ಸಾರಾಂಶ
ಮಂಡ್ಯ: ಮದ್ದೂರು ತಾಲೂಕು ಕೊಪ್ಪದ ನಂಜಮ್ಮ ಮೋಟೇಗೌಡ ಚಾರಿಟಬಲ್ ಮತ್ತು ಎಜುಕೇಷನಲ್ ಟ್ರಸ್ಟ್ ವತಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಿಡುಗಡೆ ಸಮಾರಂಭವನ್ನು ಜು.5ರಂದು ಸಂಜೆ 4.30ಕ್ಕೆ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕೆ.ಟಿ.ಹನುಮಂತು ಹೇಳಿದರು. ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಲೋಕೇಶ್ ಚಂದಗಾಲು ಅವರ ನಾಲ್ವಡಿ ನಾಡು ಪುಸ್ತಕವನ್ನು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಬಿಡುಗಡೆ ಮಾಡುವರು. ಅಧ್ಯಕ್ಷತೆಯನ್ನು ಶಾಸಕ ಪಿ.ರವಿಕುಮಾರ್ ವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ಸಾಹಿತಿ ಡಾ.ಬಿ.ಜಯಪ್ರಕಾಶಗೌಡ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೆ.ಎಸ್.ರಾಜಣ್ಣ ಭಾಗವಹಿಸಲಿದ್ದು, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ ಉಪಸ್ಥಿತರಿರುವರು. ಪ್ರಶಸ್ತಿಯು 25 ಸಾವಿರ ರು. ನಗದು, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ತಿಳಿಸಿದರು. ಮೈಸೂರು ಪ್ರಾಂತ್ಯಕ್ಕೆ ನಾಲ್ವಡಿ ಅವರು ನೀಡಿರುವ ಕೊಡುಗೆ ಅವಿಸ್ಮರಣೀಯ ಮತ್ತು ಶಾಶ್ವತವಾಗಿವೆ. ಅವರನ್ನು ಈಗಿನ ತಲೆಮಾರಿನವರಿಗೆ ಪರಿಚಯಿಸುವ ಸಲುವಾಗಿ 40 ಪುಟಗಳ ಕಿರು ಪುಸ್ತಕವನ್ನು ಉಚಿತವಾಗಿ ಹಂಚಿಕೆ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಒಂದು ಸಾವಿರ ಪುಸ್ತಕಗಳನ್ನು ಹಂಚಲಾಗುತ್ತದೆ. ಅಗತ್ಯಬಿದ್ದರೆ ಮರುಮುದ್ರಣ ಮಾಡಿಸಲಾಗುವುದು ಎಂದರು. ಗೋಷ್ಠಿಯಲ್ಲಿ ಡೇವಿಡ್, ಲಂಕೇಶ್, ಪ್ರೊ.ರಮೇಶ್, ಎಸ್.ಎಂ.ಲೋಕೇಶ್, ಉದಯಶಂಕರ್ ಇದ್ದರು.