ಚಿಕ್ಕಮಗಳೂರುಕ್ರೀಡೆಗಳು ಮನುಷ್ಯನ ಬದುಕಿನಲ್ಲಿ ಅನಿವಾರ್ಯ ಮತ್ತು ಅಗತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ದೈಹಿಕ, ಮಾನಸಿಕ ಕ್ರೀಡೆ ಬದುಕಿನ ತೊಳಲಾಟ ಇವೆಲ್ಲವನ್ನೂ ಕ್ರೀಡೆ ಎಂದು ಪರಿಗಣಿಸಿದಾಗ ಮಾತ್ರ ಒತ್ತಡದಿಂದ ಹೊರಬರಲು ಸಾಧ್ಯ ಎಂದು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದರು.

ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಕ್ರೀಡೆಗಳು ಮನುಷ್ಯನ ಬದುಕಿನಲ್ಲಿ ಅನಿವಾರ್ಯ ಮತ್ತು ಅಗತ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ದೈಹಿಕ, ಮಾನಸಿಕ ಕ್ರೀಡೆ ಬದುಕಿನ ತೊಳಲಾಟ ಇವೆಲ್ಲವನ್ನೂ ಕ್ರೀಡೆ ಎಂದು ಪರಿಗಣಿಸಿದಾಗ ಮಾತ್ರ ಒತ್ತಡದಿಂದ ಹೊರಬರಲು ಸಾಧ್ಯ ಎಂದು ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದರು.

ನಗರದ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ನಡೆದ ಮೂರು ದಿನಗಳ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿ ಸ್ವೀಕರಿಸಿದ ಮಾತನಾಡಿದರು.

ಜಿಲ್ಲೆಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ನೌಕರರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಜಿಪಂ, ತಾಪಂ ಚುನಾಯಿತ ಪ್ರತಿನಿಧಿಗಳು ಇಲ್ಲದಿದ್ದರೂ ಸಿಇಒ ನೇತೃತ್ವದಲ್ಲಿ ಸಮರ್ಪಕ ಸೇವೆ ಸಲ್ಲಿಸುತ್ತಿದ್ದೀರಿ ಎಂದು ಶ್ಲಾಘಿಸಿದರು.ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲಿ ಹೇಗೆ ಇರಬೇಕೆಂಬ ಕನಸನ್ನು ಜಿಲ್ಲಾ ಪಂಚಾಯಿತಿಯಿಂದ ಕೈಗೊಂಡ ಭದ್ರ ಬಾಲ್ಯ ಯೋಜನೆ ಜಿಲ್ಲೆಯಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಸಿರುವ ಜೊತೆಗೆ, ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ಸಮರ್ಪಕ ಕರವಸೂಲಿ ನಡೆಸಿದ ಪರಿಣಾಮ ರಾಜ್ಯದಲ್ಲೇ 2ನೇ ಸ್ಥಾನವನ್ನು ಜಿಲ್ಲೆ ಪಡೆದಿದೆ. ಇದಕ್ಕೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಮಾತನಾಡಿ ಸರ್ಕಾರಿ ನೌಕರರ ಒತ್ತಡಮುಕ್ತ ಸೇವೆಗೆ ಕ್ರೀಡಾಕೂಟಗಳು ಸಹಕಾರಿ. ನಿಮ್ಮ ಜೀವನದಲ್ಲಿ ಈ ಕ್ರೀಡಾಕೂಟ ಮರೆಯಲಾಗದ ಕ್ಷಣವಾಗಲಿ ಎಂದು ಶುಭ ಹಾರೈಸಿದರು.ಸರ್ಕಾರಿ ಸೇವೆ ಸಲ್ಲಿಸುವಾಗ ಸಮಯ ಸಿಗುವುದಿಲ್ಲ, ಈ ಮೂರು ದಿನ ಬಿಡುವು ಮಾಡಿಕೊಂಡು ಮುಕ್ತ ಮನಸ್ಸಿನಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಿ ಎಂದು ಸಲಹೆ ನೀಡಿದರು.ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ಬೇರೆಯವರೊಂದಿಗೆ ಪರಸ್ಪರ ಸಹಕಾರ ಮತ್ತು ಸಂಯಮ ಬೆಳೆಸಲು ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಸ್ಪರ್ಧಾ ಮನೋಭಾವದಿಂದ ಭಾಗವಹಿಸಿ ಎಂದು ಹೇಳಿದರು.ಕ್ರೀಡಾಕೂಟ ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮಾತನಾಡಿ, ಕ್ರೀಡೆಗಳು ಒತ್ತಡ ಮುಕ್ತಗೊಳಿಸುವ ಜೊತೆಗೆ ಉತ್ತಮ ಬಾಂಧವ್ಯ ಹೊಂದಲು ಪೂರಕವಾಗಿದ್ದು, ಸರ್ಕಾರಿ ನೌಕರರು ಮೂರು ದಿನಗಳ ಈ ಕ್ರೀಡಾಕೂಟದಲ್ಲಿ ಸಕ್ರಿಯವಾಗಿ ಭಾಗವಹಿಸಿ ಎಂದು ಶುಭ ಹಾರೈಸಿದರು.ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರಪ್ಪ ಮಾತನಾಡಿದರು. ಸಹಾಯಕ ನಿರ್ದೇಶಕ ಯೋಗೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಯೋಗೀಶ್ ಮಾತನಾಡಿ ಕಳೆದ 3 ವರ್ಷಗಳಿಂದ ಈ ಕ್ರೀಡಾಕೂಟ ಆಯೋಜನೆ ಮಾಡಲಾಗುತ್ತಿದೆ. ಎಲ್ಲರೂ ಕ್ರೀಡೆಗಳಲ್ಲಿ ಭಾಗವಹಿಸಿ ತಮ್ಮ ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳುವ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಿಳಿಸಿದರು.ಈ ಸಂದರ್ಭದಲ್ಲಿ ಎಸಿಎಫ್ ಆಕಾಶ್, ಜಿ.ಪಂ ಉಪಕಾರ್ಯದರ್ಶಿ(ಆಡಳಿತ) ಶಂಕರ್ ಕೊರವರ್, ಕೆಆರ್‌ಡಿಎಲ್ ಕಾರ್ಯ ಪಾಲಕ ಅಭಿಯಂತರರಾದ ಅಶ್ವಿನಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಮಂಜುಳ ಹುಲ್ಲಳ್ಳಿ, ರಾಜಗೋಪಾಲ್, ನರೇಂದ್ರಕುಮಾರ್, ಸುಜಾತಾ, ವಿಜಯ್‌ಕುಮಾರ್, ನವೀನ್‌ಕುಮಾರ್, ಪ್ರವೀಣ್‌ಕುಮಾರ್, ಸುದೀಪ್, ದಯಾವತಿ, ವಿನುತ ಉಪಸ್ಥಿತರಿದ್ದರು.