ದಾಬಸ್‍ಪೇಟೆ: ಮಾಗಡಿ ತಾಲೂಕಿನಿಂದ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಿದ ಪರಿಣಾಮ ಈ ಭಾಗದ ಜನತೆಗೆ ಕೊಟ್ಟ ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು

ದಾಬಸ್‍ಪೇಟೆ: ಮಾಗಡಿ ತಾಲೂಕಿನಿಂದ ಸೋಲೂರು ಹೋಬಳಿಯನ್ನು ನೆಲಮಂಗಲ ತಾಲೂಕಿಗೆ ಸೇರ್ಪಡೆ ಮಾಡಿದ ಪರಿಣಾಮ ಈ ಭಾಗದ ಜನತೆಗೆ ಕೊಟ್ಟ ಭರವಸೆ ಈಡೇರಿಸಿ ನುಡಿದಂತೆ ನಡೆದಿದ್ದೇನೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು.

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ನಲ್ಲಿ ಸೋಲೂರು ಹೋಬಳಿಯ 178 ಜನವಸತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ 50 ಕೋಟಿ ವೆಚ್ಚದ ಪೈಪ್‍ಲೈನ್ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸೋಲೂರು ಹೋಬಳಿಗೆ ಕಾವೇರಿ ಹಾಗೂ ಎತ್ತಿನಹೊಳೆ ಜಲಮೂಲಗಳಿಂದ ನೀರು ಬರಲಿದೆ. 3.5ಎಂಎಲ್ ಡಿ ಕಾವೇರಿ ನೀರು ಬರಲಿದೆ. ಎತ್ತಿನಹೊಳೆ ನೀರು 2027ರ ಡಿಸೆಂಬರ್ ವೇಳೆಗೆ ನಮ್ಮ ಜಿಲ್ಲೆಗೆ ಬರಲಿದೆ. ಇನ್ನೂ ಹೆಚ್ಚಿನ ನೀರು ಹರಿಸುವಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿದ್ದೇನೆ ಎಂದರು.

ನೆಲಮಂಗಲ ತಾಲೂಕಿಗೆ ಸೋಲೂರು ಸೇರ್ಪಡೆ ಬೆನ್ನಲ್ಲೆ ಸೋಲೂರು ಜನರು ಕಾವೇರಿ ನೀರು ಕುಡಿಯುವ ಅದೃಷ್ಟ ಲಭಿಸಿದೆ. ಕಾವೇರಿ ನೀರು ರಾಮನಗರದ ಮೂಲಕ ಮಾಗಡಿಯ ಮಂಚಿನಬೆಲೆ ಜಲಾಶಯಕ್ಕೆ ಬರಲಿದೆ. ಆನಂತರ ಮಾಗಡಿ ಮೂಲಕ ಸೋಲೂರು ಗ್ರಾಮಗಳಿಗೆ ತಲುಪಲಿದೆ. ಇನ್ನೊಂದು ವರ್ಷದೊಳಗೆ ಕಾಮಗಾರಿ ಮುಗಿದು ಸೋಲೂರು ಹೋಬಳಿಯ ಜನತೆ ಕಾವೇರಿ ನೀರು ಕುಡಿಯಲಿದ್ದಾರೆ ಎಂದರು.

ಸೋಲೂರು ಜನರಿಗೆ ಬಹಳಷ್ಟು ಅನುಕೂಲ : ಸೋಲೂರು ಹೋಬಳಿಗೆ ಯಾವುದೇ ಶಾಶ್ವತ ನೀರಿನ ವ್ಯವಸ್ಥೆಗಳಿಲ್ಲ. ಅಭಿವೃದ್ಧಿಯೇ ಕಾಣದ ಜನರರು, ಶಾಶ್ವತ ನೀರಿನ ಬೇಡಿಕೆಯ ಕನಸನ್ನು ಮರೆತು ಹೋಗಿದ್ದರು. ಈಗ ಗ್ರಾಮ ಗ್ರಾಮಕ್ಕೆ ಕಾವೇರಿ ಕುಡಿಯುವ ಸೋಲೂರಿನ 178 ಜನವಸತಿಗಳಿಗೆ ರಾಮನಗರದ ಮೂಲಕ ಮಾಗಡಿಯ ಮಂಚಿನಬೆಲೆ ಡ್ಯಾಮ್ ನಿಂದ ಕಾವೇರಿ ನೀರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಬರಲಿದ್ದು, ಸೋಲೂರು ಜನರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

ಏ.13ರಿಂದ ಅಧೀಕೃತವಾಗಿ ಸೋಲೂರು ಹೋಬಲಿ ನೆಲಮಂಗಲಕ್ಕೆ ಸೇರ್ಪಡೆಯಾಗಲಿದೆ. ಅದಾದ ನಂತರ ದಿನಾಂಕ ನಿಗದಿಪಡಿಸಿ, ಎರಡು ಜಿಲ್ಲೆಯ ಉಸ್ತುವಾರಿಗಳಾದ ಕೆ.ಎಚ್.ಮುನಿಯಪ್ಪ, ರಾಮಲಿಂಗಾರೆಡ್ಡಿ ಅವರಿಂದಲೇ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಈಗಾಗಲೇ ಕಂದಾಯ ಇಲಾಖೆಯ ಭೂಮಿಯಲ್ಲಿ ಬದಲಾವಣೆಯಾಗಿದೆ. ಮುಂದಿನ ದಿನಗಳಲ್ಲಿ ಇಲಾಖಾವಾರು ಬದಲಾವಣೆಯಾಗಲಿವೆ ಎಂದರು.

100 ಹಾಸಿಗೆಯ ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ ಈ ಹಿಂದೆ 2-3 ಸ್ಥಳಗಳನ್ನು ಗುರುತಿಸಲಾಗಿತ್ತು ಆ ಸ್ಥಳಗಳು ತಾಂತ್ರಿಕವಾಗಿ ತೊಂದರೆಯಾಯಿತು. ಈ ಹಿಂದೆ ನೋಡಿದ ಜಾಗಕ್ಕೆ ಎಸ್ಟಿಮೇಟ್ ಆಗಿತ್ತು. ಇವಾಗ ಬೇರೆ ಎಸ್ಟಿಮೇಟ್ ನಡೆಯುತ್ತಿದ್ದು, ಜಾಗವನ್ನು ಶೀಘ್ರದಲ್ಲಿ ಅಂತಿಮಗೊಳಿಸಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಎನ್‍ಪಿಎ ಮಾಜಿ ಅಧ್ಯಕ್ಷ ನಾರಾಯಣಗೌಡ, ನಗರಸಭೆ ಅಧ್ಯಕ್ಷ ಗಣೇಶ್, ಸೋಲೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗರುದ್ರಶರ್ಮಾ, ಮಾಜಿ ಅಧ್ಯಕ್ಷ ರಂಗಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಗಂಗರಂಗಯ್ಯ, ಮಾಜಿ ಸದಸ್ಯ ಹನುಮಂತರಾಜು, ವೀರಶೈವ ಮುಖಂಡ ಶಂಕರಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಹನುಮಂತರಾಜು, ಮುಖಂಡ ಸಿಎಂಗೌಡ, ಕೃಷ್ಣಪ್ಪ ಇತರರಿದ್ದರು.

ಪೋಟೋ 1 :

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್‌ನಲ್ಲಿ ಸೋಲೂರು ಹೋಬಳಿಯ 178 ಜನವಸತಿಗಳಿಗೆ ಬಹುಗ್ರಾಮ ಕುಡಿವ ನೀರಿನ ಯೋಜನೆ ಪೈಪ್‍ಲೈನ್ ಕಾಮಗಾರಿಗೆ ಶಾಸಕ ಶ್ರೀನಿವಾಸ್ ಚಾಲನೆ ನೀಡಿದರು.