ಸಾರಾಂಶ
ಮಂಗಳೂರು ನಗರದ ಸ್ಟೇಟ್ಬ್ಯಾಂಕ್ ಬಳಿ ನಿರ್ಮಾಣಗೊಳ್ಳುತ್ತಿರುವ ಬೀದಿ ಬದಿ ವ್ಯಾಪಾರಿಗಳ ವಲಯವನ್ನು ಸಕಲ ವ್ಯವಸ್ಥೆಗಳೊಂದಿಗೆ ಚೌತಿ ಹಬ್ಬಕ್ಕೂ ಮೊದಲು ವ್ಯಾಪಾರಿಗಳಿಗೆ ಹಸ್ತಾಂತರಿಲು ಸಿದ್ಧತೆ ನಡೆದಿದೆ.
ಮಂಗಳೂರು: ನಗರದ ಸ್ಟೇಟ್ಬ್ಯಾಂಕ್ ಬಳಿ ನಿರ್ಮಾಣಗೊಳ್ಳುತ್ತಿರುವ ಬೀದಿ ಬದಿ ವ್ಯಾಪಾರಿಗಳ ವಲಯವನ್ನು ಸಕಲ ವ್ಯವಸ್ಥೆಗಳೊಂದಿಗೆ ಚೌತಿ ಹಬ್ಬಕ್ಕೂ ಮೊದಲು ವ್ಯಾಪಾರಿಗಳಿಗೆ ಹಸ್ತಾಂತರಿಲು ಸಿದ್ಧತೆ ನಡೆದಿದೆ.
ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಆದಷ್ಟು ಶೀಘ್ರ ಈ ವಲಯವನ್ನು ವ್ಯಾಪಾರಿಗಳಿಗೆ ಹಸ್ತಾಂತರಿಸುವ ಭರವಸೆ ನೀಡಿದ್ದಾರೆ.ಈಗಾಗಲೇ ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗಿದೆ. ಪಾಲಿಕೆಯ ನಿಯಮಾವಳಿಗಳಿಗೆ ವ್ಯಾಪಾರಿಗಳು ಸ್ಪಂದಿಸುತ್ತಿದ್ದು, 18 ನಿಯಮಾವಳಿಗಳನ್ನು ಪಾಲಿಸಿದ ವ್ಯಾಪಾರಿಗಳಿಗೆ ವಲಯಗಳಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ಮೇಯರ್ ತಿಳಿಸಿದ್ದಾರೆ.
ಬೀದಿಬದಿ ವ್ಯಾಪಾರಕ್ಕೆ ಪ್ರಸ್ತುತ ನಿಗದಿ ಪಡಿಸಿದ ಜಾಗದಲ್ಲಿ 123 ಮಂದಿಗೆ ಅವಕಾಶ ಕಲ್ಪಿಸಲು ಪಾಲಿಕೆ ನಿರ್ಧರಿಸಿದೆ. ಆ ನಂತರ ಹಂತ ಹಂತವಾಗಿ ವ್ಯಾಪಾರಿಗಳಿಗೆ ಅವಕಾಶ ದೊರೆಯಲಿದೆ. ಪ್ರಸ್ತುತ ನಿರ್ಮಾಣವಾಗಿರುವ ಜಾಗದಲ್ಲಿ 93 ಮಂದಿಗೆ ಹಾಗೂ ತೆರವುಗೊಳ್ಳುವ ಮಾಂಸದ ಅಂಗಡಿಗಳಿರುವ ಜಾಗದಲ್ಲಿ 30 ಮಂದಿಗೆ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು. ಮೂಲಭೂತ ಸೌಕರ್ಯಗಳನ್ನು ಒಳಗೊಂಡು ವ್ಯವಸ್ಥೆ ಮಾಡಲಾಗುವುದು. ಆ. 31ರಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಿಚಾರ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಮೇಯರ್ ತಿಳಿಸಿದ್ದಾರೆ.