ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ 18 ವಯಸ್ಸಿನ ಒಳಗಿನ ಮಕ್ಕಳಿಗೆ ವಕ್ರ ಬೆನ್ನು ಹುರಿ ತಪಾಸಣಾ ಶಿಬಿರ ಗುರುವಾರ ನಗರದಲ್ಲಿ ನಡೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಗವಾನ್ ಮಹವೀರ್ ಜೈನ್ ಆಸ್ಪತ್ರೆ, ಬೆಂಗಳೂರು ಆಶ್ರಯದಲ್ಲಿ ಕಾರ್ಯಕ್ರಮ ನೆರವೇರಿತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾದಿಕಾರಿ ಡಾ.ಸತೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ರಾಷ್ಟ್ರೀಯ ಬಾಲಸ್ವಾಸ್ಥ್ಯ ಕಾರ್ಯಕ್ರಮದಡಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಗುರುತಿಸಲಾಗಿರುವ ಮಕ್ಕಳನ್ನು ಕರೆಸಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಭಗವಾನ್ ಮಹವೀರ್ ಜೈನ್ ಆಸ್ಪತ್ರೆಯಿಂದ ತಜ್ಞವೈದ್ಯರು ಬಂದಿದ್ದು, ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಅವಶ್ಯಕತೆ ಕಂಡುಬರುವ ಮಕ್ಕಳಿಗೆ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದರು.ಭಗವಾನ್ ಮಹವೀರ್ ಜೈನ್ ಆಸ್ಪತ್ರೆಯ ಬೆನ್ನುಹುರಿ ಮೂಳೆ ಶಸ್ತ್ರಚಿಕಿತ್ಸಕ, ತಜ್ಞವೈದ್ಯ ಡಾ.ಡಿ.ರಾಘವೇಂದ್ರ ರಾವ್ ಮಾತನಾಡಿ, ಬೆನ್ನು ಹುರಿ ವಿರೂಪಗಳನ್ನು 18 ವಯಸ್ಸಿನ ಒಳಗೆ ಶಸ್ತ್ರಚಿಕಿತ್ಸೆ ಮಾಡಿ ಗುಣಪಡಿಸಿದಲ್ಲಿ ಮಕ್ಕಳು ಸಾಮಾನ್ಯ ಮಕ್ಕಳಂತೆ ಭವಿಷ್ಯದ ಜೀವನ ನಡೆಸಬಹುದು ಎಂದು ತಿಳಿಸಿದರು. ಪ್ರತೀ ವರ್ಷ 200 ಮಕ್ಕಳಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಗುರಿ ಹೊಂದಿದ್ದು, ಇಲ್ಲಿಯವರೆಗೆ 120 ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ತಿಳಿಸಿದರು.
ಶಿಬಿರಕ್ಕೆ ಒಟ್ಟು 8 ಮಕ್ಕಳು ಪೋಷಕರೊಂದಿಗೆ ಹಾಜರಾಗಿದ್ದರು. ಇವರನ್ನು ಪರೀಕ್ಷಿಸಿದ ವೈದ್ಯರು 6 ಮಕ್ಕಳಿಗೆ ಬೆಂಗಳೂರಿಗೆ ಬಂದು ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದರು.ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಮಧುಸೂಧನ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸನತ್ಕುಮಾರ್, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಚೇತನ್ ಮತ್ತು ಡಾ.ಇಂದುಧರ ಮತ್ತು ಭಗವಾನ್ ಮಹವೀರ್ ಜೈನ್ ಆಸ್ಪತ್ರೆಯ ವ್ಯವಸ್ಥಾಪಕರು, ಶ್ರೀನಿವಾಸ್ ಬಿ.ವಿ. ಮತ್ತಿತರರಿದ್ದರು.