ಕನ್ನಡಪ್ರಭ ವಾರ್ತೆ ಮೈಸೂರು
ಜೆಎಸ್ಎಸ್ ವಿಶೇಷ ಚೇತನರ ಪಾಲಿಟೆಕ್ನಿಕ್ ನ ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ವತಿಯಿಂದ ಸಂಖ್ಯಾಶಾಸ್ತ್ರ ಮತ್ತು ತಂತ್ರಜ್ಞಾನ ವಿಷಯದ ಕುರಿತು ವಿಶೇಷ ಅತಿಥಿ ಉಪನ್ಯಾಸವು ಬುಧವಾರ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿತು.ಮುಖ್ಯಅತಿಥಿಯಾಗಿ ಹಾಗೂ ಉಪನ್ಯಾಸಕರಾಗಿ ಬಸವರಾಜ ಶಂಕರ ಉಮ್ರಾಣಿ ಭಾಗವಹಿಸಿದ್ದರು. ಹ್ಯೂಮನ್ ಕಂಪ್ಯೂಟರ್ ಎಂದು ಗುರುತಿಸಿಕೊಂಡಿರುವ ಅವರು ಜನ್ಮತಃ ದೃಷ್ಟಿ ವೈಕಲ್ಯ ಹೊಂದಿದ್ದರೂ ತಮ್ಮ ಅಸಾಧಾರಣ ಗಣಿತ ಪ್ರತಿಭೆ, ವಿಶಿಷ್ಟ ಸ್ಮರಣಶಕ್ತಿ ಹಾಗೂ ವಿಶ್ಲೇಷಣಾತ್ಮಕ ಸಾಮರ್ಥ್ಯದ ಮೂಲಕ ದೇಶದಾದ್ಯಂತ ಹೆಸರುವಾಸಿಯಾಗಿದ್ದಾರೆ.
ಉಪನ್ಯಾಸದ ವೇಳೆ ಅವರು ತಮ್ಮ ಜೀವನ ಪಯಣ, ಸಾಧನೆಗಳು ಹಾಗೂ ಸಂಖ್ಯಾಶಾಸ್ತ್ರದ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಯಾವುದೇ ಸವಾಲುಗಳಿದ್ದರೂ ಆತ್ಮವಿಶ್ವಾಸ, ಪರಿಶ್ರಮ ಮತ್ತು ನಿರಂತರ ಕಲಿಕೆಯ ಮೂಲಕ ಯಶಸ್ಸನ್ನು ಸಾಧಿಸಬಹುದು ಎಂಬ ಸಂದೇಶವನ್ನು ವಿದ್ಯಾರ್ಥಿಗಳಿಗೆ ನೀಡಿದರು. ವಿಕಲಚೇತನರಿಗೆ ಕರುಣೆಗಿಂತ ಅವಕಾಶಗಳು ಮುಖ್ಯವೆಂಬ ತಮ್ಮ ದೃಢ ನಿಲುವನ್ನು ಹಂಚಿಕೊಂಡು, ಪ್ರತಿಯೊಬ್ಬರೂ ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರಯತ್ನಿಸಬೇಕೆಂದು ಪ್ರೇರೇಪಿಸಿದರು.ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ಎಲ್ಲ ವಿದ್ಯಾರ್ಥಿಗಳು, ವಿಶೇಷವಾಗಿ ದೃಷ್ಟಿ ವೈಕಲ್ಯ ಹೊಂದಿರುವ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಅತಿಥಿ ಉಪನ್ಯಾಸಕರೊಂದಿಗೆ ಸಂವಾದ ನಡೆಸಿದರು.
ವಿದ್ಯಾರ್ಥಿಗಳು ಕಾರ್ಯಕ್ರಮದಿಂದ ಅಪಾರ ಸಂತೋಷಗೊಂಡು ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಾಸ, ಶಿಕ್ಷಣ ಹಾಗೂ ವೃತ್ತಿ ಜೀವನಕ್ಕೆ ಸಂಬಂಧಿಸಿದ ಅನೇಕ ಮೌಲ್ಯಯುತ ವಿಷಯಗಳನ್ನು ಕಲಿತಿರುವುದಾಗಿ ತಿಳಿಸಿದರು.
ಪ್ರಾಂಶುಪಾಲ ಎನ್.ಎಂ.ಶಿವಕುಮಾರಸ್ವಾಮಿ ಮಾತನಾಡಿ, ಬಸವರಾಜ ಉಮ್ರಾಣಿ ಅವರ ಪ್ರೇರಣಾದಾಯಕ ಉಪನ್ಯಾಸಕ್ಕಾಗಿ ಕೃತಜ್ಞತೆ ಸಲ್ಲಿಸಿ, ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಸಾಧನೆಯ ಮನೋಭಾವ ಬೆಳೆಸುವಲ್ಲಿ ಅವರ ಕೊಡುಗೆಯನ್ನು ಶ್ಲಾಘಿಸಿದರು.
ತರಬೇತಿ ಮತ್ತು ಉದ್ಯೋಗಾಧಿಕಾರಿ ಕೆ. ಕುಶಾಲ್ ಅತಿಥಿ ಉಪನ್ಯಾಸಕರಿಗೆ ಧನ್ಯವಾದ ಅರ್ಪಿಸಿ, ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿ, ಸಕಾರಾತ್ಮಕ ಚಿಂತನೆ ಮತ್ತು ಸ್ವಾವಲಂಬನೆಯ ಮಹತ್ವವನ್ನು ಮನದಟ್ಟುಗೊಳಿಸಿದಕ್ಕಾಗಿ ಅಭಿನಂದಿಸಿದರು.ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ಮುಖ್ಯಸ್ಥೆ ವಿ. ಗೀತಾ ಇದ್ದರು. ವಿದ್ಯಾರ್ಥಿಗಳು ಮತ್ತು ಅತಿಥಿ ಉಪನ್ಯಾಸಕರ ನಡುವಿನ ಸಂವಾದವನ್ನು ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಪಡೆದ ಜ್ಞಾನ ಮತ್ತು ಪ್ರೇರಣೆಯನ್ನು ತಮ್ಮ ಶೈಕ್ಷಣಿಕ ಹಾಗೂ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಂಸ್ಥೆಯ ವತಿಯಿಂದ ಶ್ರೀ ಬಸವರಾಜ ಶಂಕರ ಉಮ್ರಾಣಿ ಅವರಿಗೆ ಕೃತಜ್ಞತೆ ಸಲ್ಲಿಸಲಾಯಿತು.