯಸ್ಥ ಡಾ. ಜೆ.ಎಸ್. ಹಿಳ್ಳಿ, ಪ್ರಗತಿಪರ ರೈತ ಹಾಗೂ ಸಮಿತಿ ಸದಸ್ಯ ಶಂಕರಗೌಡ ಪಾಟೀಲ, ಕೃಷಿ ಉದ್ದಿಮೆದಾರರು ಹಾಗೂ ಸಮಿತಿ ಸದಸ್ಯೆ ಮಧುರಾ ನವಲೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಹಾವೇರಿಯ ಕೃಷಿ ವಿಜ್ಞಾನ ಕೇಂದ್ರ ಅಭಿವೃದ್ಧಿಪಡಿಸಿರುವ ವಿವಿಧ ಹಸ್ತಪ್ರತಿಗಳು ಮತ್ತು ಕಿರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.ಡಾ. ಎಸ್.ಎಲ್. ಪಾಟೀಲ, ಡಾ. ಎಸ್.ಎ. ಗದ್ದನಕೇರಿ, ಡಾ. ನಾಗರಾಜು ಪಿ., ರಂಗನಾಥ ಎಸ್., ಶಂಕರಪ್ಪ ಅರಿಕಟ್ಟಿ, ಡಾ. ಎಸ್.ವಿ. ಸಂತಿ, ನರ್ಮದಾ ಎಂ. ಹಾಗೂ ಕೃಷಿ ವಿಜ್ಞಾನ ಕೇಂದ್ರದ ಎಲ್ಲ ವಿಜ್ಞಾನಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.