ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಕರ್ನಾಟಕ ವಿಧಾನ ಪರಿಷತ್ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಈಗಾಗಲೇ ಅರ್ಹ ಶಿಕ್ಷಕ ಮತದಾರರ ಪರಿಷ್ಕರಣೆ ನಡೆಸಿ ಡಿಸೆಂಬರ್ 30 ರಂದು ಅರ್ಹ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.ಮೇ 6 ರ ಸಂಜೆ 50 ಗಂಟೆವರೆಗೆ ಅರ್ಹ ಶಿಕ್ಷಕರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಹತೆ ಹೊಂದಿರುವ ಶಿಕ್ಷಕರು ಅಥವಾ ಹೆಸರು ಬಿಟ್ಟು ಹೋಗಿರುವವರು ಆಯಾ ತಾಲೂಕು ಕಚೇರಿಗಳಲ್ಲಿ ನೋಂದಾಯಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷದ ಮುಖಂಡರ ಸಭೆ ನಡೆಸಿ ಮಾತನಾಡಿ, ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳಪಟ್ಟಿ ಪ್ರಕಟವಾಗಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರು ಚುನಾವಣಾಧಿಕಾರಿಗಳಾಗಿದ್ದು, ಮೇ 9 ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು ಎಂದರು.ಚುನಾವಣೆಯಲ್ಲಿ ಸ್ಪರ್ಧೆ ಮಾಡಬಯಸುವ ಅಭ್ಯರ್ಥಿಗಳು ಮೈಸೂರು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ನಾಮಪತ್ರ ನಮೂನೆ ಪಡೆದುಕೊಂಡು ಮೇ 16 ರೊಳಗೆ ಸಲ್ಲಿಸಬಹುದು. ಮೇ 17 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಮೇ 20 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ ಎಂದು ಹೇಳಿದರು.
ಜೂನ್ 3 ರಂದು ಬೆಳಗ್ಗೆ 8 ರಿಂದ 4 ರವರೆಗೆ ಮತದಾನ ನಡೆಯಲಿದೆ. ಜೂನ್ 6 ರಂದು ಮತ ಎಣಿಕೆ ನಡೆಯಲಿದೆ. ಎಲ್ಲ ಚುನಾವಣೆ ಪ್ರಕ್ರಿಯೆಗಳು ಜೂನ್ 12 ರಂದು ಪೂರ್ಣಗೊಳ್ಳುತ್ತದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳು ಒಳಪಡುತ್ತದೆ ಎಂದರು.ಜಿಲ್ಲೆಯಲ್ಲಿ 8 ಮತಕೇಂದ್ರಗಳಿದ್ದು ಅಂತಿಮ ಮತದಾರರ ಪಟ್ಟಿಯ ಪ್ರಕಾರ ಈವರೆಗೆ 4860 ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೊಂದಣಿ ಮಾಡಿಕೊಂಡಿದ್ದಾರೆ. ಕೆ.ಆರ್.ಪೇಟೆ ಗಂಡು - 295, ಹೆಣ್ಣು - 132 ಒಟ್ಟು 427 ಮತದಾರರು, ನಾಗಮಂಗಲ - ಗಂಡು - 268, ಹೆಣ್ಣು - 132, ಒಟ್ಟು - 400 ಮತದಾರರು, ಪಾಂಡವಪುರ ಗಂಡು - 228, ಹೆಣ್ಣು - 167, ಒಟ್ಟು - 395 ಮತದಾರರು, ಮದ್ದೂರು - ಗಂಡು - 502, ಹೆಣ್ಣು - 373, ಒಟ್ಟು - 875 ಮತದಾರರು, ಶ್ರೀರಂಗಪಟ್ಟಣ ಗಂಡು - 182, ಹೆಣ್ಣು - 201, ಒಟ್ಟು - 383 ಮತದಾರರು, ಮಳವಳ್ಳಿ ಗಂಡು - 419, ಹೆಣ್ಣು - 192, ಒಟ್ಟು - 611 ಮತದಾರರು ಹಾಗೂ ಮಂಡ್ಯ ಮಿನಿ ವಿಧಾನಸೌಧ ಮತ ಕೇಂದ್ರ ಗಂಡು - 534, ಹೆಣ್ಣು - 555, ಒಟ್ಟು - 1089, ಮತದಾರರು, ಮಂಡ್ಯ ತಾಪಂ ಸಾಮರ್ಥ್ಯ ಸೌಧ ಮತ ಕೇಂದ್ರ ಗಂಡು - 389, ಹೆಣ್ಣು - 291, ಒಟ್ಟು - 680, ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದರು.
ಸಭೆಯಲ್ಲಿ ಡಿಡಿಪಿಐ ಎಚ್.ಶಿವರಾಮೇಗೌಡ, ಚುನಾವಣಾ ತಹಸೀಲ್ದಾರ್ ವೆಂಕಟಾಚಲಪತಿ, ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ವಿವಿಧ ಪಕ್ಷದ ಮುಖಂಡರುಗಳಾದ ನವೀನ್ ಕುಮಾರ್, ಬೊಮ್ಮಯ್ಯ, ಚಿದಂಬರ್, ರಮೇಶ್, ದಿನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.