ಗದಗ: ಫೆ. 14ರಂದು ನಡೆಯುವ ಪ್ರೇಮಿಗಳ ದಿನಾಚರಣೆಯನ್ನು ಶ್ರೀರಾಮಸೇನೆ ತೀವ್ರವಾಗಿ ವಿರೋಧಿಸುತ್ತದೆ. ಅಂದು ಪಾರ್ಕ್, ಹೋಟೆಲ್ ಮತ್ತು ಲಾಡ್ಜ್ಗಳ ಮೇಲೆ ನಮ್ಮ ಕಾರ್ಯಕರ್ತರು ತೀವ್ರ ನಿಗಾ ಇಡಲಿದ್ದಾರೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜದಲ್ಲಿ ಲವ್ ಜಿಹಾದ್ ಎಂಬ ಪಿಡುಗು ಮಿತಿ ಮೀರುತ್ತಿದೆ. ಪೋಷಕರು ಕೇವಲ ತಮ್ಮ ಮಕ್ಕಳಿಗೆ ಐಷಾರಾಮಿ ವಸ್ತುಗಳನ್ನು ಕೊಡಿಸಿದರೆ ಸಾಲದು. ಅವರಿಗೆ ಧರ್ಮ ಮತ್ತು ಸಂಸ್ಕಾರದ ಅರಿವು ಮೂಡಿಸಬೇಕುಲವ್ ಜಿಹಾದ್ನಿಂದಾಗಿ ಅದೆಷ್ಟೋ ಯುವತಿಯರ ಜೀವನ ಬೀದಿಗೆ ಬರುತ್ತಿದೆ. ದಿನಂಪ್ರತಿ ನಮ್ಮ ಸಹಾಯವಾಣಿಗೆ ಐದಾರು ಕರೆಗಳು ಬರುತ್ತಿವೆ. ಮಕ್ಕಳ ಕೈಗೆ ದೊಡ್ಡ ಫೋನ್ ಕೊಟ್ಟು ದೊಡ್ಡ ಕಾಲೇಜಿಗೆ ಕಳುಹಿಸಿದರೆ ಪೋಷಕರ ಜವಾಬ್ದಾರಿ ಮುಗಿಯುವುದಿಲ್ಲ. ಮಠಾಧೀಶರು ಕೂಡ ತಮ್ಮ ಪ್ರವಚನಗಳಲ್ಲಿ ಯುವತಿಯರನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಕೇಂದ್ರ ಸರ್ಕಾರವು ವಂದೇ ಮಾತರಂ ಗೀತೆಯ 150ನೇ ವರ್ಷದ ಅಂಗವಾಗಿ ಅದಕ್ಕೆ ರಾಷ್ಟ್ರಗೀತೆಯಷ್ಟೇ ಗೌರವ ನೀಡಿದ್ದನ್ನು ಮುತಾಲಿಕ್ ಸ್ವಾಗತಿಸಿದರು. ಇನ್ನು ಮುಂದೆ ಶ್ರೀರಾಮಸೇನೆಯ ಪ್ರತಿ ಕಾರ್ಯಕ್ರಮವು ಪೂರ್ಣ ವಂದೇ ಮಾತರಂ ಹಾಡುವ ಮೂಲಕವೇ ಆರಂಭವಾಗಲಿದೆ ಎಂದರು.ಪಾಕ್ ಕ್ರಿಕೆಟ್ ಪಂದ್ಯಕ್ಕೆ ಬಹಿಷ್ಕಾರ: ಸೈನಿಕರ ರಕ್ತದ ಮೇಲೆ ಕ್ರಿಕೆಟ್ ಆಡುವುದು ಸರಿಯಲ್ಲ. ಫೆ. 15ರಂದು ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭಾರತೀಯರು ಟಿವಿ ಆಫ್ ಮಾಡುವ ಮೂಲಕ ಬಹಿಷ್ಕರಿಸಬೇಕು. ಇದು ಕೇವಲ ಹಣದ ಲೂಟಿ ಮತ್ತು ಬೆಟ್ಟಿಂಗ್ ಆಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಲಕ್ಷಾಂತರ ಬಾಂಗ್ಲಾದೇಶಿ ನುಸುಳುಕೋರರಿದ್ದು, ಅವರು ದೇಶದ ಭದ್ರತೆಗೆ ಕ್ಯಾನ್ಸರ್ ಇದ್ದಂತೆ. ಗೃಹ ಸಚಿವರು 15 ದಿನಗಳಲ್ಲಿ ಅವರನ್ನು ಪತ್ತೆ ಹಚ್ಚಿ ಹೊರಹಾಕದಿದ್ದರೆ, ಶ್ರೀರಾಮಸೇನೆಯೇ ಅವರ ಕಾಲನಿಗಳಿಗೆ ನುಗ್ಗಿ ಒದ್ದು ಹೊರಹಾಕಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀರಾಮಸೇನೆಯ ಉತ್ತರ ಪ್ರಾಂತ್ಯದ ರಾಜ್ಯ ಗೌರವಾಧ್ಯಕ್ಷ ಸತ್ಯ ಪ್ರಮೋದ ಸರಸ್ವತಿ ಸ್ವಾಮೀಜಿ, ಗದಗ ವಿಭಾಗದ ಪ್ರಮುಖರಾದ ಮಂಜುನಾಥ ಮುಂತಾದವರು ಇದ್ದರು.
