ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಶ್ರೀರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರವು ಯಶಸ್ವಿಯಾಗಿ ಲೋಕಾರ್ಪಣೆಗೊಳ್ಳಲು ಪ್ರಾರ್ಥಿಸಿ ಹಾಗೂ ರೇವತಿ ನಕ್ಷತ್ರದ ಅಂಗವಾಗಿ ತಾಲೂಕಿನ ಸುಪ್ರಸಿದ್ದ ಭೂ ವರಹನಾಥಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಭಿಷೇಕ, ಕಲ್ಯಾಣೋತ್ಸವ ಮತ್ತು ಪುಷ್ಪಾಭಿಷೇಕ ನಡೆಸಿ ಪ್ರಾರ್ಥಿಸಲಾಯಿತು.ಶ್ರೀ ಕ್ಷೇತ್ರದಲ್ಲಿ ರೇವತಿ ನಕ್ಷತ್ರದ ಅಂಗವಾಗಿ ವಿಶ್ವದಲ್ಲಿಯೇ ಅಪರೂಪದ್ದಾಗಿರುವ ಸಾಲಿಗ್ರಾಮ ಶ್ರೀಕೃಷ್ಣ ಶಿಲೆಯಲ್ಲಿ ನಿರ್ಮಿಸಿರುವ 17 ಅಡಿ ಎತ್ತರದ ಭೂವರಹನಾಥಸ್ವಾಮಿ ಶಿಲಾಮೂರ್ತಿಗೆ ಒಂದು ಸಾವಿರ ಲೀಟರ್ ಹಾಲು, ತಲಾ 500 ಲೀಟರ್ ಎಳನೀರು, ಕಬ್ಬಿನ ಹಾಲು ಅಭಿಷೇಕದ ನಂತರ ಹಸುವಿನ ತುಪ್ಪ, ಜೇನುತುಪ್ಪ, ಮೊಸರು, ಸುಗಂಧದ್ರವ್ಯಗಳು, ಶ್ರೀಗಂಧ, ಅರಿಶಿನ ಹಾಗೂ ಪವಿತ್ರ ಗಂಗಾಜಲ ತೀರ್ಥದಿಂದ ಅಭಿಷೇಕ ಮಾಡಲಾಯಿತು.
ನಂತರ ಮಲ್ಲಿಗೆ ಜಾಜಿ, ಸಂಪಿಗೆ, ಸೇವಂತಿಗೆ, ಗುಲಾಭಿ, ಪಾರಿಜಾತ, ಕಮಲ, ತುಳಸಿ, ಜವನ, ಪವಿತ್ರ ಪತ್ರೆಗಳು ಸೇರಿದಂತೆ 58 ಬಗೆಯ ವಿವಿಧ ಅಪರೂಪದ ಪುಷ್ಪಗಳಿಂದ ಪುಷ್ಪಾಭಿಷೇಕ ನಡೆಸಲಾಯಿತು.ಜೊತೆಗೆ ಭೂ ವರಾಹನಾಥನಿಗೆ ಕಲ್ಯಾಣೋತ್ಸವ ನಡೆಸಿ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ಭಕ್ರ ಜನರ ಜಯಘೋಷಗಳೊಂದಿಗೆ ಮೆರವಣಿಗೆ ಮಾಡಲಾಯಿತು. ರೇವತಿ ಅಭಿಷೇಕದ ವೇಳೆ ಅಯೋಧ್ಯೆಯಲ್ಲಿ ಲೋಕಾರ್ಪಣೆಯಾಗುತ್ತಿರುವ ಶ್ರೀರಾಮನ ಮಂದಿರವು ಯಾವುದೇ ಅಡೆತಡೆಗಳಿಲ್ಲದಂತೆ ನಿರ್ವಿಘ್ನವಾಗಿ ನೆರವೇರಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರೇವತಿ ನಕ್ಷತ್ರ ಪೂಜೆ, ಅಭಿಷೇಕ ಮತ್ತು ಕಲ್ಯಾಣೋತ್ಸವದ ನೇತೃತ್ವವನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿ ಮ್ಯಾನೇಜಿಂಗ್ ಟ್ರಸ್ಟಿ ಶ್ರೀನಿವಾಸ ರಾಘವಾನ್ ವಹಿಸಿದ್ದರು. ದೇವಾಲಯಕ್ಕೆ ಆಗಮಿಸಿದ್ದ ಭಕ್ತಾಧಿಗಳಿಗೆ ಸಿಹಿಪೊಂಗಲ್, ಪುಳಿಯೊಗರೆ, ಬಿಸಿಬೇಳೆ ಬಾತ್ ಪ್ರಸಾದವನ್ನು ವಿತರಿಸಲಾಯಿತು. ಶ್ರೀನಿಧಿ ಶರ್ಮ ಹಾಗೂ ವಿಜಯನರಸಿಂಹಶರ್ಮ ಅವರು ಪೂಜಾ ವಿಧಿವಿಧಾನಗಳ ಕೈಂಕರ್ಯ ವಹಿಸಿದ್ದರು.ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಸಂಭ್ರಮಕ್ಕೆ ಸಿದ್ಧತೆಹಲಗೂರು: ಆಯೋಧ್ಯೆಯಲ್ಲಿ ಶ್ರೀರಾಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಹೋಬಳಿಯ ವಿವಿಧೆಡೆ ಸಂಭ್ರಮಾಚರಣೆಗೆ ಸಿದ್ಧತೆಗಳು ನಡೆಯುತ್ತಿವೆ.
ಶ್ರೀರಾಮಮಂದಿರ ದೇವಸ್ಥಾನದ ಆವರಣ, ಬಿಕ್ಷದ ಮಠ, ಮತ್ತು ಹಂಡನಹಳ್ಳಿ, ಕುಂತೂರು, ತೊರೆಕಾಡನಹಳ್ಳಿ ದಳವಾಯಿ ಕೋಡಿಹಳ್ಳಿ, ಕೊನ್ನಾಪುರ ಸೇರಿದಂತೆ ಇನ್ನು ಇತರೆ ಗ್ರಾಮಗಳಲ್ಲಿ ಸೋಮವಾರ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಅಂಗವಾಗಿ ಸಂಭ್ರಮದಿಂದ ಆಯೋಧ್ಯೆ ಹಬ್ಬ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಶ್ರೀರಾಮ ಮಂದಿರದಲ್ಲಿ ಪೂಜೆ ಜೊತೆಗೆ ಅದ್ಧೂರಿಯಾಗಿ ರಾಮದೇವರ ಭಾವಚಿತ್ರವನ್ನು ಮೆರವಣಿಗೆ ಮಾಡಿ, ಪ್ರಸಾದ ವಿನಿಯೋಗ ನಂತರ ಅನ್ನ ಸಂತರ್ಪಣೆ ಜರುಗಲಿದೆ. ಕಾರ್ಯಕ್ರಮಕ್ಕೆ ಪಕ್ಷತೀತ, ಧರ್ಮತೀತವಾಗಿ ಎಲ್ಲರು ಭಾಗವಹಿಸಿದ್ದಾರೆ ಎಂದು ರಾಮಭಕ್ತರು ತಿಳಿಸಿದ್ದಾರೆ.