ಸಾರಾಂಶ
ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮಾನವತಾವಾದಿ ಹಾಗೂ ಶಾಂತಿದೂತ ಶ್ರೀ ರವಿಶಂಕರ್ ಗುರೂಜಿ ಅವರ ಮಹಾ ಸತ್ಸಂಗವನ್ನು ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಕಾಪು
ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದ ಆರ್ಟ್ ಆಫ್ ಲಿವಿಂಗ್ ಹಾಗೂ ಸುದರ್ಶನ ಕ್ರಿಯಾ ಯೋಗಗಳ ಸ್ಥಾಪನಾಚಾರ್ಯ ಪದ್ಮವಿಭೂಷಣ ಶ್ರೀ ರವಿಶಂಕರ್ ಗುರೂಜಿ, ಫೆ.20ರಂದು ಸಂಜೆ 5 ಗಂಟೆಗೆ ಕಾಪು ಸಮುದ್ರ ಕಿನಾರೆಯಲ್ಲಿರುವ ಮಂಥನ ರೆಸಾರ್ಟ್ ಬಳಿ ನಡೆಯಲಿರುವ ಆನಂದ ಲಹರಿ ಮಹಾ ಸತ್ಸಂಗದಲ್ಲಿ ಭಾಗವಹಿಸಲಿದ್ದಾರೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.ಅವರು ಶನಿವಾರ ಮಂಥನ ರೆಸಾರ್ಟ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮಾನವತಾವಾದಿ ಹಾಗೂ ಶಾಂತಿದೂತ ಶ್ರೀ ರವಿಶಂಕರ್ ಗುರೂಜಿ ಅವರ ಮಹಾ ಸತ್ಸಂಗವನ್ನು ಆಯೋಜಿಸಿರುತ್ತೇವೆ ಎಂದರು.
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಕಾರ್ಯಕ್ರಮಗಳು ಅಂತಾರಾಷ್ಟ್ರೀಯ ಖ್ಯಾತಿಯನ್ನು ಪಡೆದು ಇಡೀ ಜಗತ್ತಿನಲ್ಲಿ ಲಾಭರಹಿತವಾದ ಶೈಕ್ಷಣಿಕ, ಮಾನವೀಯ ಮೌಲ್ಯಗಳುಳ್ಳ ಪ್ರಮುಖ ಸಂಸ್ಥೆಯಾಗಿದೆ. ಇದರ ಸ್ಥಾಪಕರಾದ ಗುರೂಜಿ ಅವರು ಉಡುಪಿ ಜಿಲ್ಲೆಗೆ ಬಂದು ಆನಂದ ಲಹರಿ ಮಹಾ ಸತ್ಸಂಗದಲ್ಲಿ ಭಾಗವಹಿಸಿ ಜ್ಞಾನ, ಧ್ಯಾನ ಹಾಗೂ ಗಾನದ ಸವಿಯನ್ನು ನೀಡಲಿದ್ದಾರೆ. ಸುಮಾರು ಹತ್ತು ಸಾವಿರಕ್ಕೂ ಅಧಿಕ ಮಂದಿ ಸೇರುವ ನಿರೀಕ್ಷೆ ಇದೆ ಎಂದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಆರ್ಟ್ ಆಫ್ ಲಿವಿಂಗ್ ಶಿಕ್ಷಕರಾದ ರಾಧಾ ಶೆಣೈ, ದಿನೇಶ್ ಕಾಮತ್, ವಸಂತ್ ಕುಮಾರ್, ಪ್ರಶಾಂತ್ ಪೈ, ವಿಮಲಾಕ್ಷಿ ದಿವಾಕರ್, ಶೈಲಜ ಮತ್ತಿತರರು ಉಪಸ್ಥಿತರಿದ್ದರು.