ಸೋಮವಾರಪೇಟೆ: ತಾಲೂಕಿನಾದ್ಯಂತ ಗುರುವಾರ ಬಿಟ್ಟು ಬಿಟ್ಟು ಭಾರಿ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಜನರ ಪರದಾಡುವಂ ಸ್ಥಿತಿ ನಿರ್ಮಾಣವಾಗಿದೆ.

ಸೋಮವಾರಪೇಟೆ: ತಾಲೂಕಿನಾದ್ಯಂತ ಗುರುವಾರ ಬಿಟ್ಟು ಬಿಟ್ಟು ಭಾರಿ ಮಳೆಯಾಗುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಜನರ ಪರದಾಡುವಂ ಸ್ಥಿತಿ ನಿರ್ಮಾಣವಾಗಿದೆ.ಬುಧವಾರದಿಂದಲೂ ಭಾರಿ ಗಾಳಿಯೊಂದಿಗೆ ಮಳೆ ಸುರಿಯುತ್ತಿದ್ದು, ವಿದ್ಯುತ್ ಮಾರ್ಗದ ಮೇಲೆ ಮರಗಳು ಬೀಳುತ್ತಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಕುಡಿಯುವ ನೀರು ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ಸಮಸ್ಯೆಯಾಗಿರುವುದಾಗಿ ಸ್ಥಳೀಯರು ತಿಳಿಸಿದರು. ವಿದ್ಯಾರ್ಥಿಗಳಿಗೆ ಸಿಇಟಿಯಲ್ಲಿ ಕಾಲೇಜನ್ನು ಆಯ್ಕೆ ಮಾಡಲು ಗುರುವಾರ ಬೆಳಗ್ಗೆ ೧೦ಕ್ಕೆ ಕೊನೆಯಾಗಿದ್ದು, ವಿದ್ಯುತ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಪರದಾಡುವಂತಾಯಿತು.

ಕೂತಿ ಗ್ರಾಮದಲ್ಲಿ ಮಾರ್ಗದ ಮೇಲೆ ಬೃಹತ್ ಮರವೊಂದು ಉರುಳಿಬಿದ್ದು, ಸ್ಥಳೀಯರು ತೆರವಿನ ಕಾರ್ಯ ಮಾಡಿದರು. ಶಾಂತಳ್ಳಿಯಿಂದ ಬೆಟ್ಟದಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ವಿದ್ಯುತ್ ಮಾರ್ಗದ ಮೇಲೆ ಮರ ಬಿದ್ದಿದ್ದರಿಂದ ಹಲವು ವಿದ್ಯುತ್ ಕಂಬಗಳು ನೆಲಕ್ಕುರುಳಿದವು. ಮೊದಲೇ ವಿದ್ಯುತ್ ಸಮಸ್ಯೆ ಎದುರಿಸುತ್ತಿರುವ ಸ್ಥಳೀಯರು, ಈ ಘಟನೆಯಿಂದ ಮತ್ತೂ ತಡವಾಗಿ ವಿದ್ಯುತ್ ಸಂಪರ್ಕ ಪಡೆಯುವಂತಾಗಿದೆ. ಚೌಡ್ಲು ಗ್ರಾಮದ ಕುವೆಂಪು ವಿದ್ಯಾಸಂಸ್ಥೆಯ ಬಳಿಯಲ್ಲಿ ರಸ್ತೆಯತ್ತ ಬಾಗುತ್ತಿದ್ದ ಮರವನ್ನು ಅರಣ್ಯ ಇಲಾಖೆಯವರು ತೆರಳಿ ತುಂಡರಿಸಿದರು.

ಪಟ್ಟಣದ ಆನೆಕೆರೆ ಬಳಿಯ ಪಾರ್ಕ್ನಲ್ಲಿ ಬೃಹತ್ ಮರವೊಂದು ಉರುಳಿದ್ದು, ಯಾವುದೇ ಅಪಾಯ ಎದುರಾಗಲಿಲ್ಲ. ಮಲ್ಲಳ್ಳಿ ಜಲಪಾತ, ಮೇದುರ ಜಲಪಾತ, ಜ್ಞಾನ ಗಂಗ, ಅಬ್ಬಿ ಜಲಪಾತ ಸೆರಿದಂತೆ ಭಾರಿ ಮಳೆಯಿಂದ ತುಂಬಿ ಹರಿಯುತ್ತಿವೆ. ಅಕ್ಕಪಕ್ಕದ ಹೊಳೆ ತೊರೆಗಳು ತುಂಬಿ ಹರಿಯುತ್ತಿದ್ದು, ಕೆಲವು ಮನೆಗಳಿಗೆ ಹಾನಿಯಾಗಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸೋಮವಾರಪೇಟೆಗೆ ತಾಲೂಕಿಗೆ ಸರಾಸರಿ ೫.೬೨ ಸೆಂಟೀ ಮೀಟರ್ ಮಳೆಯಾಗಿದೆ. ಶಾಂತಳ್ಳಿ ಹೋಬಳಿಗೆ ೮.೩, ಕೊಡ್ಲಿಪೇಟೆ ೫.೫, ಸೋಮವಾರಪೇಟೆ ೪.೪ ಹಾಗೂ ಶನಿವಾರಸಂತೆ ಹೋಬಳಿಗೆ ೪.೩ ಸೆಂಟೀ ಮೀಟರ್ ಮಳೆಯಾಗಿದೆ.