ಒತ್ತಡದ ಬದುಕಿಗೆ ಕ್ರೀಡೆಯಿಂದ ಪರಿಹಾರ: ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ

| Published : Mar 07 2024, 01:48 AM IST

ಸಾರಾಂಶ

ಕ್ರೀಡಾಕೂಟದಲ್ಲಿ ಈ ಹಿಂದೆ ಯಲಬುರ್ಗಾದ ಓರ್ವ ನೌಕರ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿತ್ತು. ಹಾಗಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕು.

ಕೊಪ್ಪಳ: ಸರ್ಕಾರಿ ನೌಕರರು ಇಂದಿನ ದಿನಮಾನಗಳಲ್ಲಿ ಒತ್ತಡದಲ್ಲಿಯೇ ಕಾರ್ಯ ನಿರ್ವಹಿಸಬೇಕಾಗಿರುವುದರಿಂದ ಇದಕ್ಕೆ ಕ್ರೀಡೆ ಮತ್ತು ನಿರಂತರ ವ್ಯಾಯಾಮ ಬಹಳ ಮುಖ್ಯ ಎಂದು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆ ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಜಂಟಿಯಾಗಿ ಹಮ್ಮಿಕೊಂಡಿದ್ದ ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡಾಕೂಟದಲ್ಲಿ ಈ ಹಿಂದೆ ಯಲಬುರ್ಗಾದ ಓರ್ವ ನೌಕರ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ನಡೆದಿತ್ತು. ಹಾಗಾಗಿ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ತಪಾಸಣೆ ಮಾಡಿಸಿಕೊಳ್ಳಬೇಕು. ನಿಮಗೆ ಆರೋಗ್ಯ ಸಮಸ್ಯೆಯಾದರೆ ತಕ್ಷಣ ಚಿಕಿತ್ಸೆ ಪಡೆಯಬೇಕು. ನಿಮ್ಮ ಆರೋಗ್ಯಕ್ಕಾಗಿ ನಾವು ಸದಾ ಸಿದ್ಧರಿರುತ್ತೇವೆ. ಆರೋಗ್ಯವಿಲ್ಲದೆ ಏನೂ ಇಲ್ಲ. ಇಲ್ಲಿ ಕೇವಲ ಎರಡು ದಿನ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಇಲ್ಲಿಯೇ ಬಿಡುವುದು ಅಲ್ಲ, ಪ್ರತಿ ನಿತ್ಯವೂ ಮನೆಯಲ್ಲಿ ವ್ಯಾಯಾಮ ಮಾಡಿ ಆರೋಗ್ಯ ಕಾಪಾಡಿಕೊಳ್ಳಿ ಎಂದರು.ಸಮಾರಂಭದಲ್ಲಿ ಡಿಎಚ್ಒ ಡಾ.ಲಿಂಗರಾಜು, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ್, ಗೋಪಾಲ ದುಬೈ, ಸುಧಾಕರ ಡಿ.ಜೆ, ಶಂಕರಗೌಡ ಮಾಲಿ ಪಾಟೀಲ್, ಕ್ರೀಡಾ ಅಧಿಕಾರಿ ವಿಠ್ಠಲ್ ಜಾಬಗೌಡ, ಶರಣೇಗೌಡ, ಹೊಳಿಬಸಯ್ಯ, ಶರಣಬಸನಗೌಡ ಪಾಟೀಲ್, ಮಹೇಶ ಸಬರದ, ಬಾಲಾಜಿ ರಾವ್, ವೈ.ಜಿ.ಪಾಟೀಲ್, ಕವಿತಾ ಹ್ಯಾಟಿ ಪಾಲ್ಗೊಂಡಿದ್ದರು.