ಬಣ್ಣ ಬಣ್ಣದ ಧ್ವಜಗಳು ಹಾಗೂ ಹೂವುಗಳಿಂದ ಶೃಂಗರಿಸಲ್ಪಟ್ಟಿದ್ದ ಬ್ರಹ್ಮ ರಥವನ್ನು ಭಕ್ತರು ಜೈ ಶ್ರೀರಾಮ್, ಜೈ ಶ್ರೀರಾಮ್ಎಂಬ ಹರ್ಷೋದ್ಗಾರಗಳೊಂದಿಗೆ ಎಳೆದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥ ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತರು ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಕೇವಲ ಬೂದಿಕೋಟೆ ಮಾತ್ರವಲ್ಲದೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನಸ್ತೋಮ ರಥೋತ್ಸವಕ್ಕೆ ಸಾಕ್ಷಿಯಾಯಿತು.
ಬಂಗಾರಪೇಟೆ: ತಾಲೂಕಿನ ಬೂದಿಕೋಟೆ ಗ್ರಾಮದಲ್ಲಿನ ಪುರಾಣ ಪ್ರಸಿದ್ಧ ಶ್ರೀ ಕೋದಂಡರಾಮಸ್ವಾಮಿ ಬ್ರಹ್ಮ ರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಉತ್ಸವದ ಅಂಗವಾಗಿ ಮುಂಜಾನೆಯೇ ದೇವಸ್ಥಾನದಲ್ಲಿ ಮೂಲವಿಗ್ರಹ ಹಾಗೂ ಉತ್ಸವ ಮೂರ್ತಿಗಳಿಗೆ ವಿಶೇಷ ಅಭಿಷೇಕ, ಪಂಚಾಮೃತ ಸ್ನಾನ ಹಾಗೂ ಅರ್ಚನೆಗಳನ್ನು ಮಾಡಲಾಗಿತ್ತು. ಶ್ರೀ ಸೀತಾಲಕ್ಷ್ಮಣ ಹಾಗೂ ಹನುಮಂತ ಸಮೇತ ಶ್ರೀರಾಮಚಂದ್ರನಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಮಧ್ಯಾಹ್ನ ನಿಗದಿಪಡಿಸಿದ ಶುಭ ಮುಹೂರ್ತದಲ್ಲಿ ವೇದಘೋಷಗಳ ನಡುವೆ ಉತ್ಸವ ಮೂರ್ತಿಯನ್ನು ಭವ್ಯವಾಗಿ ಅಲಂಕೃತಗೊಂಡಿದ್ದ ರಥಕ್ಕೆ ಏರಿಸಲಾಯಿತು.ಬಣ್ಣ ಬಣ್ಣದ ಧ್ವಜಗಳು ಹಾಗೂ ಹೂವುಗಳಿಂದ ಶೃಂಗರಿಸಲ್ಪಟ್ಟಿದ್ದ ಬ್ರಹ್ಮ ರಥವನ್ನು ಭಕ್ತರು ಜೈ ಶ್ರೀರಾಮ್, ಜೈ ಶ್ರೀರಾಮ್ಎಂಬ ಹರ್ಷೋದ್ಗಾರಗಳೊಂದಿಗೆ ಎಳೆದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥ ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಭಕ್ತರು ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಕೇವಲ ಬೂದಿಕೋಟೆ ಮಾತ್ರವಲ್ಲದೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಜನಸ್ತೋಮ ರಥೋತ್ಸವಕ್ಕೆ ಸಾಕ್ಷಿಯಾಯಿತು.
ರಥೋತ್ಸವದ ಹಾದಿಯುದ್ದಕ್ಕೂ ಭಕ್ತರಿಗೆ ಪಾನಕ, ಮಜ್ಜಿಗೆ , ಕೋಸಂಬರಿಯನ್ನು ವಿತರಿಸಿದರು.ಜನದಟ್ಟಣೆಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಇತಿಹಾಸ ಪ್ರಸಿದ್ಧ ಈ ಗ್ರಾಮದಲ್ಲಿ ನಡೆದ ಉತ್ಸವದಲ್ಲಿ ಸರ್ವ ಧರ್ಮೀಯರು ಭಾಗವಹಿಸಿ ಭಾವೈಕ್ಯತೆ ಮೆರೆದರು.
ಗ್ರಾಮದ ಪ್ರಮುಖರು, ದೇವಾಲಯ ಸಮಿತಿಯ ಪದಾಧಿಕಾರಿಗಳು ಹಾಗೂ ಸಾವಿರಾರು ಭಕ್ತಾದಿಗಳು ಈ ವೈಭವದ ರಥೋತ್ಸವದಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾದರು. ದೇವಾಲಯದ ಧರ್ಮಾಧಿಕಾರಿ ಜೆ.ಎಂ. ರಾಜಣ್ಣಶೆಟ್ಟಿ, ಪತ್ರಕರ್ತ ಎಚ್.ಎಲ್.ನಾಗರಾಜ್, ಮುಖಂಡರಾದ ಮಾರ್ಕಂಡೇಗೌಡ, ಮಂಜುನಾಥ್, ಕೃಷ್ಣಪ್ಪಶೆಟ್ಟಿ ಇತರರು ಇದ್ದರು.