ಸಾರಾಂಶ
ದಶರಥ ರಾಮೇಶ್ವರ ವಜ್ರ ಅತ್ಯಂತ ಪ್ರಾಚೀನ ಹಾಗೂ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಶಿವರಾತ್ರಿ ನಂತರದ ಹನ್ನೊಂದನೇ ದಿನ ಶ್ರೀ ದಶರಥ ರಾಮೇಶ್ವರಸ್ವಾಮಿಯ ರಥೋತ್ಸವ ನಡೆಯುತ್ತದೆ.
ಕನ್ನಡಪ್ರಭ ವಾರ್ತೆ ಹೊಸದುರ್ಗ
ತಾಲೂಕಿನ ಮತ್ತೋಡು ಹೋಬಳಿ ಗುಡ್ಡದನೇರಲಕೆರೆ ಸಮೀಪದ ಬೆಟ್ಟದಲ್ಲಿರುವ ಶ್ರೀ ದಶರಥ ರಾಮೇಶ್ವರ ಸ್ವಾಮಿಯ ರಥೋತ್ಸವ ಮಾ.20ರ ಬುಧವಾರ ಬೆಳಗ್ಗೆ 5.30ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನಡೆಯಲಿದೆ.ದಶರಥ ರಾಮೇಶ್ವರ ವಜ್ರ ಅತ್ಯಂತ ಪ್ರಾಚೀನ ಹಾಗೂ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಶಿವರಾತ್ರಿ ನಂತರದ ಹನ್ನೊಂದನೇ ದಿನ ಶ್ರೀ ದಶರಥ ರಾಮೇಶ್ವರಸ್ವಾಮಿಯ ರಥೋತ್ಸವ ನಡೆಯುತ್ತದೆ. ಗುಡ್ಡದನೇರಲಕೆರೆ ಗ್ರಾಮದಲ್ಲಿರುವ ದಶರಥ ರಾಮೇಶ್ವರ ಉತ್ಸವಮೂರ್ತಿಯ ಬೆಟ್ಟಕ್ಕೆ ಕರೆದೊಯ್ದು ರಥದಲ್ಲಿ ಪ್ರತಿಷ್ಠಾಪಿಸಿ ಉತ್ಸವ ಮಾಡಲಾಗುತ್ತದೆ.
ರಥೋತ್ಸವದ ನಂತರ ಶ್ರೀಕಂಚಿ ವರದರಾಜಸ್ವಾಮಿಯ ಮುಳ್ಳುಪಾದುಕಾ ಸೇವೆ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ಕೆ ಕಂಚೀಪುರದ ಕಂಚಿವರದರಾಜ ಸ್ವಾಮಿ, ದಸೂಡಿಯ ಆಂಜನೇಯ ದೇವರುಗಳನ್ನು ಕರೆತರಲಾಗುವುದು. ಈ ಜಾತ್ರಾ ಮಹೋತ್ಸವದ ಅಂಗವಾಗಿ ಮಾ.16ರ ಶನಿವಾರದಂದು ಗುಡ್ಡದ ನೇರಲಕೆರೆ ದೇವಸ್ಥಾನದಲ್ಲಿ ಧ್ವಜಾರೋಹಣ ಹಾಗೂ ಬೇರಿತಾಡತನ ಕಾರ್ಯಗಳನ್ನು ನಡೆಸುವ ಮೂಲಕ ರಥೋತ್ಸವಕ್ಕೆ ಚಾಲನೆ ದೊರೆಯಲಿದೆ.ಭಾನುವಾರದಂದು ಗುಡ್ಡದ ನೇರಲಕೆರೆ ಗ್ರಾಮದ ದೇವಸ್ಥಾನದಲ್ಲಿ ಶ್ರೀ ಸ್ವಾಮಿಗೆ ಪಂಚಾಮೃತ ಅಭಿಷೇಕ, ನಂದಿಪುರಾಣ, ಅಂಕುರಾರ್ಪಣೆ, ಮಂಟಪಾಲಂಕಾರ ಹಾಗೂ ಕಂಕಣಧಾರಣೆ ನಡೆಯಲಿದೆ. ಸೋಮವಾರದಂದು ಸ್ವಾಮಿಯನ್ನು ಗುಡ್ಡದನೇರಲಕೆರೆ ಗ್ರಾಮದಿಂದ ಮೂಲಕ್ಷೇತ್ರ ದೊಡ್ಡವಜ್ರಕ್ಕೆ ಕರೆತರಲಾಗುತ್ತದೆ. ಕಂಚಿ ವರದರಾಜಸ್ವಾಮಿ ಹಾಗೂ ದಸೂಡಿ ಆಂಜನೇಯ ಸ್ವಾಮಿಯ ಭೇಟಿ ಕಾರ್ಯಕ್ರಮ ನಡೆಯಲಿದ್ದು, ಮಂಗಳವಾರ ವೀರಭದ್ರದೇವರ ಕೆಂಡಾರ್ಚನೆ ನಡೆ ಯಲಿದೆ. ಬುಧವಾರ ಶ್ರೀ ದಶರಥ ರಾಮೇಶ್ವರಸ್ವಾಮಿಯ ರಥೋತ್ಸವ ಜರುಗಲಿದೆ.
ಐತಿಹ್ಯ: ರಾಮಾಯಣ ಕಾಲದ ಕೆಲವು ಪುಣ್ಯಕ್ಷೇತ್ರಗಳಲ್ಲಿ ದಶರಥರಾಮೇಶ್ವರವೂ (ದೊಡ್ಡವಜ್ರ) ಒಂದು. ದಶರಥ ಮಹಾರಾಜನ ಬಾಣಕ್ಕೆ ಶ್ರವಣಕುಮಾರನು ಹತನಾದ ನಂತರ ಶಾಪ ವಿಮೋಚನೆಯಿಂದ ಮುಕ್ತಿ ಪಡೆಯಲು ದಶರಥನು ಶಿವಲಿಂಗವನ್ನು ಸ್ಥಾಪಿಸುತ್ತಾನೆ. ದಶರಥನು ಸ್ಥಾಪಿಸಿದ ಶಿವಲಿಂಗಕ್ಕೆ ವನವಾಸ ಪೂರೈಸಿ ಅಯೋಧ್ಯೆಗೆ ತೆರಳುತ್ತಿದ್ದ ಶ್ರೀರಾಮನು ಪೂಜಿಸಿದ್ದರಿಂದ ಇದನ್ನು ‘ದಶರಥರಾಮೇಶ್ವರ’ ಎಂದು ಕರೆಯಲಾಗುತ್ತದೆ ಎನ್ನುವ ಇತಿಹಾಸವಿದೆ.ನಿಜವಾದ ‘ರಾಮಮಂದಿರ’ ಭವಿಷ್ಯ
ದಶರಥರಾಮೇಶ್ವರ ಡೊಡ್ಡವಜ್ರದಲ್ಲಿ ಉದ್ಬವ ಮೂರ್ತಿ ಇದ್ದರೆ, ಗುಡ್ಡದನೇರಲಕೆರೆಯಲ್ಲಿ ದಶರಥ ರಾಮೇಶ್ವರಸ್ವಾಮಿಯ ಉತ್ಸವ ಮೂರ್ತಿಯ ದೇವಸ್ಥಾನವಿದೆ. ಅಯೋಧ್ಯೆಯ ಶ್ರೀರಾಮ ಸಂಸ್ಕೃತಿ ಶೋಧ ಸಂಸ್ಥಾನ ನ್ಯಾಸ ತಂಡದ ಸದಸ್ಯರು 2017ರಲ್ಲಿ ದಶರಥ ರಾಮೇಶ್ವರ ವಜ್ರಕ್ಕೆ ಭೇಟಿ ನೀಡಿ ಅಲ್ಲಿನ ಐತಿಹ್ಯ ಹಾಗೂ ಶ್ರವಣಕುಮಾರ ಕಥೆ ಕೇಳಿದ್ದರು. ರಾಮಾಯಣಕ್ಕೆ ಸಂಬಂಧಪಟ್ಟಪವಿತ್ರ ತಾಣಗಳಲ್ಲಿ ಇದು ಒಂದು ಎಂದು ಗುರುತಿಸಿದ್ದರು. ಆ ಸಂದರ್ಭದಲ್ಲಿ 2018ರ ಬಳಿಕ ರಾಮಮಂದಿರ ನಿರ್ಮಾಣಕ್ಕೆ ಶುಭ ಸೂಚನೆ ದೊರೆಯಲಿದೆ. ಅಯೋಧ್ಯೆಯ ವಿವಾಧೀತ ಜಾಗದಲ್ಲೇ ರಾಮಮಂದಿರ ದೇಗಲ ನಿರ್ಮಾಣವಾಗಲಿದೆಂದು ತಿಳಿಸಲಾಗಿತ್ತು. ಭವಿಷ್ಯವಾಣಿಯಂತೆಯೇ ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣಗೊಂಡಿದೆ.