ಶ್ರೀ ಜಗಜ್ಯೋತಿ ಬಸವಣ್ಣ ದೇಶದ ಬಹುದೊಡ್ಡ ಸಂಪತ್ತು: ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ

| Published : May 25 2025, 01:45 AM IST

ಶ್ರೀ ಜಗಜ್ಯೋತಿ ಬಸವಣ್ಣ ದೇಶದ ಬಹುದೊಡ್ಡ ಸಂಪತ್ತು: ಶ್ರೀಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬಸವಣ್ಣನವರು 12ನೇ ಶತಮಾನದಲ್ಲಿ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಬೇಧ,ಭಾವ, ಅಸಮಾನತೆಯ ವಿರುದ್ಧ ಹೋರಾಟ ನಡೆಸಿ, ಜನರಿಗೆ ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ತಂದ ಸುಧಾರಣೆಯಿಂದಾಗಿ ನಾವು 9 ಶತಮಾನಗಳು ಕಳೆದರೂ ಅವರನ್ನು ಸ್ಮರಿಸುತ್ತಿದ್ದೇವೆ ಎಂದರೆ ಅವರ ದಿವ್ಯತೆ ಶಕ್ತಿ ಎಷ್ಟಿರಬಹುದು ಎಂಬುದನ್ನು ಅರ್ಥೈಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಆಧ್ಯಾತ್ಮಿಕ, ಸಮಾನತೆ, ಅಸ್ಪೃಶ್ಯತೆ ವಿಚಾರವಾಗಿ ಅನುಭವ ಮಂಟಪದ ಮೂಲಕ ಜನರಿಗೆ ಅರಿವು ಮೂಡಿಸಿದ ದೇಶದ ಬಹುದೊಡ್ಡ ಸಂಪತ್ತು ಬಸವಣ್ಣ ಎಂದು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ ಹೇಳಿದರು.

ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕದ ವತಿಯಿಂದ ನಡೆದ ಶ್ರೀ ಜಗಜ್ಯೋತಿ ಬಸವಣ್ಣನವರ 892ನೇ ಜಯಂತ್ಯುತ್ಸವದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ಬಸವಣ್ಣನವರು 12ನೇ ಶತಮಾನದಲ್ಲಿ ಜಾತಿವ್ಯವಸ್ಥೆ, ಅಸ್ಪೃಶ್ಯತೆ, ಬೇಧ,ಭಾವ, ಅಸಮಾನತೆಯ ವಿರುದ್ಧ ಹೋರಾಟ ನಡೆಸಿ, ಜನರಿಗೆ ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ತಂದ ಸುಧಾರಣೆಯಿಂದಾಗಿ ನಾವು 9 ಶತಮಾನಗಳು ಕಳೆದರೂ ಅವರನ್ನು ಸ್ಮರಿಸುತ್ತಿದ್ದೇವೆ ಎಂದರೆ ಅವರ ದಿವ್ಯತೆ ಶಕ್ತಿ ಎಷ್ಟಿರಬಹುದು ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ತಿಳಿಸಿದರು.

ತಮ್ಮ ಅನುಭವ ಮಂಟಪದ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗಳೂ ಸಹ ಪಾಲ್ಗೊಂಡು ವಿಚಾರಗಳನ್ನು ಚರ್ಚಿಸುವ ಅವಕಾಶ ಕಲ್ಪಿಸಿಕೊಟ್ಟಿದ್ದರು. ಬಸವಣ್ಣನವರು ಕನ್ನಡ ಭಾಷೆ ಮೂಲಕವೇ ಜನರಿಗೆ ಅರಿವು ಮೂಡಿಸಿ ಭಗವಂತನನ್ನು ಅರ್ಥೈಸುವ ಕೆಲಸ ಮಾಡುತ್ತಿದ್ದರು ಎಂದರು.

ಚಂದ್ರವನ ಆಶ್ರಮದ ಡಾ.ಶ್ರೀ ತ್ರಿನೇತ್ರಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಬಸವಣ್ಣನವರು 12ನೇ ಶತಮಾನದಲ್ಲಿಯೇ ಲಿಂಗ ಬೇಧಭಾವ, ಅಸಮಾನತೆ ಹೋಗಲಾಡಿಸಿದ್ದರು. ದೇವರನ್ನು ಗರ್ಭಗುಡಿಯಲ್ಲಿ ಇಟ್ಟು ಪೂಜಿಸದೇ ವೀರಶೈವ ಲಿಂಗಾಯತರು ಎದೆಯ ಮೇಲೆ ಇಟ್ಟುಕೊಂಡು ಪೂಜಿಸುತ್ತಿದ್ದಾರೆ. ನಾವು ಪೂಜಿಸುವ ಲಿಂಗಕ್ಕೆ ಬೇಧಭಾವವಿಲ್ಲ. ಮನುಷ್ಯರಲ್ಲಿ ಯಾಕೆ ಬೇಧಭಾವ ಎಂದು ತಿಳಿಸಿದ ಮಹಾನ್‌ಪುರುಷರು ಬಸವಣ್ಣ ಎಂದು ಹೇಳಿದರು.

ಕಾರ್‍ಯಕ್ರಮ ಉದ್ಘಾಟಿಸಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಸುತ್ತೂರು ಮಠಕ್ಕೂ ಪಾಂಡವಪುರಕ್ಕೂ ಅವಿನಾಭಾವ ಸಂಬಂಧವಿದೆ. ಶ್ರೀಗಳು 2009- 10ರಲ್ಲಿ ಸುತ್ತೂರು ಜಾತ್ರೆ ನಡೆಸುವ ಅವಕಾಶ ಕಲ್ಪಿಸಿಕೊಟ್ಟಿದ್ದರು. ಇದೀಗ ಮತ್ತೆ ಮಂಡ್ಯ ಜಿಲ್ಲೆಯ ಮಳವಳ್ಳಿಗೆ ಜಾತ್ರೆ ನಡೆಸಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ ಎಂದರು.

ಪಟ್ಟಣದಲ್ಲಿ ಬಸವ ಭವನ ನಿರ್ಮಾಣ ಮಾಡಬೇಕು ಎಂಬುದು ಬಹುದಿನದ ಬೇಡಿಕೆಯಾಗಿದೆ. ಕ್ಷೇತ್ರದ ಶಾಸಕರು ಸರಕಾರದಿಂದ ನಿವೇಶನ ಮಂಜೂರು ಮಾಡಿಸಿಕೊಟ್ಟರೆ ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಅವರ ಸಿಎಸ್‌ಆರ್ ಫಂಡ್‌ನಿಂದ ಅನುದಾನ ಬಿಡುಗಡೆ ಮಾಡಿಸಿ ಬಸವ ಭವನ ನಿರ್ಮಾಣಕ್ಕೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ವೀರಶೈವ ಲಿಂಗಾಯತ ಅಭಿವೃದ್ದಿ ನಿಗಮದ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್ ಮಾತನಾಡಿ, ಜಗಜ್ಯೋತಿ ಬಸವಣ್ಣನವರು ನಾಡಿನ ಸಾಂಸ್ಕೃತಿಕ ರಾಯಭಾರಿ. ಧಾರ್ಮಿಕ ನೀತಿಯ ಸಮಾನತೆ ಮೇಲೆ ಸಮಸಮಾಜ ನಿರ್ಮಾಣಕ್ಕೆ ಹೋರಾಡಿದ್ದರು. ಬಸವಣ್ಣನವರು ಒಂದು ಜಾತಿಗೆ ಸೀಮಿತಗೊಂಡವರಲ್ಲ. ಅವರ ವಿಶ್ವಮಾನವರು ಎಂದರು.

ಎಲ್ಲಾ ಜಾತಿ, ಜನಾಂಗವರು ಸೇರಿ ಅವರ ಜಯಂತಿಯನ್ನು ಆಚರಣೆ ಮಾಡಿದಾಗ ಮಾತ್ರ ಸಾರ್ಥಕತೆ ಬರುತ್ತದೆ. ಪ್ರತಿಯೊಬ್ಬ ವೀರಶೈವ ಲಿಂಗಾಯತರು ಧರ್ಮಪಾಲನೆ ಮಾಡಬೇಕು. ಆದರೆ, ಕೆಲವು ಪಟ್ಟಭದ್ರಶಕ್ತಿಗಳು ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ವೀರಶೈವ ಲಿಂಗಾಯತರ ಅಭಿವೃದ್ಧಿಗೆ ಮುಖ್ಯಮಂತ್ರಿಗಳಾಗಿದ್ದಾಗ ಯಡಿಯೂರಪ್ಪನವರು ನಿಗಮ ಮಾಡಿ 500 ಕೋಟಿ ರು. ಅನುದಾನ ಘೋಷಿಸಿದ್ದರು. ಈಗ ಸಿಎಂ ಸಿದ್ದರಾಮಯ್ಯ ಅವರು ನಿಗಮಕ್ಕೆ 300 ಕೋಟಿ ರು. ಅನುದಾನ ನೀಡಿದ್ದಾರೆ. ಬಡವರು, ರೈತರು, ವಿದ್ಯಾವಂತರು ಸಹಾಯ ಧನಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ ನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಇದಕ್ಕೂ ಮುನ್ನ ಪಟ್ಟಣದ ಬನ್ನಾರಿ ಮಾರಮ್ಮನ ದೇವಸ್ಥಾನದಿಂದ ವಿವಿಧ ಕಲಾ ತಂಡಗಳೊಂದಿಗೆ ಬಸವಣ್ಣ ಪುತ್ಥಳಿ, ಪೂರ್ಣ ಕುಂಭದೊಂದಿಗೆ ಪಟ್ಟಣದ ವಿವಿಧ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಗೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಚಾಲನೆ ನೀಡಿದರು.

ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮಾರಂಭದಲ್ಲಿ ಕುಂದೂರು ಮಠದ ಡಾ.ಶ್ರೀಶರತ್‌ ಚಂದ್ರ ಸ್ವಾಮೀಜಿ, ಸಾಲೂರು ಮಠದ ಡಾ.ಶ್ರೀಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ತಾಳಶಾಸನ ಎಸ್.ಆನಂದ್, ತಾಲೂಕು ಅಧ್ಯಕ್ಷ ಎಂ.ಶಿವಕುಮಾರ್, ಚಾಮರಾಜನಗರ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಡಿಸಿಸಿ ಬ್ಯಾಂಕ್ ನಿರ್ದೇಶಕ ಗುರುಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಲುವೇಗೌಡ(ಬಕೋಡಿ), ನಿವೃತ್ತ ಉಪವಿಭಾಗಾಧಿಕಾರಿ ಚಿಕ್ಕತಮ್ಮಯ್ಯ, ವೀರಶೈವ ಮುಖಂಡರಾದ ಎಸ್.ಎ.ಮಲ್ಲೇಶ್, ಅಮೃತಿ ರಾಜಶೇಖರ್, ಸಾಹಿತಿ ದ್ಯಾವಪ್ಪ, ಸಿದ್ದಪ್ಪ, ಬುಳ್ಳಪ್ಪ, ಸುಜೇಂದ್ರಕುಮಾರ್ ಸೇರಿ ಸಂಘದ ತಾಲೂಕು ಹಾಗೂ ಜಿಲ್ಲಾಮಟ್ಟದ ಪದಾಧಿಕಾರಿಗಳು ಭಾಗವಹಿಸಿದ್ದರು.