ಸಾರಾಂಶ
ಹುಣಸನಹಳ್ಳಿಯಲ್ಲಿ ಮನೆಮನೆಗೂ ಮಂತ್ರಾಕ್ಷತೆ ಅಭಿಯಾನ
ಬಂಗಾರಪೇಟೆ: ಶ್ರೀರಾಮಚಂದ್ರನ ಆದರ್ಶಗಳನ್ನು ನಮ್ಮ ದಿನನಿತ್ಯದ ಜೀವನದಲ್ಲಿ ಪಾಲಿಸುವಂತಾಗಬೇಕು ಎಂದು ಮಾಜಿ ಶಾಸಕ ಸಿ.ಪಿ. ವೆಂಕಟಮುನಿಯಪ್ಪ ಅಭಿಪ್ರಾಯ ಪಟ್ಟರು.ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ತಾಲೂಕು ಬಿಜೆಪಿ ವತಿಯಿಂದ ಆಯೋಜಿಸಲಾಗಿದ್ದ ಮಂತ್ರಾಕ್ಷತೆ ವಿತರಣಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಜನವರಿ 22 ರಂದು ಭಗವಾನ್ ಶ್ರೀರಾಮನ ಜನ್ಮ ಭೂಮಿಯಲ್ಲಿ ಭವ್ಯ ರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆಗೊಳಿಸಲಿದ್ದಾರೆ. ದೂರದ ಅಯೋಧ್ಯೆಗೆ ಕರ್ನಾಟಕ ಸೇರಿದಂತೆ ದೇಶದೆಲ್ಲೆಡೆಯ ಜನರು ಹೋಗಲು ಸಾಧ್ಯವಿಲ್ಲ. ಆದರಿಂದ ನಾವೆಲ್ಲರೂ ಮನೆ ಮುಂದೆ ದೀಪ ಹಚ್ಚಿ, ರಾಮನಾಮ ಜಪಿಸಿ ಭಜನೆ ಮಾಡುವುದರ ಮೂಲಕ ಭಗವಂತನನ್ನು ಆರಾಧಿಸಬೇಕು.
ರಾಮಮಂದಿರ ನಿರ್ಮಾಣಕ್ಕಾಗಿ ಸಾವಿರಾರು ಕರಸೇವಕರು ತಮ್ಮ ಅಮೂಲ್ಯವಾದ ಪ್ರಾಣ ತ್ಯಾಗಮಾಡಿದ್ದಾರೆ, ಲಕ್ಷಾಂತರ ಹಿಂದೂಗಳ ಹೋರಾಟದ ಫಲವಾಗಿ ನಾವು ಇಂತಹ ಸತ್ಕಾರ್ಯದಲ್ಲಿ ಭಾಗಿಯಾಗುತ್ತಿದ್ದೇವೆ.ಧರ್ಮ ಪ್ರತಿಯೊಬ್ಬರ ಜೀವನದಲ್ಲಿ ಹಾಸು ಹೊಕ್ಕಾಗಿ ನೆಲೆನಿಂತಿದೆ, ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ರಾಜಕಾರಣ ಬೆರೆಸುವುದು ಸೂಕ್ತವಲ್ಲ, ಪ್ರತಿಯೊಬ್ಬರೂ ಪಕ್ಷ ಭೇದ ಮರೆತು ಮಂದಿರದ ಉದ್ಘಾಟನೆ ಕಾರ್ಯದಲ್ಲಿ ಭಾಗವಹಿಸುವಂತಾಗಬೇಕು ರಾಜಕಾರಣ ಎಂಬುವುದು ಚುನಾವಣೆಗೆ ಸೀಮಿತವೇ ಹೊರತು ಧರ್ಮಗಳ ನಡುವೆ ಕಂದಕ ಸೃಷ್ಟಿಸುವಂತಾಗಬಾರದು ಎಂದು ಪರೋಕ್ಷವಾಗಿ ವಿರೋಧ ಪಕ್ಷಕ್ಕೆ ಕಿವಿಮಾತು ಹೇಳಿದರು.
ಮಂಡಲ ಅಧ್ಯಕ್ಷ ನಾಗೇಶ್, ಮಾಜಿ ಜಿಪಂ ಸದಸ್ಯರಾದ ಬಿ.ವಿ.ಮಹೇಶ್, ಗ್ರಾಪಂ ಸದಸ್ಯರಾದ ಶ್ರೀನಿವಾಸ್, ಶ್ರೀಧರ್, ಮುಖಂಡರಾದ ಮುನಿಸ್ವಾಮಿ, ರಮೇಶ್, ಜಯರಾಮಣ್ಣ, ಕೃಷ್ಣಪ್ಪ, ಧರಂಸಿಂಗ್, ಸುರೇಶ್, ನಂದೀಶ್ ಮತ್ತಿತರರು ಇದ್ದರು.---12ಕೆಬಿಪಿಟಿ.4.ಬಂಗಾರಪೇಟೆ ತಾಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿ ಮಂತ್ರಾಕ್ಷಯತೆಯನ್ನು ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮನೆ ಮನೆಗೂ ವಿತರಿಸಿದರು.