ಕನ್ನಡಪ್ರಭ ವಾರ್ತೆ ದಾವಣಗೆರೆ
ಮತೀಯ ಬಿಜೆಪಿಯನ್ನು ದಾವಣಗೆರೆ ದಕ್ಷಿಣ ಮತದಾರರು ಎಂದಿಗೂ ಬೆಂಬಲಿಸಿಲ್ಲ. ಇಂದೂ ಸಹ ಬೆಂಬಲಿಸುವುದಿಲ್ಲ ಎಂದು ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕಾನಾಥ ಹೇಳಿದರು.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ತ ಶಾಮನೂರು ಜಯ ಸಾಧಿಸಲಿದ್ದು, ದಿವಂಗತ ಶಾಮನೂರು ಶಿವಶಂಕರಪ್ಪ ಇಲ್ಲಿ ಸುಧೀರ್ಘ ಅವದಿಗೆ ರಾಜಕಾರಣ ಮಾಡಿ, ಎಲ್ಲಾ ವರ್ಗದ ಜನರ ಪ್ರೀತಿ ಗಳಿಸಿದವರು ಎಂದರು.
ದಕ್ಷಿಣ ಕ್ಷೇತ್ರದಲ್ಲಿ ಶಾಮನೂರು ಸೋಲಿಲ್ಲದೇ ಸಾಧನೆ ಮಾಡಿದವರು. ದಾವಣಗೆರೆ ಮತದಾರರ ಪಾಲಿಗೆ ಉತ್ತಮ ಜನಾನುರಾಗಿ ನಾಯಕರಾಗಿ ಸಾಧನೆ ಮಾಡಿದ್ದರು. ಶಾಮನೂರು ಪುತ್ರ ಎಸ್ಸೆಸ್ ಮಲ್ಲಿಕಾರ್ಜುನ, ಸೊಸೆ ಡಾ.ಪ್ರಭಾ ಮಲ್ಲಿಕಾರ್ಜುನ ಪುತ್ರ ಈಗ ತನ್ನ ಅಜ್ಜ ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಶಿವಶಂಕರಪ್ಪನವರಂತೆ ಜನಪರ ಮೌಲ್ಯ ಮೈಗೂಡಿಸಿಕೊಂಡ ಸಮರ್ಥ ಇಲ್ಲಿ ಗೆಲ್ಲಬೇಕು ಎಂದು ಹೇಳಿದರು.ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಲು ಎಲ್ಲಾ ಜಾತಿ ಬಡವರಿಗೂ ತಲುಪುತ್ತಿವೆ. ಅದರಲ್ಲೂ ನಮ್ಮ ಸಾಮಾಜಿಕ ನ್ಯಾಯದಡಿ ಬರುವ ಅಲೆಮಾರಿಗಳು, ಹಿಂದುಳಿದ, ದಲಿತರು ಹಾಗೂ ಅಲ್ಪ ಸಂಖ್ಯಾತರು ಬಹುತೇಕ ಫಲಾನುಭವಿಗಳಾಗಿದ್ದಾರೆ. ಈ ಎಲ್ಲಾ ಸಮುದಾಯಗಳೂ ಕಾಂಗ್ರೆಸ್ ಅಭ್ಯರ್ಥಿ ಪರ ನಿಂತಿವೆ. ಅಂತೆಯೇ ಇಡೀ ದಾವಣಗೆರೆ ದಕ್ಷಿಣದ ಮತದಾರರು ಕೂಡ ಬಹಳ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಬೆಂಬಲಿಸುತ್ತಲೇ ಬರುತ್ತಿದ್ದಾರೆ ಎಂದು ತಿಳಿಸಿದರು.
ಬಿಜೆಪಿಯಂತಹ ಮತೀಯವಾದಿ, ಭ್ರಷ್ಟ ಹಾಗೂ ಜನ ವಿರೋಧಿ ಪಕ್ಷವಾಗಿದೆ. ದಾವಣಗೆರೆ ದಕ್ಷಿಣ ಪ್ರಜ್ಞಾವಂತ ಜನತೆ ಎಂದಿಗೂ ಇಲ್ಲಿ ಬಿಜೆಪಿಗೆ ಬೆಂಬಲಿಸಿರಲಿಲ್ಲ. ಇಂದು ಸಹ ಬೆಂಬಲಿಸಲ್ಲ ಎನ್ನುವುದು ಖಚಿತ. ಈ ಉಪ ಚುನಾವಣೆ ಜನಪರ ಮತ್ತು ಜನವಿರೋಧಿ ಪಕ್ಷಗಳ ಸಂಘರ್ಷವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರು ಇಲ್ಲಿ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮುಖಂಡರಾದ ನಾಗರಾಜ, ವಕೀಲ ಆವರಗೆರೆ ಪರಮೇಶ್ವರ, ಕತ್ತಲಗೆರೆ ತಿಪ್ಪಣ್ಣ, ವಿಕ್ರಂ ಆಂಥೋಣಿ, ಶಿವು, ವಕೀಲ ಬಾಬು ಗೋಸಾಯಿ, ಚಿಕ್ಕಮಗಳೂರು ಮನೋಜ, ಆಸೀಫ್ ಇತರರು ಇದ್ದರು.