ಕನ್ನಡಪ್ರಭ ವಾರ್ತೆ ಹಾಸನ

ಮಹಾನಗರ ಪಾಲಿಕೆ ನೀಡಿದ್ದ ಒಂದು ವಾರದ ಅಂತಿಮ ಗಡುವನ್ನೂ ಲೆಕ್ಕಿಸದೆ ಕಟ್ಟಿನಕೆರೆ ಮಾರ್ಕೆಟ್ ರಸ್ತೆಯಲ್ಲಿ ಅನಧಿಕೃತವಾಗಿ ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡು ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳ ವಿರುದ್ಧ ಈಗಾಗಲೇ ಒಂದು ವಾರದ ಎಚ್ಚರಿಕೆ ನೀಡಿ ತೆರವಿಗೆ ಮುಂದಾದಗ ವ್ಯಾಪಾರಸ್ಥರ ಮನವಿಗೆ ಇನ್ನೂ ೮ ದಿನಗಳ ಗಡುವು ನೀಡಿದ ಪಾಲಿಕೆ ಅಧಿಕಾರಿಗಳು ಪಾಲಿಸದಿದ್ದರೇ ಮುಂದೆ ಕಠಿಣ ಆಡಳಿತ ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

ಸಾರ್ವಜನಿಕ ಓಡಾಟಕ್ಕೆ ತೀವ್ರ ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ, ರಸ್ತೆ ಜಾಗದಲ್ಲೇ ಅನಧಿಕೃತ ಅಂಗಡಿಗಳನ್ನು ಸ್ಥಾಪಿಸಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳಿಗೆ ಹಾಸನ ಮಹಾನಗರ ಪಾಲಿಕೆ ಎಂಜಿನಿಯರ್‌ ಕವಿತಾ ಅವರು ವಾರದ ಹಿಂದೆಯೇ ಸ್ಪಷ್ಟ ಸೂಚನೆ ನೀಡಿ ಸೋಮವಾರದವರೆಗೂ ಕಾಲಾವಕಾಶ ನೀಡಿದ್ದರು. ಆದರೂ ಯಾವುದೇ ತೆರವು ಕಾರ್ಯ ನಡೆಯದ ಹಿನ್ನೆಲೆ, ಸೋಮವಾರದಂದು ಎರಡು ಜೆಸಿಬಿ, ಟ್ರ್ಯಾಕ್ಟರ್‌ಗಳು ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ಕಟ್ಟಿನಕೆರೆ ಮಾರ್ಕೆಟ್ ಪ್ರದೇಶಕ್ಕೆ ತೆರಳಿ ನೇರವಾಗಿ ತೆರವು ಕಾರ್ಯಾಚರಣೆಗೆ ಸಿದ್ಧರಾದರು. ಜೆಸಿಬಿ ಸ್ಥಳಕ್ಕೆ ಬಂದಾಗ ಮಾತ್ರ ಎಚ್ಚೆತ್ತುಕೊಂಡ ಕೆಲ ವ್ಯಾಪಾರಿಗಳು ತಬ್ಬಿಬ್ಬಾಗಿ, ಶಿವರಾತ್ರಿ ಹಬ್ಬದ ನೆಪವೊಡ್ಡಿ ಮತ್ತೊಮ್ಮೆ ಒಂದು ವಾರಗಳ ಕಾಲ ಸಮಯ ನೀಡುವಂತೆ ಮನವಿ ಮಾಡಿಕೊಂಡರು. ಆದರೆ ಈ ಬಾರಿ ಇದು ಅಂತಿಮ ಅವಕಾಶ ಎಂದು ಕಠಿಣವಾಗಿ ಸ್ಪಷ್ಟಪಡಿಸಿದ ಪಾಲಿಕೆ ಅಧಿಕಾರಿಗಳು, ಮಾನವೀಯ ಕಾರಣಕ್ಕೆ ಎಂಟು ದಿನಗಳ ಗಡುವು ಮಾತ್ರ ನೀಡಲಾಗಿದ್ದು, ಇದನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗುವುದಿಲ್ಲ ಎಂದು ತಾಕೀತು ಮಾಡಿದರು.

ಮುಂದಿನ ಮಂಗಳವಾರದೊಳಗೆ ಅನಧಿಕೃತವಾಗಿ ಸ್ಥಾಪಿಸಿರುವ ಎಲ್ಲಾ ಅಂಗಡಿಗಳನ್ನು ಸ್ವಯಂ ತೆರವು ಮಾಡದಿದ್ದರೆ, ಯಾವುದೇ ಮುನ್ಸೂಚನೆ ಇಲ್ಲದೆ ಜೆಸಿಬಿ ಮೂಲಕ ಡೆಮೊಲಿಶನ್ ನಡೆಸಲಾಗುವುದು. ತೆರವು ಕಾರ್ಯಾಚರಣೆಗೆ ಪೊಲೀಸ್ ಬಲವನ್ನು ಬಳಸಿ ಸಾರ್ವಜನಿಕ ರಸ್ತೆ ಸಂಪೂರ್ಣವಾಗಿ ತೆರವುಗೊಳಿಸಲಾಗುವುದು ಎಂದು ಪಾಲಿಕೆ ಎಂಜಿನಿಯರ್‌ ಅಧಿಕಾರಿ ಕವಿತಾ ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದ ಪ್ರಮುಖ ವ್ಯಾಪಾರ ಕೇಂದ್ರವಾಗಿರುವ ಕಟ್ಟಿನಕೆರೆ ಮಾರ್ಕೆಟ್ ರಸ್ತೆಯಲ್ಲಿ ಅನಧಿಕೃತ ಒತ್ತುವರಿ ಸಂಪೂರ್ಣವಾಗಿ ಅಸಹ್ಯಕರವಾಗಿದ್ದು, ಕಾನೂನು ಉಲ್ಲಂಘನೆಗೆ ಯಾವುದೇ ಸಡಿಲತೆ ನೀಡಲಾಗುವುದಿಲ್ಲ. ಸಾರ್ವಜನಿಕ ಹಿತಾಸಕ್ತಿಯೇ ಮೊದಲ ಆದ್ಯತೆ ಎಂಬುದನ್ನು ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.