- ಕೋಗಳ್ಳಿಯಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲೀಬಾಲ್ ಪಂದ್ಯಾವಳಿ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ1895 ರಲ್ಲಿ ಅಮೆರಿಕಾದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ವಿಲಿಯಂ ಜಿ ಮೋರ್ಗನ್ ಎಂಬುವರು ವಾಲೀಬಾಲ್ ಆಟ ಕಂಡು ಹಿಡಿದಿದ್ದರು ಎಂದು ಕೆಡಿಪಿ ಸದಸ್ಯ ಕೆ.ವಿ.ಸಾಜು ತಿಳಿಸಿದರು.
ಶನಿವಾರ ರಾತ್ರಿ ಕೋಗಳ್ಳಿಯಲ್ಲಿ ವಿಘ್ನೇಶ್ವರ ಯುವಕ ಸಂಘದ ಆಶ್ರಯದಲ್ಲಿ ಪ್ರಥಮ ವರ್ಷದ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲೀಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ ಇಂದು ಗ್ರಾಮೀಣ ಭಾಗದಲ್ಲಿ ಕ್ರಿಕೆಟ್, ವಾಲೀಬಾಲ್ ಪಂದ್ಯಾ ವಳಿ ನಡೆಯುತ್ತಿದ್ದು ಯುವಕರಿಗೆ ಉತ್ಸಾಹ ತರುತ್ತಿದೆ. ಕ್ರೀಡೆಗಳು ಎಲ್ಲಾ ಧರ್ಮ, ಜಾತಿಯವರನ್ನು ಒಂದುಗೂಡಿಸುತ್ತದೆ.ಮನಸ್ಸು,ದೇಹ ಉಲ್ಲಾಸ ಭರಿತವಾಗುತ್ತದೆ. ಶಾಸಕ ಟಿ.ಡಿ.ರಾಜೇಗೌಡರು ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. ಈಗಿನ ಯುವಕರು ಮೊಬೈಲ್ ಹೆಚ್ಚಾಗಿ ಬಳಸದೆ ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಿ ಎಂದು ಕರೆ ನೀಡಿದರು.
ಅತಿಥಿಯಾಗಿದ್ದ ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್. ನಾಗೇಶ್ ಮಾತನಾಡಿ, ಇಲ್ಲಿನ ವಿಘ್ನೇಶ್ವರ ಯುವಕ ಸಂಘದವರು ಪ್ರಥಮ ವರ್ಷದಲ್ಲಿ ಜಿಲ್ಲಾ ಮಟ್ಟದ ವಾಲೀಬಾಲ್ ಪಂದ್ಯಾವಳಿ ಏರ್ಪಡಿಸಿರುವುದು ಸಂತಸದ ವಿಷಯ. ನಾನು ಸ್ಥಾಯಿ ಸಮಿತಿ ಅಧ್ಯಕ್ಷನಾಗಿದ್ದಾಗ ಇಲ್ಲಿನ ಸಮುದಾಯಭವನಕ್ಕೆ ಆಗಿನ ಶಾಸಕ ಡಿ.ಎನ್.ಜೀವರಾಜ್ ಅವರಿಂದ ಅನುದಾನ ಮಂಜೂರು ಮಾಡಿಸಿದ್ದೆ. ಅದನ್ನು ಇಲ್ಲಿನ ಯುವಕರು ಈಗಲೂ ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ.ಗ್ರಾಮೀಣ ಕ್ರೀಡೆಯತ್ತ ಯುವಕರು ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಕೋಗಳ್ಳಿ ಸಂದೀಪ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಘ್ನೇಶ್ವರ ಯುವಕ ಸಂಘದ ಅಧ್ಯಕ್ಷ ಬಿ.ವಿ.ದೀಪಕ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಗುಬ್ಬಿಗ ಗ್ರಾಪಂ ಮಾಜಿ ಅಧ್ಯಕ್ಷೆ ನಾಗರತ್ನ, ಗ್ರಾಪಂ ಮಾಜಿ ಸದಸ್ಯರಾದ ವಸಂತ ಕೋಟ್ಯಾನ್, ಉಮಾ ದೇವಿ, ಅರಣ್ಯ ಇಲಾಖೆಯ ಪರಮೇಶ ನಾಯಕ್, ಮುಖಂಡರಾದ ಕೆ.ಎನ್.ಅಭಿಜತ್, ಕೋಗಳ್ಳಿ ಮಂಜುನಾಥ್, ಕೋಗಳ್ಳಿ ಮಹೇಶ್, ಸಿಂಸೆಯ ರಜಿ ಇದ್ದರು.
ಇದೇ ಸಂದರ್ಭದಲ್ಲಿ ಸೈನಿಕ ನಿತ್ಯನ್ ಹಾಗೂ ತಾಪಂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಅವರನ್ನು ಗೌರವಿಸಲಾಯಿತು. ಸುನೀತ ಕಾರ್ಯಕ್ರಮ ನಿರೂಪಿಸಿದರು.ವಾಲೀಬಾಲ್ ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸಿದ್ದವು. ಎನ್.ಆರ್.ಪುರ ಆರ್ ಡಿ.ಎಂ. ತಂಡ ಪ್ರಥಮ, ಎನ್.ಆರ್.ಪುರ ಸ್ಲೈಕ್ ಪೋರ್ಸ್ ತಂಡ ದ್ವಿತೀಯ, ಎನ್.ಆರ್.ಪುರ ರಜಿ ಬಾಯ್ಸ್ ತಂಡ ತೃತೀಯ ಹಾಗೂ ಕೋಗಳ್ಳಿ ಯವಕರ ತಂಡ ಚತುರ್ಥ ಬಹುಮಾನ ಪಡೆಯಿತು.