ಸಾರಾಂಶ
ತಾಲೂಕಿನ ಯಲಕನೂರು- ಕಾಟಿಕೊಪ್ಪಲು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ 2 ವರ್ಷದ ವಾರ್ಷಿಕೋತ್ಸವ ನಡೆಯಿತು. ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕಿನ ಯಲಕನೂರು-ಕಾಟಿಕೊಪ್ಪಲು ಗ್ರಾಮದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ 2ನೇ ವರ್ಷದ ವಾರ್ಷಿಕೋತ್ಸವ ನಡೆಯಿತು.ಪೂಜಾ ಕಾರ್ಯಕ್ರಮದಲ್ಲಿ ಮಂಗಳವಾದ್ಯದೊಂದಿಗೆ ಕಳಸ ತಂದ ನಂತರ ದೇವಾಲಯದಲ್ಲಿ ಗಣಪತಿ ಹೋಮ, ತಾಯಿಗೆ ಕಲಾತತ್ವ ಹೋಮ, ಪಂಚಾಮೃತ ಅಭಿಷೇಕ ನಡೆಯಿತು. ಸಂಜೆ 6 ಗಂಟೆಗೆ ಉತ್ಸವ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿರಿಸಿ ಊರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು.
ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಊರಿಗೊಂದು ದೇವಾಲಯ ಇರಬೇಕು. ಅದರಲ್ಲಿ ಎಲ್ಲರೂ ದಿನದ ಅಲ್ಪ ಸಮಯವನ್ನು ಕಳೆಯುವಂತಾಗಬೇಕು. ಕೇವಲ ವಾಷಿಕೋತ್ಸವದಲ್ಲಿ ಮಾತ್ರ ಬಂದುಹೋಗುವುದಕ್ಕೆ ಸೀಮಿತವಾಗಬಾರದು. ಗ್ರಾಮಗಳಲ್ಲಿ ಅಭಿವೃದ್ಧಿಯ ಮೂಲಕ ಎಲ್ಲರೂ ಒಂದಾಗಿ ಬಾಳುವ ಮೂಲಕ ಸಮಾಜದ ಏಳಿಗೆಗೆ ಮುಂದಾಗಬೇಕು ಎಂದರು.ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಬಸವರಾಜು ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ವಿ.ಎಂ. ವಿಜಯ, ಮುತ್ತಣ್ಣ, ಸತೀಶ್, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಕಿರಣ್, ಪಟ್ಟಣ ಪಂಚಾಯಿತಿ ನಾಮನಿರ್ದೇಶಿತ ಸದಸ್ಯ ಡಿ.ಯು. ಕಿರಣ್, ಸಮಿತಿ ಉಪಾಧ್ಯಕ್ಷ ಎನ್.ಎನ್. ಗಣೇಶ್, ಕಾರ್ಯದರ್ಶಿ ದಯಾನಂದ, ರಘುನಾಥ್, ಖಜಾಂಚಿ ಕೆ.ಪಿ. ಬಸವರಾಜು ಇದ್ದರು. ಎಲ್ಲ ಪೂಜಾ ಕಾರ್ಯಗಳು ಹುದುಗೂರಿನ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ನಡೆದವು.