ಸಾರಾಂಶ
‘ನಾಡಪ್ರಭು ಕೆಂಪೇಗೌಡ ದಿನಾಚರಣೆ’ ಅಂಗವಾಗಿ ಬಿಬಿಎಂಪಿಯ ಅಧಿಕಾರಿ-ನೌಕರರಿಗೆ ಆಯೋಜಿಸಲಾಗಿರುವ ಏಳು ದಿನಗಳ ಕ್ರೀಡಾ ಕೂಟ ಆರಂಭವಾಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
‘ನಾಡಪ್ರಭು ಕೆಂಪೇಗೌಡ ದಿನಾಚರಣೆ’ ಅಂಗವಾಗಿ ಬಿಬಿಎಂಪಿಯ ಅಧಿಕಾರಿ-ನೌಕರರಿಗೆ ಆಯೋಜಿಸಲಾಗಿರುವ ಏಳು ದಿನಗಳ ಕ್ರೀಡಾ ಕೂಟ ಆರಂಭವಾಯಿತು.ಜೂ.13 ರಿಂದ 19 ವರೆಗೆ ಜಯನಗರದ ಕಿತ್ತೂರು ರಾಣಿ ಚೆನ್ನಮ್ಮ ಕ್ರೀಡಾಂಗಣದಲ್ಲಿ ನಡೆಯುವ ಕ್ರೀಡಾಕೂಟಕ್ಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಮಹೇಶ್ವರ್ ರಾವ್, ಪ್ರತಿ ವರ್ಷ ಪಾಲಿಕೆ ಅಧಿಕಾರಿ ಸಿಬ್ಬಂದಿಗೆ ಕ್ರೀಡಾಕೂಟ ಆಯೋಜಿಸುವುದು ಒಳ್ಳೆಯ ಕ್ರಮವಾಗಿದೆ, ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜತೆಗೆ ಅಧಿಕಾರಿ-ನೌಕರರಲ್ಲಿ ಬಾಂಧವ್ಯ, ಹುಮ್ಮಸ್ಸು ಮೂಡಲಿದೆ. ಕೇವಲ ಕ್ರೀಡೆಯಲ್ಲಿ ಆಸಕ್ತಿಯುಳ್ಳವರು ಮಾತ್ರ ಪಾಲ್ಗೊಳ್ಳದೆ ಕ್ರೀಡಾ ಕೂಟದ ವೇಳೆ ಎಲ್ಲ ಅಧಿಕಾರಿ-ನೌಕರರು ಪಾಲ್ಗೊಳ್ಳಬೇಕು ಎಂದರು.ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅಧಿಕಾರಿಗಳಿಗೆ ಹೆಚ್ಚು ಉತ್ತೇಜನ ನೀಡುವ ಜತೆಗೆ ಅವರ ಮಕ್ಕಳನ್ನು ಕೂಡ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಲು ಯೋಜನೆಗಳನ್ನು ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರು.
ಶಿಕ್ಷಣ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮಾತನಾಡಿ, ಪಾಲಿಕೆಯ ಶಿಕ್ಷಣ ಹಾಗೂ ಕಲ್ಯಾಣ ವಿಭಾಗದಿಂದ ಕ್ರೀಡೆ ಸೇರಿದಂತೆ ಇನ್ನಿತರೆ ವಿಷಯಗಳಲ್ಲಿ ಆಸಕ್ತಿ ಇರುವವರಿಗಾಗಿ ವಿಶೇಷ ಯೋಜನೆಗಳನ್ನು ರೂಪಿಸಲಾಗಿದೆ. ಶಿಕ್ಷಣ ವಿಭಾಗದ ಮೂಲಕ ಶಾಲಾ ಮಕ್ಕಳಲ್ಲಿ ಕ್ರೀಡೆ, ನೃತ್ಯ ಸೇರಿದಂತೆ ಇನ್ನಿತರೆ ಚಟುವಟಿಗೆಳಲ್ಲಿ ಪರಿಣತಿ ಪಡೆಯುವ ಸಲುವಾಗಿ ತರಬೇತಿ ನೀಡುವ ಸಂಘ-ಸಂಸ್ಥೆಗಳ ಜೊತೆಗೂಡಿ ಕೆಲಸ ಮಾಡಲಾಗುವುದು ಎಂದು ಹೇಳಿದರು.ಆಡಳಿತ ವಿಭಾಗದ ವಿಶೇಷ ಆಯುಕ್ತ ನವೀನ್ ಕುಮಾರ್ ರಾಜು ಮಾತನಾಡಿ, ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಕೆಂಪೇಗೌಡ ದಿನಾಚರಣೆಯ ದಿನದಂದು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಈ ವೇಳೆ ದಕ್ಷಿಣ ವಲಯ ಆಯುಕ್ತ ದಿಗ್ವಿಜಯ್ ಬೋಡ್ಕೆ, ಸಹಾಯಕ ಆಯುಕ್ತ ದಿಲೀಪ್, ಉಪ ನಿರ್ದೇಶಕ ಲೋಕೇಶ್, ಹಿರಿಯ ಸಹಾಯಕ ನಿರ್ದೇಶಕ ಮುನಿಶಾಮಪ್ಪ, ಬಿಬಿಎಂಪಿ ಅಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಮೃತ್ ರಾಜ್ ಮತ್ತಿತರರು ಇದ್ದರು.