ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ವಿದ್ಯಾರ್ಥಿಗಳಲ್ಲಿ ಕ್ರೀಡೆ ಮತ್ತು ವಿದ್ಯಾಭ್ಯಾಸ ಆಸಕ್ತಿ ಸಮಾನವಾಗಿರಬೇಕು. ಕ್ರೀಡೆ ಮತ್ತು ಓದು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ ಅಭಿಪ್ರಾಯಪಟ್ಟರು.ನಗರದ ಪಿ.ಜೆ. ಬಡಾವಣೆಯ ಸೆಂಟ್ ಪಾಲ್ಸ್ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ಬೆಂಗಳೂರಿನ ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ, ದಾವಣಗೆರೆ ಜಿಲ್ಲಾ ಖೋ ಖೋ ಸಂಸ್ಥೆ, ಏಂಜಲ್ ಮೇರಿ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ನಡೆದ ಕರ್ನಾಟಕ ರಾಜ್ಯ ತಂಡದ ಜೂನಿಯರ್ ಬಾಲಕಿಯರ ಖೋ ಖೋ ತರಬೇತಿ ಶಿಬಿರ ಮುಕ್ತಾಯ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ರೀಡಾ ಕ್ಷೇತ್ರಕ್ಕೆ ಸರ್ಕಾರ ಹೆಚ್ಚಿನ ಸವಲತ್ತುಗಳನ್ನು ನೀಡಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಶ್ರದ್ಧೆಯಿಂದ ಅಭ್ಯಾಸವನ್ನು ಮಾಡಿ. ಏಕೆಂದರೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿಜೇತರಾದವರಿಗೆ ಹೆಚ್ಚಿನ ಅಭ್ಯಾಸಕ್ಕೆ ಮತ್ತು ಸರ್ಕಾರಿ ಕೆಲಸಗಳಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದರು.ಮಾಜಿ ಮಹಾಪೌರರಾದ ರಾಷ್ಟ್ರೀಯ ಖೋ ಖೋ ಕ್ರೀಡಾಪಟು ರೇಖಾ ನಾಗರಾಜ್ ಮಾತನಾಡಿ, ನಾವು ಖೋ ಖೋ ಅಭ್ಯಾಸ ಮಾಡುತ್ತಿದ್ದ ಕಾಲದಲ್ಲಿ ಇಷ್ಟೊಂದು ಸವಲತ್ತುಗಳು ಇರಲಿಲ್ಲ. ಆದರೂ ಆಸಕ್ತಿ ಯಾವತ್ತೂ ಕುಂದಲಿಲ್ಲ. ನಿರಂತರ ಕ್ರೀಡಾ ಅಭ್ಯಾಸದಿಂದ ಪ್ರತಿದಿನ ಹೊಸ ಹೊಸದನ್ನು ಕಲಿಯುತ್ತೇವೆ ಎಂದು ತಿಳಿಸಿದರು.
ಖೋ ಖೋ ಸಂಸ್ಥೆ ರಾಜ್ಯ ಕಾರ್ಯದರ್ಶಿ ಜೆ.ರಾಮಲಿಂಗಪ್ಪ ಮಾತನಾಡಿ, ಜೂನಿಯರ್ ಬಾಲಕಿಯರ ಖೋಖೋ ತರಬೇತಿಯು 2003ರಲ್ಲಿ ನಡೆದಿದೆ. ಇಲ್ಲಿಯವರೆಗೂ ದಾವಣಗೆರೆಯಲ್ಲಿ ಆಯೋಜಿಸಲು ಅವಕಾಶ ಸಿಕ್ಕಿರಲಿಲ್ಲ. ಆದರೆ ಇಂದು ಎಲ್ಲರ ಸಹಕಾರದಿಂದ ತರಬೇತಿ ಶಿಬಿರ ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದರು.ವೀರಶೈವ ಲಿಂಗಾಯತ ಸಮಾಜದ ಮುಖಂಡ ಶಿವರಾಜ ದೇವರಮನೆ, ಸಂತ ಪೌಲರ ಶೈಕ್ಷಣಿಕ ಸಂಸ್ಥೆಗಳ ವ್ಯವಸ್ಥಾಪಕರಾದ ಸಿಸ್ಟರ್ ಸ್ಟೆಲ್ಲಾ ಮಾರಿಸ್, ದಾವಣಗೆರೆ ಜಿಲ್ಲಾ ಖೋ ಖೋ ಸಂಸ್ಥೆ ನಿರ್ದೇಶಕ ಎನ್.ಕೆ.ಕೊಟ್ರೇಶ್, ಏಂಜಲ್ ಮೇರಿ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ವಾಣಿ ಕೇಶವ್, ಪ್ರಾಚಾರ್ಯ ಕೆ.ಟಿ. ಮೇಘನಾಥ, ಉಪನ್ಯಾಸಕ ಆರ್.ವಿಶ್ವನಾಥ, ಖೋ ಖೋ ತರಬೇತುದಾರರಾದ ಎಚ್.ಎಂ. ರಘು, ಲಿಂಗರಾಜು, ಕೆ.ರವಿ ಕುಮಾರ್, ಕೆ.ವಿ.ಪ್ರವೀಣ್, ಚಂದ್ರಶೇಖರ, ಕೆ.ಎನ್. ಗೋಪಾಲಕೃಷ್ಣ, ಮಾಧವಿ ಗೋಪಾಲಕೃಷ್ಣ, ನಾಗರಾಜ ಉತ್ತಂಗಿ, ಎ.ಬಿ.ಸಿದ್ದೇಶ, ಸಂತೋಷ, ಸತೀಶ್ ಶೆಟ್ಟಿ, ರೇಖಾ, ರೂಪ ಇತರರು ಇದ್ದರು.