ಸಾರಾಂಶ
ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದು, ಸದ್ಯ ರೈತರು ಬಿತ್ತನೆಗೆ ತಯಾರಾಗಿದ್ದಾರೆ. ಮುಂಗಾರು ಪ್ರವೇಶವಾಗುವ ಈ ಸಂದರ್ಭದಲ್ಲಿ ಜೂನ್ ಮೊದಲ ವಾರದಲ್ಲಿ ಹೆಸರು ಬಿತ್ತನೆ ಮಾಡಬೇಕು ಎಂದು ಗದಗ ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರಣ್ಣವರ ಹೇಳಿದರು.
ಮುಳಗುಂದ: ಮುಂಗಾರು ಪೂರ್ವ ಉತ್ತಮ ಮಳೆಯಾಗಿದ್ದು, ಸದ್ಯ ರೈತರು ಬಿತ್ತನೆಗೆ ತಯಾರಾಗಿದ್ದಾರೆ. ಮುಂಗಾರು ಪ್ರವೇಶವಾಗುವ ಈ ಸಂದರ್ಭದಲ್ಲಿ ಜೂನ್ ಮೊದಲ ವಾರದಲ್ಲಿ ಹೆಸರು ಬಿತ್ತನೆ ಮಾಡಬೇಕು ಎಂದು ಗದಗ ಸಹಾಯಕ ಕೃಷಿ ನಿರ್ದೇಶಕ ಮಲ್ಲಯ್ಯ ಕೊರಣ್ಣವರ ಹೇಳಿದರು.ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ತಾಲೂಕಿನಲ್ಲಿ ಪ್ರಸಕ್ತ ವರ್ಷದಲ್ಲಿ 60 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಹೆಸರು, 30 ಸಾವಿರ ಹೆಕ್ಟೇರ್ ಗೋವಿನ ಜೋಳ, 2000 ಹೆಕ್ಟೇರ್ ಬಿಟಿ ಹತ್ತಿ, 15000 ಹೆಕ್ಟೇರ್ ಶೇಂಗಾ ಬಿತ್ತನೆ ಗುರಿ ಹೊಂದಲಾಗಿದೆ. ಈ ಬಾರಿ ಡಿಎಪಿ ಗೊಬ್ಬರ ಅಲಭ್ಯವಾಗುತ್ತಿದ್ದು, ರೈತರು ಡಿಎಪಿ ಬದಲಾಗಿ ಪರ್ಯಾಯ ಗೊಬ್ಬರ ಖರೀದಿ ಮಾಡಬೇಕು. ಬೀಜ ಹಾಗೂ ಗೊಬ್ಬರದ ಕೊರತೆ ಈ ವರ್ಷದಲ್ಲಿ ಆಗದು. ರೈತರು ಯಾವುದೊಂದೇ ಕಂಪನಿಯ ಗೊಬ್ಬರಕ್ಕೆ ಅಂಟಿಕೊಳ್ಳಬೇಡಿ. ಎಲ್ಲ ಕಂಪನಿಯ ಗೊಬ್ಬರಗಳಲ್ಲಿಯೂ ಒಂದೇ ರಾಸಾಯನಿಕ ಇರುವುದರಿಂದ ಯಾವ ಕಂಪನಿಯದನ್ನಾದರೂ ಖರೀದಿಸಬಹುದು. ಅಲ್ಲದೇ ಈ ವರ್ಷ ಸರಕಾರ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಎಂಬ ಹೊಸ ಯೋಜನೆ ಹಮ್ಮಿಕೊಂಡಿದ್ದು ದೇಶಿ ತಳಿಯ ಸಂಶೋಧನೆಯಲ್ಲಿದೆ. ಕೃಷಿ ಇಲಾಖೆಯಿಂದ ದೇಶಿ ತಳಿಯನ್ನು ಸಂರಕ್ಷಣೆ ಮಾಡಲು ರೈತರಲ್ಲಿ ಶೋಧನೆ ನಡೆಸಲಿದೆ. ಸದ್ಯ ಗದಗ ತಾಲೂಕಿನಲ್ಲಿ 250 ಕ್ವಿಂ ಹೆಸರು ಬೀಜ, 80 ಕೆಜಿ ತೊಗರಿ, 500 ಕ್ವಿಂ ಗೋವಿನಜೋಳ ಬೀಜಗಳು ಲಭ್ಯವಿದ್ದು, ನಂತರ ಹಂತ ಹಂತವಾಗಿ ಇತರೇ ಬೀಜಗಳು ಬರುತ್ತವೆ ಎಂದರು. ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ರಾಜೇಶ್ವರಿ ಚಿನಿವಾಲ, ಕೃಷಿ ಇಲಾಖೆ ಸಿಬ್ಬಂದಿ ಖಾಸೀಮ ಹಾದಿಮನಿ, ಮಂಜು ಕರಿಗಾರ, ರೈತ ಸಂಘದ ಅಧ್ಯಕ್ಷ ದೇವರಾಜ ಸಂಗನಪೇಟಿ, ಪ್ರಭು ಲದ್ದಿ, ಮಹಾಂತೇಶ ಗುಂಜಳ, ಬಸವರಾಜ ಕರಿಗಾರ, ನಿಂಗಪ್ಪ ಬಸಾಪೂರ, ಇಮಾಮಸಾಬ ಸುಂಕದ, ಮಂಜು ಕಬಾಡಿ, ಮಹಾಂತೇಶ ವೆಂಕಟಾಪೂರ, ಅಮಿನ ನದ್ದೀಮುಲ್ಲಾ, ಮಾಬುಸಾಬ ಲಾಡಮ್ಮನವರ ಇತರರು ಇದ್ದರು.