ಸಾರಾಂಶ
ಕನ್ನಡಪ್ರಭ ವಾರ್ತೆ ಭಾಲ್ಕಿ
ಮಕ್ಕಳ ಮನಸ್ಸು ಅರಳಿಸಲು ಕ್ರೀಡೆಗಳು ಪೂರಕವಾಗಿವೆ. ಮಕ್ಕಳು ವಿದ್ಯಾಭ್ಯಾಸದ ಜತೆಗೆ ಕ್ರೀಡೆಯಲ್ಲಿಯು ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.ತಾಲೂಕಿನ ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಲಾಮಟ್ಟದ ವಾರ್ಷಿಕ ಕ್ರೀಡಾಕೂಟ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಕ್ಕಳು ಶಾರೀರಿಕ ಮತ್ತು ದೈಹಿಕ ಬೆಳೆವಣಿಗೆ ಹೊಂದಲು ಕ್ರೀಡೆ ಅತ್ಯಂತ ಸಹಕಾರಿಯಾಗಿದೆ. ಕ್ರೀಡಾ ಕ್ಷೇತ್ರದಲ್ಲಿಯು ಸಾಧನೆಗೆ ವಿಪುಲ ಅವಕಾಶಗಳಿವೆ. ಮಕ್ಕಳು ಕೇವಲ ಶಿಕ್ಷಣದಲ್ಲಿ ಪ್ರಗತಿ ಹೊಂದಿದ ಮಾತ್ರಕ್ಕೆ ವ್ಯಕ್ತಿತ್ವ ಪೂರ್ಣಗೊಳ್ಳುವುದಿಲ್ಲ. ಕ್ರೀಡೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಇದರಿಂದ ಮಕ್ಕಳ ಮಾನಸಿಕ ಮಟ್ಟ ವಿಕಾಸಗೊಳ್ಳುತ್ತದೆ ಎಂದು ತಿಳಿಸಿದರು.
ನೇತೃತ್ವ ವಹಿಸಿದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಕ್ರೀಡಾಕೂಟ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಪಬ್ಲಿಕ್ ಶಾಲೆಯ ಪ್ರಾಚಾರ್ಯ ಶ್ರೀಧರ ರೆಡ್ಡಿ ಪ್ರಾಸ್ತಾವಿಕ ಮಾತನಾಡಿದರು.ಈ ಸಂದರ್ಭದಲ್ಲಿ ಅಲ್ಲಮಪ್ರಭು ಬಿ.ಇಡಿ ಪ್ರಾಚಾರ್ಯ ಆಶಾ ಮುದ್ದಾಳೆ, ದೈಹಿಕ ನಿರ್ದೇಶಕ ಅನಿಲ ಪಾಟೀಲ್, ಮಾಂಟೆಸ್ಸರಿ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಜಯಲಕ್ಷ್ಮಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಗುರುಗಳಾದ ಮಹೇಶ ಕುಲಕರ್ಣಿ, ಸದಾನಂದ ಪವಾರ, ಶಶಿಕುಮಾರ, ವೀರಶೆಟ್ಟಿ ಹೊಳಸಮುದ್ರೆ ಸೇರಿದಂತೆ ಹಲವರು ಇದ್ದರು. ಆಡಳಿತಾಧಿಕಾರಿ ಮೋಹನ ರೆಡ್ಡಿ ಸ್ವಾಗತಿಸಿದರೆ ವಿದ್ಯಾರ್ಥಿನಿಯರಾದ ದೀಕ್ಷಾ, ಪಿಯುಷಾ ನಿರೂಪಿಸಿದರು.