ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಕ್ರೀಡೆ ಸಹಕಾರಿ: ನಿವೃತ್ತ ಎಸಿಪಿ ಲೋಕೇಶ್ವರ್

| Published : Feb 28 2025, 12:48 AM IST

ಸಾರಾಂಶ

ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿ. ಸದೃಢ ದೇಹ, ನಾಯಕತ್ವ ಗುಣ ಬರಲಿದೆ. ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವುದರ ಮೂಲಕ ಕ್ರೀಡಾ ವಿಭಾಗದಿಂದ ಉದ್ಯೋಗ ಹಾಗೂ ಉನ್ನತ ಶಿಕ್ಷಣ ಪಡೆಯಲು ಸಹ ಸಾಧ್ಯವಾಗುತ್ತದೆ.

ಕನ್ನಡಪ್ರಭ ವಾರ್ತೆ ತಿಪಟೂರು

ದೇಹದ ಅಂಗಾಂಗಗಳು ಸದಾ ಜಾಗೃತವಾದರೆ ಮನುಷ್ಯನ ಬುದ್ದಿಯು ಚುರುಕಾಗುವುದು, ಪ್ರತಿಯೊಬ್ಬರೂ ಕ್ರೀಡೆಯಲ್ಲಿ ಭಾಗವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕ್ರೀಡೆಯಿಂದ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಉತ್ತಮ ನಾಗರಿಕನಾಗಿ ಸಮಾಜದಲ್ಲಿ ಜೀವನ ಸಾಗಿಸಲು ಸಾಧ್ಯ ಎಂದು ರಾಜ್ಯ ಖೋ-ಖೋ ಸಂಸ್ಥೆ ಅಧ್ಯಕ್ಷ ಹಾಗೂ ನಿವೃತ್ತ ಎಸಿಪಿ ಲೋಕೇಶ್ವರ್ ತಿಳಿಸಿದರು.

ತಾಲೂಕಿನ ಕಸಬಾ ಹೋಬಳಿಯ ಮಡೆನೂರು ಗೇಟ್ ಬಳಿಯ ಬಸವೇಶ್ವರ ಕ್ರೀಡಾ ಮೈದಾನದಲ್ಲಿ ನೆಹರು ಯುವ ಕೇಂದ್ರ ತುಮಕೂರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ಬಸವೇಶ್ವರ ಸಮೂಹ ಶಿಕ್ಷಣ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯು ಸೋಲು- ಗೆಲುವು, ನೋವು, ಅವಮಾನ, ಹಸಿವು, ಬೆವರು, ಇವುಗಳನ್ನು ಅನುಭವಿಸುವಂಥ ಒಂದು ಚಟುವಟಿಕೆಯಾಗಿದೆ. ಕ್ರೀಡಾಪಟುಗಳ ಮೇಲೆ ಕೋಟ್ಯಂತರ ರುಪಾಯಿಗಳನ್ನು ವೆಚ್ಚ ಮಾಡಿ ಭಾರತ ದೇಶದಲ್ಲಿ ತರಬೇತಿ ನೀಡಲಾಗುತ್ತಿದೆ. ಸಮರ್ಥ ನಾಗರಿಕನಾಗಿ ಬದುಕಲು ಕ್ರೀಡೆ ಅವಶ್ಯಕ. ಶಿಕ್ಷಣದ ಮೂಲ ಉದ್ದೇಶವೇ ಧೈರ್ಯವಾಗಿದೆ. ಅಂತಹ ಧೈರ್ಯ ಸಿಗುವುದು ಕ್ರೀಡಾಂಗಣದಲ್ಲಿ ಮಾತ್ರ. ಮೊದಲು ಪೋಷಕರು ಮಕ್ಕಳನ್ನು ಆಟದ ಮೈದಾನದಿಂದ ಮನೆಗೆ ಎಳೆದೊಯ್ಯುತ್ತಿದ್ದರು, ಆದರೆ ಇಂದು ಪೋಷಕರು ಮನೆಯಿಂದ ಆಟದ ಮೈದಾನಕ್ಕೆ ಎಳೆದು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಯುವ ಕೇಂದ್ರದ ಯೋಜನಾಧಿಕಾರಿ ರಾಜಶೇಖರ್ ಮಾತನಾಡಿ, ಕ್ರೀಡೆಯು ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿ. ಸದೃಢ ದೇಹ, ನಾಯಕತ್ವ ಗುಣ ಬರಲಿದೆ. ರಾಜ್ಯ, ರಾಷ್ಟ್ರ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವುದರ ಮೂಲಕ ಕ್ರೀಡಾ ವಿಭಾಗದಿಂದ ಉದ್ಯೋಗ ಹಾಗೂ ಉನ್ನತ ಶಿಕ್ಷಣ ಪಡೆಯಲು ಸಹ ಸಾಧ್ಯವಾಗುತ್ತದೆ ಎಂದರು.

ಅತಿಥಿ ಶಿವಾನಂದಯ್ಯ ಮಾತನಾಡಿದರು.

ಕ್ರೀಡಾಕೂಟದಲ್ಲಿ ಖೋ-ಖೋ, ವಾಲಿಬಾಲ್, ನಿಧಾನವಾಗಿ ಸೈಕಲ್ ಓಡಿಸುವುದು, ೧೦೦ ಮೀ ಓಟ, ಷಟಲ್ ಬ್ಯಾಡ್ಮಿಂಟನ್ ಆಟಗಳನ್ನು ೧೬ ರಿಂದ ೨೯ ನೇ ವಯಸ್ಸಿನ ಕ್ರೀಡಾಪಟುಗಳಿಗೆ ಆಯೋಜನೆ ಮಾಡಲಾಗಿತ್ತು.

ಕ್ರೀಡಾಕೂಟದಲ್ಲಿ ದಯಾನಂದ್, ಅನಿಲ್‌ಕುಮಾರ್, ರಾಜಶೇಖರ್, ಮಂಗಳಗೌರಮ್ಮ, ರಾಜಣ್ಣ, ಶಿಕ್ಷಕರಾದ ಧರ್ಮೇಶ್, ಲೋಲಾಕ್ಷಮ್ಮ, ಮಣಿಕಂಠ, ಸತೀಶ್, ಬಾಲಾಜಿ, ನಾಗೇಶ್, ರಾಜಕುಮಾರ್, ಸುರೇಶ್, ನಿವೃತ್ತ ದೈಹಿಕ ಶಿಕ್ಷಕ ವಿಶ್ವನಾಥ್ ಮತ್ತಿತರರಿದ್ದರು.