ಯೋಧ ಅನೂಪ್ ಪೂಜಾರಿ ಮನೆಗೆ ಸ್ಪೀಕರ್ ಖಾದರ್ ಭೇಟಿ

| Published : Dec 28 2024, 01:02 AM IST

ಸಾರಾಂಶ

ಪೂಂಛ್‌ನಲ್ಲಿ ಅಪಘಾತದಲ್ಲಿ ಹುತಾತ್ಮರಾದ ಯೋಧ ಬೀಜಾಡಿಯ ಅನೂಪ್ ಪೂಜಾರಿ ಮನೆಗೆ ಶುಕ್ರವಾರ ವಿಧಾನಸಭೆಯ ಸ್ವೀಕರ್ ಯು.ಟಿ. ಖಾದರ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಕನ್ನಡಪ್ರಭ ವಾರ್ತೆ ಕುಂದಾಪುರ

ಪೂಂಛ್‌ನಲ್ಲಿ ಅಪಘಾತದಲ್ಲಿ ಹುತಾತ್ಮರಾದ ಯೋಧ ಬೀಜಾಡಿಯ ಅನೂಪ್ ಪೂಜಾರಿ ಮನೆಗೆ ಶುಕ್ರವಾರ ವಿಧಾನಸಭೆಯ ಸ್ವೀಕರ್ ಯು.ಟಿ. ಖಾದರ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಖಾದರ್, ಯೋಧ ಅನೂಪ್ ಪೂಜಾರಿ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಸ್ಥಳೀಯರು ಹಾಗೂ ಕುಟುಂಬದವರು ಮನವಿ ಮಾಡಿದ್ದು, ಮುಖ್ಯಮಂತ್ರಿಗಳೊಂದಿಗೆ ಈ ಮಾತನಾಡುವುದಾಗಿ ತಿಳಿಸಿದ್ದಾರೆ.

ಮಂಗಳವಾರದ ದುರಂತದಲ್ಲಿ ಮೃತರಾದ ರಾಜ್ಯದ ಎಲ್ಲಾ ಸೈನಿಕರ ಕುಟುಂಬದವರಿಗೂ ರಾಜ್ಯ ಸರ್ಕಾರದಿಂದ ದೊರಕುವ ಎಲ್ಲ ಸವಲತ್ತುಗಳನ್ನು ನೀಡುವ ಬಗ್ಗೆ ಮುಖ್ಯಮಂತ್ರಿ ಈಗಾಗಲೇ ತಿಳಿಸಿದ್ದು, ಇದನ್ನು ಶೀಘ್ರವಾಗಿ ಅನೂಪ್ ಕುಟುಂಬದವರಿಗೂ ಒದಗಿಸಲು ಪ್ರಯತ್ನಿಸುತ್ತೇವೆ ಎಂದರು.

ಮಾಜಿ ಸಚಿವ ವಿನಯಕುಮಾರ ಸೊರಕೆ, ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಒಟ್ಟಾಗಿ ಪ್ರಯತ್ನ ನಡೆಸುವುದಾಗಿ ತಿಳಿಸಿದ ಅವರು, ಹುತಾತ್ಮ ಯೋಧನ ಹೆಸನಲ್ಲಿ ಸ್ಮಾರಕ ನಿರ್ಮಾಣವೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ರೂಪಿಸುವುದಿದ್ದರೂ, ಸ್ಥಳೀಯ ಆಡಳಿತ ತೀರ್ಮಾನ ಕೈಗೊಳ್ಳಲಿ. ಆ ಬಳಿಕ ಸರ್ಕಾರದಿಂದ ಬೇಕಾದ ಸಹಕಾರ ನೀಡಲು ಬದ್ಧರಿರುವುದಾಗಿ ತಿಳಿಸಿದರು.

ಮಾಜಿ ಸಚಿವ ವಿನಯಕುಮಾರ ಸೊರಕೆ ಮಾತನಾಡಿ, ಅನೂಪ್ ಅವರ ಪತ್ನಿ ಮಂಜುಶ್ರೀ ಬಿಸಿಎ ಪದವೀಧರೆಯಾಗಿದ್ದು ಸರ್ಕಾರಿ ಉದ್ಯೋಗದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಸ್ವೀಕರ್ ನೇತೃತ್ವದಲ್ಲಿ ನಾವೆಲ್ಲ ಒಟ್ಟಾಗಿ ಈ ಬಗ್ಗೆ ಪ್ರಯತ್ನಿಸುತ್ತೇವೆ. ಹುತಾತ್ಮರಾಗಿರುವ ಅವರ ಜೀವವನ್ನು ತರಲು ಖಂಡಿತ ಸಾಧ್ಯವಿಲ್ಲ ಆದರೆ ಅವರ ಕುಟುಂಬ ನೆಮ್ಮದಿಯಿಂದ ಜೀವನ ಸಾಗಿಸಲು ಅಗತ್ಯವಾಗಿರುವ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ತಿಳಿಸಿದರು.

ಸ್ವೀಕರ್ ಯು.ಟಿ.ಖಾದರ್ ಅವರೊಂದಿಗೆ ತುಳುವಿನಲ್ಲಿ ಮಾತನಾಡಿದ ಅನೂಪ್ ಅವರ ಪತ್ನಿ ಪೆರ್ಡೂರು ಮೂಲದ ಮಂಜುಶ್ರೀ, ‘ಮದ್ಮೆ ಆಪುನ್ ದುಂಬುಡ್‍ಲ ದಿನಾಲಾ ಪೋನ್ ಮಲ್ತೊಂದಿತ್ತಿರ್, ಮಂಗಳವಾರ ರಾತ್ರಿ ಮುಟ್ಟ ಪೋನ್ ಬೈದಿಜ್ಜಿ ಎಂದನಗ್ ಪೋಡಿಗೆ ಆತಂಡ್....’ ( ಮದುವೆಯಾಗುವ ಮೊದಲಿನಿಂದಲೂ ಪ್ರತಿ ದಿನ ಪೋನ್ ಮಾಡುತ್ತಿದ್ದರು. ಮಂಗಳವಾರ ರಾತ್ರಿಯವರೆಗೂ ಪೋನ್ ಬಾರದೆ ಇದ್ದಾಗ ನನಗೆ ಹೆದರಿಕೆಯಾಗಿತ್ತು ) ಎಂದು ಕಣ್ಣೀರಾದರು.

ಯಶ್ಪಾಲ್ ಸಾಂತ್ವನ:

ಅನೂಪ್ ಪೂಜಾರಿ ಅವರ ಪತ್ನಿ ಹಾಗೂ ಕುಟುಂಬಿಕರನ್ನು ಭೇಟಿ ಮಾಡಿ ಸಾಂತ್ವನ‌ ತಿಳಿಸಿದ ಉಡುಪಿ ಶಾಸಕ ಯಶಪಾಲ್ ಸುವರ್ಣ ತಮ್ಮ ವಯಕ್ತಿಕ 1 ಲಕ್ಷ ರು. ಚೆಕ್ ನೀಡಿ ಅನೂಪ್ ಅವರ ಪುತ್ರಿ ಇಶಾನಿ ಅವರ ಹೆಸರಿನಲ್ಲಿ ನಿಖರ ಠೇವಣೆ ಇಡುವಂತೆ ಹೇಳಿದರು.

ಬಳಿಕ ಸುದ್ದಿಗಾರರೊದಿಗೆ ಮಾತನಾಡಿದ ಅವರು, ಅನೂಪ್ ನಿಧನ ಕರಾವಳಿಯ ಜನರಿಗೆ ಅತೀವ ದುಃಖವನ್ನು ತಂದಿದೆ. ಸೈನ್ಯಕ್ಕೆ ಸೇರುವ ಯುವಕರಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡಲು ಅಕಾಡೆಮಿಯೊಂದನ್ನು ಹುಟ್ಟುಹಾಕಬೇಕು ಎನ್ನುವ ಕನಸುಗಳು ಅನೂಪ್ ಪೂಜಾರಿ ಅವರಿಗಿತ್ತು ಎನ್ನುವುದನ್ನು ಸ್ಥಳೀಯರು ತಿಳಿಸಿದ್ದಾರೆ. ಅವರ ಕನಸನ್ನು ನನಸು ಮಾಡಲು ಯಾವುದೇ ಸಲಹೆ ಹಾಗೂ ಸಹಕಾರಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಪ್ರಮುಖರು ಒಟ್ಟಾಗಿ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಸ್ಥಳಿಯ ಪ್ರಮುಖರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಬಿ.ಹಿರಿಯಣ್ಣ ಚಾತ್ರಬೆಟ್ಟು, ಮಲ್ಯಾಡಿ ಶಿವರಾಮ್ ಶೆಟ್ಟಿ, ಅಶೋಕ ಪೂಜಾರಿ ಬೀಜಾಡಿ, ಪ್ರಕಾಶ್ ಪೂಜಾರಿ ಬೀಜಾಡಿ, ಅವಿನಾಶ್ ಉಳ್ತೂರು, ಶೇಖರ ಚಾತ್ರಬೆಟ್ಟು, ಸದಾನಂದ ಶೆಟ್ಟಿ ಕೆದೂರು, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಸುರೇಂದ್ರ ಶೆಟ್ಟಿ ಸಹನಾ, ಯಾಸಿನ್ ಹೆಮ್ಮಾಡಿ, ಅನಿಲ್ ಚಾತ್ರಬೆಟ್ಟು, ಜಸಿಂತಾ ಡಿಮೆಲ್ಲೋ, ಎನ್ಎಸ್ಐಸ್‌ಯು ಮುಖಂಡ ಸಯ್ಯದ್ ಫುರ್ಖಾನ್ ಮುಂತಾದವರಿದ್ದರು.