ಮಾ.31ರಂದು ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ಕ್ರೀಡಾ ಉತ್ಸವ

| Published : Mar 02 2024, 01:47 AM IST

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಪ್ರಯುಕ್ತ ಜಿಲ್ಲಾ ಒಲಿಂಪಿಕ್ ಅಸೋಸಿಯೇಶನ್ ವತಿಯಿಂದ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗಿದೆ

ಬೀದರ್‌: ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಪ್ರಯುಕ್ತ ಜಿಲ್ಲಾ ಒಲಿಂಪಿಕ್ ಅಸೋಸಿಯೇಶನ್ ವತಿಯಿಂದ ನಗರದ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಒಲಿಂಪಿಕ್ ಅಸೋಸಿಯೇಶನ್ ಗೌರವಾಧ್ಯಕ್ಷ ಅನೀಲ ಕುಮಾರ ಬೆಲ್ದಾರ್ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಜಿಲ್ಲಾ ಒಲಿಂಪಿಕ್ ಅಸೋಸಿಯೇಶನ್‌ವತಿಯಿಂದ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೋಡ್ ಸೈಕ್ಲಿಂಗ್, ವಿಕಲಚೇತನರ ಮೋಟರ್ ಟ್ರ್ಯಾಕ್ ರೇಸ್, ವಾಲಿಬಾಲ್, ಕರಾಟೆ ಮತ್ತು ಪೆಂಕಾಕ್ ಸಿಲಾತ್ ಕ್ರೀಡಾಕೂಟಗಳನ್ನು ಮಾ.31ರಂದು ಭಾನುವಾರ ಹಮ್ಮಿಕೊಳ್ಳಲಾಗಿದೆ.

ಸೈಕ್ಲಿಂಗ್ ಕ್ರೀಡಾಕೂಟ ನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭ ಮಾಡಲಾಗುತ್ತಿದೆ. ಪುರುಷ ವಿಭಾಗಕ್ಕೆ 20 ಕಿ.ಮೀ. ಮಹಿಳಾ ವಿಭಾಗಕ್ಕೆ 30 ಕಿ.ಮೀ., ಬಾಲಕರ ವಿಭಾಗಕ್ಕೆ 30 ಕಿ.ಮೀ. ಬಾಲಕಿಯರ ವಿಭಾಗಕ್ಕೆ 20 ಕಿ.ಮೀ. ಸೈಕ್ಲಿಂಗ್ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಮರಳಿ ಅಂಬೇಡ್ಕರ್ ವೃತ್ತದಲ್ಲೇ ಮುಕ್ತಾಯಗೊಳ್ಳಲಿದೆ.

ವಾಲಿಬಾಲ್ ಕ್ರೀಡೆಯನ್ನು ನೆಹರೂ ಕ್ರೀಡಾಂಗಣದಲ್ಲಿ ಹಾಗೂ ಕರಾಟೆ ಮತ್ತು ಪೆಂಕಾಕ್ ಸಿಲಾತ್ ಕ್ರೀಡೆಯನ್ನು ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ. ಕರಾಟೆ ಮತ್ತು ಪೆಂಕಾಕ್ ಸಿಲಾತ್ ಕ್ರೀಡೆಗೆ ಒಬ್ಬರಿಗೆ ನೊಂದಣಿ ಶುಲ್ಕ 500 ರು. ಭರಿಸಬೇಕಾಗುತ್ತದೆ. ಇನ್ನುಳಿದ ಕ್ರೀಡೆಗಳಲ್ಲಿ ತಲಾ ನೊಂದಣಿ ಶುಲ್ಕ 200 ರು. ಭರಿಸತಕ್ಕದ್ದು. ಜಿಲ್ಲೆಯ ಕ್ರೀಡಾಪಟುಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬೆಲ್ದಾರ್ ತಿಳಿಸಿದರು.

ಕ್ರೀಡಾ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಮೌಲಪ್ಪ ಎ.ಮಾಳಗೆ ಮಾತನಾಡಿ, ಈ ಕ್ರೀಡಾಕೂಟದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಂದಾಜು 1600 ಕ್ರೀಡಾಪಟುಗಳು, ತರಬೇತಿದಾರರು ಹಾಗೂ ನಿರ್ಣಾಯಕರು ಹಾಗೂ ಪಾಲಕರು ಪೋಷಕರು ಭಾಗವಹಿಸಲಿದ್ದಾರೆ. ಭಾಗವಹಿಸಿದ ಎಲ್ಲರಿಗೂ ಊಟ, ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.

ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಬಹುಮಾನ ಮತ್ತು ಉತ್ತಮ ಗುಣಮಟ್ಟದ ಪ್ರಶಸ್ತಿ ಪದಕ ಹಾಗೂ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು. ರಕ್ಷಣೆಗಾಗಿ ಅಂಬುಲೆನ್ಸ್ ವ್ಯವಸ್ಥೆ ಕೂಡಾ ಮಾಡಲಾಗಿದೆ ಎಂದು ತಿಳಿಸಿದರು

ಅರ್ಜಿ ಸಲ್ಲಿಸಲು ಮಾ.27 ಕೊನೆಯ ದಿನಾಂಕವಾಗಿರುತ್ತದೆ. ಕ್ರೀಡಾಪಟುಗಳು ತಮ್ಮ ಜನನ ಪ್ರಮಾಣ ಪತ್ರ, ಆಧಾರ್ ಕಾರ್ಡ್ ತಪ್ಪದೇ ನೀಡಬೇಕು. ಅರ್ಜಿಯನ್ನು ಡಿ.ಟ್ರ್ಯಾಕ ಸೈಕಲ್ ಸ್ಟೋರ್, ಶಿವನಗರ ರಸ್ತೆ, ಹಳೆಯ ಆದರ್ಶ ಕಾಲೋನಿ ರೈಲ್ವೆ ಗೇಟ್ ಹತ್ತಿರ ಸಲ್ಲಿಸಬೇಕೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಒಲಿಂಪಿಕ್ ಅಸೋಸಿಯೇಶನ್ ಅಧ್ಯಕ್ಷ ಬಾಬುರಾವ ಪಾಸ್ವಾನ್, ಉಪಾಧ್ಯಕ್ಷ ಸೂರ್ಯಕಾಂತ ಮೋರೆ, ಶ್ರೀಪತರಾವ ದೀನೆ, ಶಿವಕುಮಾರ ನೀಲಿಕಟ್ಟಿ, ಕಾರ್ಯದರ್ಶಿ ಸಂದೀಪ ಕಾಂಟೆ, ಖಜಾಂಚಿ ಸುವಿತ್ ಮೋರೆ ಪ್ರಮುಖರಾದ ಗುಣವಂತ ಶಿಂಧೆ ಸೇರಿದಂತೆ ಇನ್ನಿತರರು ಉಪಸ್ತಿತರಿದ್ದರು.