ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮೊಗಲರ ಆಳ್ವಿಕೆ ವೇಳೆ ದಾಳಿಗೊಳಗಾಗಿ ಸಾವಿರಾರು ವರ್ಷಗಳಿಂದ ಕಣ್ಮರೆಯಾಗಿದೆ ಎಂದು ನಂಬಲಾಗಿದ್ದ ಮೂಲ ಸೋಮನಾಥ ಜ್ಯೋತಿರ್ಲಿಂಗದ ಅಪರೂಪದ ದರ್ಶನಕ್ಕೆಕ ಚಿತ್ರದುರ್ಗದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಶ್ವೇತಾ ಲಮಾಣಿ ತಿಳಿಸಿದರು.

ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮೇ 2 ರಂದು ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಬೆಳಗ್ಗೆ 7.30 ರಿಂದ ಮಧ್ಯಾಹ್ನ 12.30 ರವರೆಗೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಈ ಲಿಂಗಗಳನ್ನು ದರ್ಶನಕ್ಕೆ ಇಡಲಾಗುತ್ತಿದೆ.

ಈ ಅಮೂಲ್ಯ ಲಿಂಗಗಳಿಗೆ ಪ್ರಾಚೀನ ವೇದ ವಿಧಿಯಾದ ರುದ್ರಾಭಿಷೇಕ ನಡೆಯಲಿದೆ. ನಂತರ ಸತ್ಸಂಗ ನಡೆಯಲಿದೆ. ಕ್ರಿ.ಶ. 1026 ರಲ್ಲಿ ಘಜ್ನಿಯ ಮಹಮ್ಮದ್ ನಡೆಸಿದ ದಾಳಿಯ ಸಮಯದಲ್ಲಿ ಧ್ವಂಸಗೊಂಡು ಕಣ್ಮರೆಯಾಗಿವೆ ಎಂದು ನಂಬಲಾಗಿದ್ದ ಈ ಅವಶೇಷಗಳು, ಸಾವಿರ ವರ್ಷಗಳ ಕಾಲ ರಹಸ್ಯವಾಗಿ ಸಂರಕ್ಷಿಸಲ್ಪಟ್ಟಿದ್ದವು. ಈ ಅಂಶಗಳನ್ನು ದಕ್ಷಿಣ ಭಾರತಕ್ಕೆ ದೈವಭಕ್ತ ಅಗ್ನಿಹೋತ್ರಿ ಬ್ರಾಹ್ಮಣರ ವಂಶಸ್ಥರು ತಂದಿದ್ದಾರೆ. ಲಿಂಗಗಳ ಪ್ರಸ್ತುತ ಸಂರಕ್ಷಕರು ಲಿಂಗಗಳನ್ನು ಮತ್ತೆ ಅದರ ಪೂರ್ಣ ವೈಭವಕ್ಕೆ ಹಿಂದಿರುಗಿಸಲು ತೀರ್ಮಾನಿಸಿದ್ದಾರೆ. ಈ ಐತಿಹಾಸಿಕ ಕ್ಷಣವನ್ನು ಮುನ್ನಡೆಸಲು ರವಿಶಂಕರ್ ಗುರೂಜಿ ತೀರ್ಮಾನಿಸಿದ್ದಾರೆ.

​​2007ರಲ್ಲಿ ಈಶ್ವರ ತುಂಡುಗಳ ಮೇಲೆ ನಡೆದ ಭೂವೈಜ್ಞಾನಿಕ ಅಧ್ಯಯನದಲ್ಲಿ ಆಶ್ಚರ್ಯಕರ ವಿಷಯವೊಂದು ಕಂಡುಬಂತು. ಸಾಮಾನ್ಯ ಅಯಸ್ಕಾಂತಗಳಿಗಿಂತ ವಿಭಿನ್ನವಾಗಿ, ಈ ಕಲ್ಲಿನ ತುಂಡುಗಳ ಮಧ್ಯಭಾಗದಲ್ಲಿ ಬಲವಾದ ಕಾಂತೀಯ ಕ್ಷೇತ್ರವಿತ್ತು. ಕಲ್ಲುಗಳಲ್ಲಿ ಕಬ್ಬಿಣದ ಪ್ರಮಾಣ ತುಂಬಾ ಕಡಿಮೆ ಇತ್ತು. ಈ ರೀತಿಯ ಕಲ್ಲಿನ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ ಎಂದರು.


ಸಂಸ್ಥೆಯ ಮಂಜುನಾಥ್ ಮಾತನಾಡಿ, ಎಲ್ಲರಿಗೂ ಇದರ ದರ್ಶನ ಸಿಗಲಿ ಎನ್ನುವ ಉದ್ದೇಶದಿಂದ ದೇಶದ ಮೂಲೆ ಮೂಲೆಗಳಿಗೂ ಜ್ಯೋತಿರ್ಲಿಂಗ ತೆಗೆದುಕೊಂಡು ಹೋಗಲಾಗುತ್ತಿದೆ.ಇದರೊಟ್ಟಿಗೆ ಆಶ್ರಮದಿಂದ ಆನಂದದ ಅನುಭೂತಿಯ ಶಿಬಿರಗಳನ್ನು ಜೊತೆಗೆ ಮಾಡಲಾಗುತ್ತಿದೆ.ಮಕ್ಕಳು ದಿನಕ್ಕೆ 400 ಸಲ ನಗುತ್ತಾರೆ. ದೊಡ್ಡವರು ನಗುವುದನ್ನು ಕಡಿಮೆ ಮಾಡಿದ್ದಾರೆ. ಒತ್ತಡದಿಂದ ಸಿಟ್ಟು ಸೆಡವಿನಿಂದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ನಮ್ಮೊಳಗೆ‌ ನಾವು ಸಂಚಾರ ಮಾಡಿ ಯೋಗ, ಪ್ರಾಣಾಯಾಮ, ಧ್ಯಾನ ಮಾಡಿಸಲಾಗುತ್ತಿದೆ ಎಂದರು.

ಡಾ.ರವಿಚಂದ್ರ ಮಾತನಾಡಿ, ಇತ್ತೀಚೆಗೆ ಯುವಕರಲ್ಲಿ ಹೃದಯಾಘಾತ, ಒತ್ತಡ ಇತ್ತೀಚೆಗೆ ಹೆಚ್ಚಾಗುತ್ತಿದೆ.‌ ಇದರ ನಿವಾರಣೆಗೆ ಧ್ಯಾನ ಮಾಡಬೇಕು ಎನ್ನುವುದು ಸಾಮಾನ್ಯ. ಇದನ್ನು ರವಿಶಂಕರ್ ಗುರೂಜಿ ಸುಲಭವಾಗಿ ಅರ್ಥವಾಗಲು ಪ್ಯಾಕೇಜ್ ಮಾದರಿಯಲ್ಲಿ ಕಲಿಸುವ ಕಾರ್ಯಕ್ರಮ ಮಾಡುತ್ತಿದ್ದಾರೆ. ಇದನ್ನು ಕಲಿತು ಅನುಸರಿಸುವುದರಿಂದ ಜೀವನದ ಉತ್ಪಾಧಕತೆ ಹೆಚ್ಚಾಗುತ್ತದೆ ಎಂದು ವಿವರಿಸಿದರು. ಶಿಕ್ಷಕ ರಾಜಶೇಖರ್, ಸಮಿತಿ ಮುಖ್ಯಸ್ಥ ಮಹಾಂತೇಶ್, ಅರವಿಂದ್, ಮಲ್ಲಿಕಾರ್ಜುನ್, ಪ್ರಾಜೆಕ್ಟ್ ಭಾರತ್ ಕರ್ನಾಟಕ ಮುಖ್ಯಸ್ಥ ಮಂಜುನಾಥ್ ಇದ್ದರು.