ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ ಮಾಡಾಳು ಗ್ರಾಮದ ಶ್ರೀ ಸ್ವರ್ಣಗೌರಮ್ಮ ದೇವಿ ದೇವಾಲಯದಲ್ಲಿ ಕಾತ್ಯಾಯಿನಿ ಅಮಾವಾಸ್ಯೆ ಅಂಗವಾಗಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ಸುಕ್ಷೇತ್ರ ಹಾರನಹಳ್ಳಿ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಪಾದಪೂಜೆ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಕೋಡಿಮಠ ಜಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಸಂಕಲ್ಪದಂತೆ ಲೋಕಕಲ್ಯಾಣಾರ್ಥವಾಗಿ ಪ್ರತೀ ಅಮಾವಾಸ್ಯೆಯಂದು ವಿಶೇಷ ಪೂಜೆಗಳನ್ನು ಆಯೋಜಿಸಲಾಗುತ್ತಿದ್ದು, ಈ ಬಾರಿ ನಡೆದ ಕಾರ್ಯಕ್ರಮವೂ ಅಪಾರ ಭಕ್ತಸಾಗರದ ನಡುವೆ ಯಶಸ್ವಿಯಾಗಿ ನೆರವೇರಿತು. ಪಾದಪೂಜೆಯ ಬಳಿಕ ಆಶೀರ್ವಚನ ನೀಡಿದ ಶ್ರೀ ಚೇತನ್ ಮರಿದೇವರು, “ಮಾನವನ ಬದುಕು ಸತ್ಯ, ಸದಾಚಾರ ಮತ್ತು ಧರ್ಮದ ಮೌಲ್ಯಗಳ ಮೇಲೆ ನೆಲೆಯೂರಿರಬೇಕು. ಸಜ್ಜನರಿಗೆ ಬರುವ ಸಂಕಷ್ಟ ಹಾಗೂ ದುರ್ಜನರಿಗೆ ದೊರೆಯುವ ಸಂಪತ್ತು ಶಾಶ್ವತವಲ್ಲ. ಜೀವನದಲ್ಲಿ ಸಂಸ್ಕಾರ ಮತ್ತು ಶಿವಜ್ಞಾನವನ್ನು ಬೆಳೆಸುವ ಗುರುಗಳ ಮಾರ್ಗದರ್ಶನವೇ ವ್ಯಕ್ತಿತ್ವ ನಿರ್ಮಾಣಕ್ಕೆ ಆಧಾರ” ಎಂದು ಹೇಳಿದರು. ಭಕ್ತನ ಹೃದಯವೇ ಭಗವಂತನ ನಿಜವಾದ ದೇವಾಲಯವಾಗಿದ್ದು, ಗುರುಕೃಪೆಯ ಬೆಳಕು ಜೀವನದ ದಿಕ್ಕನ್ನು ಬದಲಾಯಿಸುವ ಶಕ್ತಿ ಹೊಂದಿದೆ ಎಂದು ತಿಳಿಸಿದರು. ನಂತರ ದೇವಾಲಯದಲ್ಲಿ ಶ್ರೀ ಸ್ವರ್ಣಗೌರಮ್ಮ ದೇವಿ, ಮಹಾತಪಸ್ವಿ ಶಿವಲಿಂಗಜ್ಜಯ್ಯ ಮೂರ್ತಿ ಹಾಗೂ ಗ್ರಾಮದ ಆರಾಧ್ಯದೈವ ಶ್ರೀ ಗುರು ಚನ್ನಬಸವೇಶ್ವರ ಸ್ವಾಮಿಗೆ ವಿಶೇಷ ಪೂಜೆ, ಕರ್ಪೂರಾರತಿ ಮತ್ತು ಮಂಗಳಾರತಿ ನೆರವೇರಿಸಲಾಯಿತು. ಅಮಾವಾಸ್ಯೆ ಪ್ರಯುಕ್ತ ದೇವಾಲಯವನ್ನು ತಳಿರು ತೋರಣ, ಬಾಳೆಕಂದು ಹಾಗೂ ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದು, ದೇವಾಲಯದ ಆವರಣವು ಭಕ್ತರ ಗಮನ ಸೆಳೆಯಿತು.ಕಾರ್ಯಕ್ರಮಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಈರೇಗೌಡರ ಶಿವಲಿಂಗಪ್ಪ ಹಾಗೂ ಕುಟುಂಬದವರು ದಾಸೋಹ ವ್ಯವಸ್ಥೆ ಕಲ್ಪಿಸಿದ್ದರು. ಮಾಡಾಳು ಸೇರಿದಂತೆ ಸೀತಾಪುರ, ಕೊಪ್ಪಲು, ಯರೇಹಳ್ಳಿ, ಶಶಿವಾಳ, ರಾಂಪುರ, ಡಿಎಂ ಕುರ್ಕೆ, ಹಾರನಹಳ್ಳಿ, ಅಣ್ಣಾಯಕನಹಳ್ಳಿ, ನಾಗತಿಹಳ್ಳಿ, ವೈಜಿಹಳ್ಳಿ, ಪಿ.ಹೊಸಹಳ್ಳಿ, ಕಿತ್ತನಕೆರೆ, ದೋಣನಕಟ್ಟೆ, ಬೊಮ್ಮಸಮುದ್ರ, ಶಂಕರನಹಳ್ಳಿ, ಕಡಲ ಮಗೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡು ದೇವಿಯ ದರ್ಶನ ಪಡೆದರು.