ಕನ್ನಡಪ್ರಭ ವಾರ್ತೆ ಮಂಗಳೂರು

ಶತಮಾನಗಳ ಹಿಂದೆ ಕ್ರೈಸ್ತರು ಭಾರತದ ಗ್ರಾಮೀಣ ಭಾಗದಲ್ಲಿ ಶಾಲೆಗಳನ್ನು ಸ್ಥಾಪಿಸಿ ಸಮಾಜದ ಒಳಿತಿಗಾಗಿ ತಮ್ಮ ಸೇವೆಯನ್ನು ನೀಡಿ ಜನಸಾಮಾನ್ಯರ ಬದುಕನ್ನು ಹಸನುಗೊಳಿಸಿದ್ದರು. ಕ್ರೈಸ್ತರ ಪ್ರಮುಖ ಧಾರ್ಮಿಕ ಕೇಂದ್ರವಾದ ರೋಮ್ ನಲ್ಲಿ ನೀವು ಪಡೆಯುವ ಉನ್ನತ ಶಿಕ್ಷಣ ಮತ್ತು ನಿಮ್ಮ ಸೇವಾ ಮನೋಭಾವ, ಕರ್ನಾಟಕದ ಗ್ರಾಮೀಣ ಭಾಗದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಲು ನಿಮಗೆ ಪ್ರೇರಣೆಯಾಗಲಿ ಎಂದು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದ್ದಾರೆ. ಅಂತಾರಾಷ್ಟ್ರೀಯ ಮತ್ತು ಅಂತರ್ ಧರ್ಮೀಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರೋಮ್‌ಗೆ ಭೇಟಿ ನೀಡಿರುವ ಸಂದರ್ಭದಲ್ಲಿ ಅವರು ಶನಿವಾರ ಸಂತ ಪೀಟರ್ ಪೊಂತಿಫಿಕಾಲ್ ಕಾಲೇಜ್‌ನಲ್ಲಿ ಕೊಂಕಣಿ ಕುಟಾಮ್ ರೋಮ್ ಮತ್ತು ಕನ್ನಡಿಗರ ಒಕ್ಕೂಟ, ರೋಮ್ ಇವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಂಗಳೂರು ಧರ್ಮಪ್ರಾಂತ್ಯದ ಧರ್ಮಗುರು ಫಾದರ್ ಜಿಲ್ ಡಿಸೋಜಾ ಅವರು ಸ್ಪೀಕರ್‌ ಯು.ಟಿ. ಖಾದರ್ ಅವರ ಸಾಧನೆಯನ್ನು ವಿವರಿಸಿದರು.

ಫಾದರ್ ಜೋವಿನ್ ಸಿಕ್ವೆರಾರವರು ಕೊಂಕಣಿ ಸಂಘಟನೆ ಮತ್ತು ಫಾದರ್ ರಿಚಾರ್ಡ್ ಕನ್ನಡ ಸಂಘಟನೆಯ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಸಂತ ಪೀಟರ್ ಪೊಂತಿಫಿಕಾಲ್ ಕಾಲೇಜಿನ ರೆಕ್ಟರ್ ಫಾದರ್ ಜೋಸ್ ಸಂದೇಶ ನೀಡಿದರು. ಉಭಯ ಸಂಘಟನೆಗಳ ಪರವಾಗಿ ಸ್ಪೀಕರ್‌ ಖಾದರ್ ಅವರನ್ನು ಸನ್ಮಾನಿಸಲಾಯಿತು.

ಫಾದರ್ ಸೆಬಾಸ್ಟಿಯನ್ ಪ್ರಾರ್ಥನಾ ವಿಧಿ ನೆರವೇರಿಸಿದರು. ಕಾರ್ಯಕ್ರಮದ ಸಂಯೋಜಕ ಫಾದರ್ ಲೋರೆನ್ಸ್ ನೊರೊನ್ಹಾ ಸ್ವಾಗತಿಸಿದರು. ಸಹ ಸಂಯೋಜಕಿ ವ್ಯಾಟಿಕನ್ ಸಂವಹನ ವಿಭಾಗದ ಧರ್ಮಭಗಿನಿ ಸಿಸ್ಟರ್ ಕಾರ್ಮೆಲ್ ವಂದಿಸಿದರು. ಫಾದರ್ ರೊಯ್ಸನ್ ಫರ್ನಾಂಡಿಸ್ ಹಿರ್ಗಾನ ನಿರೂಪಿಸಿದರು.