ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಗರ ಮತ್ತು ಜಿಲ್ಲೆಯ ಎಲ್ಲೆಡೆ ಶಿವನ ದೇವಸ್ಥಾನಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಿ ಬಂದು ಭಕ್ತರಿಗೆಲ್ಲಾ ಪ್ರಸಾದ ನೀಡಲಾಯಿತು. ಬುಧವಾರ ಬೆಳಗಿನಿಂದ ಸಂಜೆವರೆಗೂ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.ಈ ವೇಳೆ ಅರ್ಚಕರಾದ ಶ್ರೀವತ್ಸ ಮಾಧ್ಯಮದೊಂದಿಗೆ ಮಾತನಾಡಿ, ಮಹಾಶಿವರಾತ್ರಿ ಹಬ್ಬವನ್ನು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ದೇವರಿಗೆ ವಿವಿಧ ಅಭಿಷೇಕವನ್ನು ಕೂಡ ಮಾಡಲಾಗಿದೆ. ಸರ್ವರಿಗೂ ಭಗವಂತ ಒಳಿತನ್ನು ಮಾಡಲಿ ಎಂದರು. ನಗರದ ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಬೆಳಗಿನಿಂದಲೇ ವಿವಿಧ ಪೂಜಾ ಕಾರ್ಯಗಳು ನೆರವೇರಿದವು. ನಗರದ ಕಸ್ತೂರಿ ಬಾ ರಸ್ತೆ, ದೊಡ್ಡಬಸ್ತಿ ಬಳಿ ಇರುವ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಬೆಳಿಗಿನಿಂದಲೇ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತಾಧಿಗಳಿಗೆ ದರ್ಶನ ಮಾಡಲು ಅವಕಾಶ ನೀಡಲಾಯಿತು. ಶ್ರೀ ಧರ್ಮಸ್ಥಳ ಆಯುರ್ವೇದಿಕ್ ಕಾಲೇಜು ಆವರಣದಲ್ಲಿರುವ ಪಾತಳೇಶ್ವರ ದೇವಸ್ಥಾನ, ಶ್ರೀ ಬಸವೇಶ್ವರ ದೇವಾಲಯ ಸೇರಿದಂತೆ ವಿವಿಧ ಭಾಗಗಳಲ್ಲಿರುವ ದೇವಸ್ಥಾನದಲ್ಲಿ ಶಿವನಿಗೆ ವಿಶೇಷ ಅಲಂಕಾರ ನೆರವೇರಿಸಿ ಪೂಜೆ ಮಾಡಲಾಯಿತು. ಬೆಳಗಿನಿಂದ ರಾತ್ರಿ ಪೂರ್ತಿ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಂದ ಭಕ್ತರಿಗೆಲ್ಲಾ ಪ್ರಸಾದ ವಿತರಣೆ ಮಾಡಿದರು.
ಶಿವ ಭಕ್ತರು ಮಹಾಶಿವರಾತ್ರಿಯ ವ್ರತವನ್ನು ಆಚರಿಸುತ್ತಾರೆ. ತಮ್ಮ ಸಾತ್ತ್ವಿಕ ಜೀವನಕ್ಕೆ ಅನುಗುಣವಾಗಿ ತಮ್ಮ ಪ್ರತಿನಿತ್ಯ ಜೀವನದಲ್ಲಿ ಬೆಳಗ್ಗೆ ಎದ್ದ ನಂತರದಿಂದ ರಾತ್ರಿ ಮಲಗುವವರೆಗೂ ಸಾತ್ತ್ವಿಕ ಆನಂದಮಯ ಜೀವನಕ್ಕಾಗಿ ಆಚರಿಸುತ್ತಾರೆ. ಬಹುಮುಖ್ಯವಾಗಿ ಮಹಾಶಿವರಾತ್ರಿಯ ಸಲುವಾಗಿ ಶಿವನ ಕೃಪೆಗಾಗಿ ನಾವು ವ್ರತ ಪೂಜೆ ಹಾಗೂ ಜಾಗರಣೆಗೆ ಸಂಬಂಧಿಸಿದಂತೆ ಮತ್ತು ಶಿವನ ದೇಗುಲದಲ್ಲಿ ಮಹಾದೇವನ ದರ್ಶನ ಪಡೆಯುವ ಪದ್ಧತಿ ಮತ್ತು ಶಿವನಿಗೆ ಅತಿ ಪ್ರಿಯವಾದ ಬಿಲ್ಪಪತ್ರೆಯ ಮಹತ್ವವಿದೆ ಎಂದರು. ಇದೇ ವೇಳೆ ಹಾಸನದ ನೂತನ ತಹಸೀಲ್ದಾರ್ ಕೂಡ ವಿವಿಧ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಶಿವರಾತ್ರಿ ಹಬ್ಬದ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ಭಜನೆ, ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಂಜೆ ಏರ್ಪಡಿಸಿದ್ದರು. ದೇವಾಲಯದ ಆವರಣದಲ್ಲಿ ಸಮಿತಿಯಿಂದ ಪುಸ್ತಕಗಳ ಮಳಿಗೆಯನ್ನು ಕೂಡ ಹಾಕಲಾಗಿತ್ತು.