ಸಾರಾಂಶ
ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಎಂದೇ ಖ್ಯಾತಿಯಾಗಿರುವ ನಗರಳ್ಳಿ ಸುಗ್ಗಿ ಉತ್ಸವವು 21ರಂದು ನಗರಳ್ಳಿ ಸುಗ್ಗಿ ಬನದಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಇಲ್ಲಿಗೆ ಸಮೀಪದ ಕೂತಿನಾಡು ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಎಂದೇ ಖ್ಯಾತಿಯಾಗಿರುವ ನಗರಳ್ಳಿ ಸುಗ್ಗಿ ಉತ್ಸವವು ಏ.೨೧ರಂದು ನಗರಳ್ಳಿಯ ಸುಗ್ಗಿ ಬನದಲ್ಲಿ ನಡೆಯಲಿದೆ.ಸಾಂಪ್ರದಾಯಿಕ ಸುಗ್ಗಿ ಆಚರಣೆಯ ವಿಧಿ ವಿಧಾನದಂತೆ ಸಬ್ಬಮ್ಮ ದೇವಿಯ ತವರೆಂದು ಕರೆಯಲ್ಪಡುವ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ಭಾನುವಾರ ವಿಶೇಷ ಪೂಜೆ ನಡೆಯಿತು.
ಅನಾದಿಕಾಲದಿಂದಲೂ ನಡೆದುಕೊಂಡು ಬಂದಂತೆ ಕೂತಿ ಗ್ರಾಮದ ಚಾವಡಿ ಕಟ್ಟೆಯಲ್ಲಿ ಗ್ರಾಮದ ಮನೆಗಳಲ್ಲಿರುವ ಬಂದೂಕುಗಳನ್ನು ತಂದಿಟ್ಟು ನಂತರ ಸಾಮೂಹಿಕವಾಗಿ ಪೂಜೆ ಸಲ್ಲಿಸಲಾಯಿತು. ನಂತರ ದೇವರ ಕಟ್ಟೆಗೆ ಗ್ರಾಮಸ್ಥರು ಬಂದೂಕು ಹಿಡಿದು ಪ್ರದಕ್ಷಿಣೆ ಬಂದು ಬಂದೂಕಿನಿಂದ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಸುಗ್ಗಿ ಪದ್ಧತಿಯನ್ನು ಆಚರಿಸುವ ಮೂಲಕ ಸುಗ್ಗಿ ಉತ್ಸವಕ್ಕೆ ಚಾಲನೆ ನೀಡಲಾಯಿತು.ಪ್ರಮುಖ ಸುಗ್ಗಿ ಆಚರಣೆಯು ಏಪ್ರಿಲ್ - ಮೇನಲ್ಲಿ ನಗರಳ್ಳಿ ಗ್ರಾಮದ ಸುಗ್ಗಿ ಕಟ್ಟೆ ಹಾಗೂ ೧೨ ದೇವರ ಬನದಲ್ಲಿ ವಿವಿಧ ಆಚರಣೆಗಳೊಂದಿಗೆ ನಡೆಯುತ್ತದೆ.
ಈ ಆಚರಣೆಯಲ್ಲಿ ಕೂತಿನಾಡು ವ್ಯಾಪ್ತಿಗೆ ಒಳಪಡುವ ಕೂತಿ ಗ್ರಾಮ, ಯಡದಂಟೆ, ಕುಂದಳ್ಳಿ, ನಗರಳ್ಳಿ, ಹೆಮ್ಮನಗದ್ದೆ, ಕನ್ನಳ್ಳಿ, ಬೇಕನಳ್ಳಿ, ಬೆಟ್ಟದಳ್ಳಿ, ಜಕ್ಕನಳ್ಳಿ, ಬೆಟ್ಟಡಕೊಪ್ಪ, ಹಳ್ಳಿಯೂರು, ಕೊತ್ತನಳ್ಳಿ, ಇನಕನಳ್ಳಿ, ಬಿಕಳ್ಳಿ, ಬೆಂಕಳ್ಳಿ, ಕುಡಿಗಾಣ, ನಾಡ್ನಳ್ಳಿ, ತಡ್ಡಿಕೊಪ್ಪ ಹಾಗೂ ಸಕಲೇಶಪುರ ತಾಲೂಕಿನ ಒಡಳ್ಳಿ ಗ್ರಾಮದ ಎಲ್ಲ ವರ್ಗದ ಜನರು ಒಂದುಗೂಡಿ ಬಹಳ ಶ್ರದ್ಧಾ ಭಕ್ತಿಯಿಂದ ಸುಗ್ಗಿಯನ್ನು ವಿಶೇಷವಾಗಿ ಆಚರಿಸುತ್ತಾರೆ.ಸುಗ್ಗಿ ಆಚರಣೆಯಲ್ಲಿ ೧೨ ಬನ-ರಂಗಗಳಿದ್ದು ಕೊನೆಯ ದಿನ ಕಂಬತಳೆ ರಂಗ, ಸುಗ್ಗಿ ರಂಗ ಎಂಬಲ್ಲಿ ಸುಗ್ಗಿಯ ವಿಶೇಷತೆಗಳನ್ನು ಸಾರುವ ಆಚರಣೆಗಳು ನಡೆಯುತ್ತದೆ.
ಕಾರ್ಯಕ್ರಮದಲ್ಲಿ ಕೂತಿ ಗ್ರಾಮಾಧ್ಯಕ್ಷ ಎಚ್.ಎಂ. ಜಯರಾಮ್, ಉಪಾಧ್ಯಕ್ಷ ಕೆ.ಡಿ. ಗಿರೀಶ್, ಕಾರ್ಯದರ್ಶಿ ಯಾದವ್ ಕುಮಾರ್, ಖಜಾಂಚಿ ಲಕ್ಷ್ಮಯ್ಯ, ಅರ್ಚಕರಾದ ಅನಂತ್ ರಾಮ್, ಪ್ರಮುಖರಾದ ಜಿತೇಂದ್ರ, ರಾಜೇಶ್, ಕೆ.ಟಿ. ಪರಮೇಶ್, ಭರತ್, ಕೆ.ಸಿ. ಉದಯ್ ಕುಮಾರ್, ಹೆಚ್. ಡಿ. ಮೋಹನ್ ಸೇರಿದಂತೆ ಗ್ರಾಮಸ್ಥರು ಇದ್ದರು.