ಸಾರಾಂಶ
ಎಡಿಸಿ ಡಾ.ಎಚ್.ಎಲ್ ನಾಗರಾಜ್ರವರ ಮಾರ್ಗದರ್ಶನಲ್ಲಿ ಆರಂಭಗೊಂಡ ವಿಶೇಷ ಮಂಗಳವಾದ್ಯ ಕೈಂಕರ್ಯ, ನಾದೋಪಾಸನ ಸೇವೆ 9ನೇವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ತೆಪ್ಪೋತ್ಸವದಂದು ವಿದ್ವಾನ್ ಆನಂದ್ ಅಭಿಲಾಷ್ ಮತ್ತು ಕುಮಾರ್ ಅಶೋಕ್ ಪುಟ್ಟರಾಜು ನಾದಸ್ವರ ನುಡಿಸಿ ಉತ್ಸವಕ್ಕೆ ಮೆರಗು ನೀಡಿದರು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ಶ್ರೀ ಚೆಲುವ ನಾರಾಯಣಸ್ವಾಮಿಯವರ ಪ್ರಥಮ ತೆಪ್ಪೋತ್ಸವ ಬುಧವಾರ ರಾತ್ರಿ ಸಂಭ್ರಮದಿಂದ ನೆರವೇರಿತು.ವೈರಮುಡಿ ಬ್ರಹ್ಮೋತ್ಸವಕ್ಕೆ ಪೂರ್ವಭಾವಿಯಾಗಿ ಕಲ್ಯಾಣಿಯಲ್ಲಿ ನಡೆದ ಸ್ವಾಮಿಯ ಜಲವಿಹಾರದ ವೈಭವವನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.
ಚೆಸ್ಕಾಂ ಇಂಜಿನಿಯರ್ ಸಲಹೆಯಂತೆ ಮೈಸೂರಿನ ಹನಿ ಎಲೆಕ್ಟ್ರಿಕಲ್ ವತಿಯಿಂದ ಕಲ್ಯಾಣಿಗೆ ಸರಳ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಪಾಂಡವಪುರ ಖಜಾನೆಯಿಂದ ತಂದ ಅಮೂಲ್ಯ ಮುತ್ತಮುಡಿಯೊಂದಿಗೆ ಚೆಲುವ ನಾರಾಯಣಸ್ವಾಮಿಯನ್ನು ಅಲಂಕರಿಸಿ ಸಂಜೆ 7ಗಂಟೆ ವೇಳೆಗೆ ಮಹೂರ್ತ ಪಠಣ ನೆರವೇರಿಸಿ, ನಂತರ ತೆಪ್ಪೋತ್ಸವಕ್ಕೆ ಚಾಲನೆ ನೀಡಲಾಯಿತು. ಕಲ್ಯಾಣಿಯಲ್ಲಿ ಮೂರು ಪ್ರದಕ್ಷಿಣೆಯೊಂದಿಗೆ ಪ್ರಥಮ ತೆಪ್ಪೋತ್ಸವ ರಾತ್ರಿ 8 ಗಂಟೆಗೆ ಮುಕ್ತಾಯವಾಯಿತು.ಎಡಿಸಿ ಡಾ.ಎಚ್.ಎಲ್ ನಾಗರಾಜ್ರವರ ಮಾರ್ಗದರ್ಶನಲ್ಲಿ ಆರಂಭಗೊಂಡ ವಿಶೇಷ ಮಂಗಳವಾದ್ಯ ಕೈಂಕರ್ಯ, ನಾದೋಪಾಸನ ಸೇವೆ 9ನೇವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ತೆಪ್ಪೋತ್ಸವದಂದು ವಿದ್ವಾನ್ ಆನಂದ್ ಅಭಿಲಾಷ್ ಮತ್ತು ಕುಮಾರ್ ಅಶೋಕ್ ಪುಟ್ಟರಾಜು ನಾದಸ್ವರ ನುಡಿಸಿ ಉತ್ಸವಕ್ಕೆ ಮೆರಗು ನೀಡಿದರು.
ಮಾರ್ಚ್ 17ರಿಂದ 28ರವರೆಗೆ 14 ದಿನಗಳ ಕಾಲ ನುರಿತ ನಾದಸ್ವರ ಕಲಾವಿದರು ವಿವಿಧ ಉತ್ಸವ, ವಾಹನೋತ್ಸವ, ಅಭಿಷೇಕಗಳಲ್ಲಿ ಮಂಗಳವಾದ್ಯ ನುಡಿಸಲಿದ್ದಾರೆ. ತೆಪ್ಪೋತ್ಸವದ ವೇಳೆ ಕಲ್ಯಾಣಿಯಲ್ಲಿ ಅಚ್ಚುಕಟ್ಟಾಗಿ ಶುಚಿತ್ವ ಕಾಪಾಡುವ ಜೊತೆಗೆ ಸರಳ ದೀಪಾಲಂಕಾರ ಮಾಡಿದ್ದು, ಭಕ್ತರಿಗೆ ಮುದ ನೀಡಿತ್ತು.