ಸಾರಾಂಶ
ಶಿಕ್ಷಕರ ಮತ್ತು ಪದವೀಧರರ ಸ್ವಾಭಿಮಾನದ ಸಂಕೇತವಾಗಿ ಈ ಬಾರಿಯ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಹರೀಶ್ ಆಚಾರ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಮಂಗಳೂರು
ನೈಋತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ.ಎಸ್. ಆರ್. ಹರೀಶ್ ಆಚಾರ್ಯ ಬುಧವಾರ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಅಧ್ಯಕ್ಷ ಡಾ. ಹನುಮಂತಪ್ಪ ಕಲ್ಮನಿ, ಜಿಲ್ಲಾ ಅಧ್ಯಕ್ಷ ಮನಮೋಹನ್ ಬಳ್ಳಡ್ಕ, ಶಿಕ್ಷಕ ಸಂಘಟನೆಯ ಪ್ರಮುಖರಾದ ರಂಜಿತ್ ಪಿ.ಜೆ., ಡಾ.ಅರುಣ್ ಕುಮಾರ್ ಮತ್ತು ನಿತೇಶ್ ಸಾಲಿಯಾನ್ ಇದ್ದರು.ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ರಾಜಕೀಯ ಪಕ್ಷಗಳು ಕರಾವಳಿ ಜಿಲ್ಲೆಗಳ ಶಿಕ್ಷಕರ ಹಾಗೂ ಪದವೀಧರರ ಅಸ್ತಿತ್ವವನ್ನೇ ನಿರಾಕರಿಸಿದಂತಾಗಿದೆ. ಆದ್ದರಿಂದ ಶಿಕ್ಷಕರ ಮತ್ತು ಪದವೀಧರರ ಸ್ವಾಭಿಮಾನದ ಸಂಕೇತವಾಗಿ ಈ ಬಾರಿಯ ನೈಋತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದರು.