ಭಕ್ತಿ, ದಯೆ, ಸತ್ಯ, ಸೇವೆ ಮತ್ತು ಪರೋಪಕಾರ ಎಂಬ ಮೌಲ್ಯ ಭಾರತೀಯ ಸಂಸ್ಕೃತಿಯ ಮೂಲಾಧಾರ

ಹನುಮಸಾಗರ: ಮಾನವ ಜೀವನದ ನಿಜವಾದ ಸಾರ್ಥಕತೆ ಧರ್ಮ, ನೈತಿಕತೆ ಮತ್ತು ಆಧ್ಯಾತ್ಮಿಕ ಚಿಂತನೆಗಳಲ್ಲಿ ಅಡಕವಾಗಿದೆ ಎಂದು ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಸಮೀಪದ ಹುಲಸಗೇರಿ ಗ್ರಾಮದಲ್ಲಿ ಶ್ರೀಗವಿಸಿದ್ದೇಶ್ವರನ 5ನೇ ವರ್ಷದ ಜಾತ್ರಾ ಮಹೋತ್ಸವ, ವಿವಿಧ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ವೇಗದ ಯುಗದಲ್ಲಿ ಮಾನವ ಹೊರಗಿನ ಸೌಲಭ್ಯಗಳ ಹಿಂದೆ ಓಡುತ್ತಾ ಅಂತರಂಗದ ಶಾಂತಿ, ಸಂಸ್ಕಾರ ಮತ್ತು ಮಾನವೀಯ ಮೌಲ್ಯ ಮರೆತಿರುವುದು ವಿಷಾದಕರ ಸಂಗತಿ ಎಂದರು.

ಭಕ್ತಿ, ದಯೆ, ಸತ್ಯ, ಸೇವೆ ಮತ್ತು ಪರೋಪಕಾರ ಎಂಬ ಮೌಲ್ಯ ಭಾರತೀಯ ಸಂಸ್ಕೃತಿಯ ಮೂಲಾಧಾರವಾಗಿದ್ದು, ಇವುಗಳನ್ನು ಉಳಿಸಿಕೊಂಡಾಗಲೇ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿ ನೆಲೆಸುತ್ತದೆ. ಸಾಹಿತ್ಯ, ಸಂಸ್ಕೃತಿ ಮತ್ತು ಧರ್ಮ ಪರಸ್ಪರ ಪೂರಕವಾಗಿದ್ದು, ಇವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಯುವಪೀಳಿಗೆ ಹಿರಿಯರ ಸಂಸ್ಕಾರ, ಪರಂಪರೆ ಹಾಗೂ ಆಧ್ಯಾತ್ಮಿಕ ಮಾರ್ಗದರ್ಶನ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆದುಕೊಂಡರೆ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಜಾತ್ರೆಗಳು ಮತ್ತು ಧಾರ್ಮಿಕ ಉತ್ಸವ ಸಮಾಜವನ್ನು ಒಂದಾಗಿ ಕಟ್ಟುವ ಪವಿತ್ರ ವೇದಿಕೆಗಳಾಗಿದ್ದು, ಮಾನವೀಯ ಮೌಲ್ಯ ಬಲಪಡಿಸುವ ಕಾರ್ಯ ಮಾಡುತ್ತವೆ ಎಂದರು.

ಜಾತ್ರೆಯ ಅಂಗವಾಗಿ ಮುತ್ತೈದೆಯರಿಂದ 108 ಕುಂಭ ಮೆರವಣಿಗೆ ಭಕ್ತಿಭಾವದಿಂದ ನೆರವೇರಿತು. ಸಾಂಪ್ರದಾಯಿಕ ವೇಷಭೂಷಣದಲ್ಲಿ ಕುಂಭ ಹೊತ್ತು ಪ್ರಮುಖ ಬೀದಿಗಳಲ್ಲಿ ಭಕ್ತರು ಭಜನೆ-ಗಾನಗಳೊಂದಿಗೆ ಸಾಗಿದ ದೃಶ್ಯ ಭಕ್ತರ ಮನಸ್ಸುಗಳಿಗೆ ಆಧ್ಯಾತ್ಮಿಕ ಉಲ್ಲಾಸ ತುಂಬಿತು. ಇದೇ ವೇಳೆ ಡೊಳ್ಳು ವಾದ್ಯ, ಭಜಂತ್ರಿ ಹಾಗೂ ಧಾರ್ಮಿಕ ಘೋಷಣೆಗಳ ನಡುವೆ ಮೆರವಣಿಗೆ ನಡೆಯಿತು. ಗವಿಸಿದ್ದೇಶ್ವರ ಮಹಾಸ್ವಾಮಿಗಳ ಭಾವಚಿತ್ರ ಮೆರವಣೆಗೆ ಗ್ರಾಮದೆಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಭಕ್ತರು ಭಕ್ತಿಪೂರ್ವಕವಾಗಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ಹಾಗೂ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡ್ಡಿದ್ದರು.