ಬೆಳ್ತಂಗಡಿ: ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಊರು ಬೆಳ್ತಂಗಡಿ ತಾಲೂಕಿನ ಸೋಣಂದೂರು ಗ್ರಾಮದ ಪೂಮ್ಮಾಜೆ. ಇಲ್ಲಿನ ನಾಗರಿಕರ ಹೆಚ್ಚಿನ ಸಮಸ್ಯೆ ಎಂದರೆ ಮೊಬೈಲ್ ನೆಟ್ವರ್ಕ್.ಪೂಮ್ಮಾಜೆ- ಪಣಕಜೆ ಭಾಗದಲ್ಲಿ ಏರ್‌ಟೆಲ್ ಹಾಗೂ ಬಿಎಸ್‌ಎನ್‌ಎಲ್ ಮೂರು ಟವರ್ ಗಳಿದ್ದರೂ ಜನತೆಗೆ ಯಾವ ಪ್ರಯೋಜನಕ್ಕೂ ಇಲ್ಲದಂತಾಗಿದೆ. ಗ್ರಾಹಕರು ಈ ಟವರ್‌ಗಳ ಅಡಿಯಲ್ಲಿ ನಿಂತರೂ ನೆಟ್ವರ್ಕ್ ಸಿಗದಿರುವುದು ವಿಶ್ವದ ವಿಚಿತ್ರ ಸಂಗತಿಗಳಲ್ಲಿ ಒಂದು.

ಇಂತಹ ವಿಸ್ಮಯಕ್ಕೆ ಪಣಕಜೆಯ ಈ ಮೂರೂ ಟವರ್ ಗಳು ಸೇರ್ಪಡೆಯಾಗಿದೆಯೋ ಅನ್ನುವ ಸಂಶಯ ಕಾಡುತ್ತಿದೆ. ಉದ್ಯೋಗಿಗಳಿಗೆ, ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ, ಅಧ್ಯಾಪಕರಿಗೆ ಈ ನೆಟ್ವರ್ಕ್ ಸಮಸ್ಯೆಯಿಂದ ಆಗುವ ತೊಂದರೆ ಅಷ್ಟಿಷ್ಟಲ್ಲ. ಆನ್‌ಲೈನ್ ನಲ್ಲಿ ಆರ್ಡರ್ ಮಾಡಿದ ವಸ್ತುಗಳನ್ನು ಡೆಲಿವೆರಿ ಬಾಯ್ ಗಳುತಂದು ಆರ್ಡರ್ ಮಾಡಿದವರಿಗೆ ತಲುಪಿಸೋಣ ಅಂದರೆ ಮನೆಯ ಮುಂಭಾಗಕ್ಕೆ ಬಂದರೂ ನೆಟ್‌ವರ್ಕ್ ಇಲ್ಲ. ಇನ್ನು ಸಂಬಂಧಪಟ್ಟ ಕಂಪನಿಯ ಅಧಿಕಾರಿಗಳಿಗೆ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ಊಟಕ್ಕಿಲ್ಲದ ಉಪ್ಪಿನಕಾಯಿಯಂತೆ ಆಗಿದೆ ವ್ಯವಸ್ಥೆ. ಆದ್ದರಿಂದ ಸಂಬಂಧಪಟ್ಟವರು ಪೊಮ್ಮಾಜೆಯ ಆಸುಪಾಸಿನ ನಾಗರಿಕರಿಗೆ ಆಗುವ ಈ ತೊಂದರೆಯನ್ನು ಆದಷ್ಟು ಬೇಗ ನಿವಾರಿಸಬೇಕಾಗಿದೆ.