ಸಾರಾಂಶ
ಹುಬ್ಬಳ್ಳಿ: ಪ್ರಸಕ್ತ ಸಾಲಿನ ಹಣಕಾಸು ವರ್ಷದ 9 ತಿಂಗಳಲ್ಲಿ ನೈಋತ್ಯ ರೈಲ್ವೆ ವಲಯ ₹ 6001 ಕೋಟಿ ಆದಾಯ ಗಳಿಸಿದೆ ಎಂದು ವಲಯದ ಮಹಾಪ್ರಬಂಧಕ ಅರವಿಂದ ಶ್ರೀವಾಸ್ತವ ಹೇಳಿದರು.
ಇಲ್ಲಿನ ರೈಲ್ವೆ ಇನ್ಸ್ಟಿಟ್ಯೂಟ್ ಸೌತ್ ಗ್ರೌಂಡ್ನಲ್ಲಿ ವಲಯದ ವತಿಯಿಂದ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
9 ತಿಂಗಳಲ್ಲಿ ಪ್ರಯಾಣಿಕರ ಆದಾಯ ₹2,354.21 ಕೋಟಿ ಆಗಿದ್ದರೆ, ಇನ್ನು ಸರಕು ಸಾಗಾಟದಿಂದ ₹3,264.76 ಕೋಟಿ ಆದಾಯವಾಗಿದೆ. ಪಾರ್ಸೆಲ್ ಆದಾಯ ₹126.49 ಕೋಟಿಗೆ ತಲುಪಿದೆ. ಸ್ಕ್ರ್ಯಾಪ್ ಮಾರಾಟದಲ್ಲಿ ಸಹ ಗಮನಾರ್ಹ ಬೆಳವಣಿಗೆಯಾಗಿದ್ದು ₹95 ಕೋಟಿಗಳಿಂದ ₹148 ಕೋಟಿಗೆ ಏರಿಕೆಯಾಗಿದೆ ಎಂದು ವಿವರಿಸಿದರು.
ನೈಋತ್ಯ ರೈಲ್ವೆ 32.38 ಮಿಲಿಯನ್ ಟನ್ ಸರಕನ್ನು ಯಶಸ್ವಿಯಾಗಿ ಲೋಡ್ ಮಾಡಿದೆ. ಆಹಾರ ಧಾನ್ಯಗಳಲ್ಲಿ ಶೇ. 464.3, ಖನಿಜ ತೈಲದಲ್ಲಿ ಶೇ.11.1, ರಸಗೊಬ್ಬರಗಳಲ್ಲಿ ಶೇ. 9.7 ಮತ್ತು ಕಂಟೇನರ್ ಸರಕುಗಳಲ್ಲಿ ಶೇ.8 ಹೆಚ್ಚಾಗಿದೆ. ಪ್ರತಿದಿನ ಸರಾಸರಿ 57.7 ರೈಲುಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಹೇಳಿದರು.
₹485 ಕೋಟಿ ವೆಚ್ಚದಲ್ಲಿ 1,568 ರೂಟ್ ಕಿ ಮೀ ಕವಚ್ ವ್ಯವಸ್ಥೆ ಸ್ಥಾಪಿಸಲಾಗಿದೆ. 2,148 ರೂಟ್ ಕಿಮೀಗೆ ಅನುಮೋದನೆ ನೀಡಲಾಗಿದೆ.
ಸೌರ ವಿದ್ಯುತ್ ಉಪಕ್ರಮಗಳ ಮೂಲಕ 382.65 ಕಿಲೋವ್ಯಾಟ್ ಶಕ್ತಿಯು ಕಾರ್ಯಾರಂಭಗೊಂಡಿದೆ, ಇದರಿಂದ ಒಟ್ಟು ಸಾಮರ್ಥ್ಯ 6.7 ಮೆಗಾವ್ಯಾಟ್ಗೆ ತಲುಪಿದ್ದು, ₹2.81 ಕೋಟಿಯ ಉಳಿತಾಯವಾಗಿದೆ ಎಂದು ವಿವರಿಸಿದರು.
ಗಣರಾಜ್ಯೋತ್ಸವ ಆಚರಣೆಯಲ್ಲಿ ಶ್ವಾನದಳ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ರೈಲ್ವೆಗೆ ವಿಪತ್ತು ನಿರ್ವಹಣೆಯಲ್ಲಿ ಸನ್ನದ್ಧತೆ ಪ್ರದರ್ಶಿಸಲು ನಾಗರಿಕ ರಕ್ಷಣಾ ಇಲಾಖೆ ನಡೆಸಿದ ಅಣಕು ಪ್ರದರ್ಶನ ಒಳಗೊಂಡಿದ್ದವು. ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಜೈನ್, ಹುಬ್ಬಳ್ಳಿ ಡಿಆರ್ಎಂ ಬೇಲಾ ಮೀನಾ, ಇತರೆ ವಿಭಾಗಗಳ ಪ್ರಧಾನ ಮುಖ್ಯಸ್ಥರು ಉಪಸ್ಥಿತರಿದ್ದರು. ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ನಮಿತಾ ಶ್ರೀವಾಸ್ತವ ಮತ್ತು ಇತರರು ಉಪಸ್ಥಿತರಿದ್ದರು.