ಸಾರಾಂಶ
ಕನ್ನಡಪ್ರಭ ವಾರ್ತೆ ಬಾದಾಮಿ
ಇಲ್ಲಿನ ಪುರಾತನ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ಕಳೆದ ಒಂಬತ್ತು ದಿನಗಳಿಂದ ಘಟಸ್ಥಾಪನೆ ಮೂಲಕ ದೀಪಾರಾಧನೆ ಮತ್ತು ದೇವಸ್ಥಾನದಲ್ಲಿ ನಿತ್ಯ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದು ಗುರುವಾರ ಮಧ್ಯಾಹ್ನ ಶ್ರೀ ವೆಂಕಟೇಶ್ವರರ ರಥೋತ್ಸವ ನಡೆಯುವ ಮೂಲಕ ನವರಾತ್ರಿ ಉತ್ಸವವು ಸಂಪನ್ನಗೊಂಡಿತು.ಬೆಳಗ್ಗೆ ದೇವರಿಗೆ ವಿಶೇಷ ಅಲಂಕಾರ ಮತ್ತು ಪೂಜೆ ನೆರವೇರಿಸಿ ನಂತರ ರಥಾಂಗ ಹೋಮ ನಡೆದು ಮಧ್ಯಾಹ್ನ 12.30ಕ್ಕೆ ವೆಂಕಟೇಶ್ವರ ದೇವಸ್ಥಾನದಿಂದ ವಿರುಪಾಕ್ಷ ದೇವರ ಗುಡಿವರೆಗೆ ರಥೋತ್ಸವ ಸಾಗಿತು. ನಂತರ ವೆಂಕಟೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು.
ದೇವರಿಗೆ ನಿತ್ಯ ಅರ್ಚಕ ಗುಡಿ ಅವರ ಮನೆತನದವರಿಂದ ವಿಶೇಷ ಅಲಂಕಾರ, ಡಾ.ವಿ.ವೈ. ಭಾಗವತ ದಂಪತಿಯಿಂದ ಪುಣ್ಯಾವಚನ ಜಯತೀರ್ಥ ಆಚಾರ್ಯ ಇನಾಮದಾರ ಅವರಿಂದ ಹೋಮ, ಹವನ, ವಿಷ್ಣುತೀರ್ಥ, ವಾದಿರಾಜ, ಸರ್ವೋತ್ತಮ ಗುಡಿ ಅವರು ಪೂಜಾ ಕೈಂಕರ್ಯ ನೇತೃತ್ವ ವಹಿಸಿದ್ದರು.ಸಾಂಪ್ರದಾಯಿಕವಾಗಿ ವೆಂಕಟೇಶ್ವರ ದೇವರ ಉತ್ಸವ ಮೂರ್ತಿಯನ್ನು ಹೊತ್ತಿದ್ದ ರಥವು ತಳಿರು ತೋರಣಗಳಿಂದ ಶೃಂಗಾರಗೊಂಡಿತ್ತು. ವಿವಿಧ ಸಂಗೀತ ವಾದ್ಯಗಳ ಜೊತೆಗೆ ಭಕ್ತರ ಜಯಘೋಷಗಳು ಮೊಳಗಿದವು. ಹಿರಿಯರಾದ ವೀರಪುಲಿಕೇಶಿ ವಿದ್ಯಾ ಸಂಸ್ಥೆ ಚೇರಮನ್ ಎ.ಸಿ.ಪಟ್ಟಣದ ರಥಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಈ ವೇಳೆ ಭಕ್ತಾದಿಗಳು, ಮಹಿಳೆಯರು ರಥಕ್ಕೆ ಹೂವು, ಹಣ್ಣು, ಕಾಯಿ, ಉತ್ತತ್ತಿ ಸಮರ್ಪಿಸಿ ಭಕ್ತಿ ಭಾವ ಮೆರೆದರು. ಮಹಿಳೆಯರು ಆರತಿ ಮತ್ತು ಅರ್ಚಕರು ಮಂಗಳಾರತಿ ಮಾಡಿದರು.
ರಥೋತ್ಸವದಲ್ಲಿ ಹಿರಿಯ ನ್ಯಾಯವಾದಿ ಕೆ.ವಿ.ಕೆರೂರ, ವಿಜಯಿಂದ್ರ ಇನಾಮದಾರ, ಡಾ.ವಿ.ವೈ. ಭಾಗವತ, ಪ್ರಲ್ಹಾದ ಇನಾಮದಾರ, ಎಸ್.ಜಿ. ಕುಲಕರ್ಣಿ, ಶ್ರೀನಿವಾಸ ಬೋನಗೇರಿ, ಜಯಪ್ರಕಾಶ ಕುಲಕರ್ಣಿ, ಪ್ರಸನ್ನ ಮುಗಳಿ, ಬಲರಾಮ, ಮಾಹುಲಿ, ಮುರಳಿಧರ, ಸುಶಿಲೇಂದ್ರ, ಅಡಿವೇಂದ್ರ, ನಂದಕುಮಾರ, ಮನೋಹರ, ಸಂಜೀವ ಕುಲಕರ್ಣಿ, ಸುನೀಲ ಬಂಗಾರಶೆಟ್ಟರ, ಅಣ್ಣಯ್ಯ ಕಂಬಿ, ಸಂಗಮೇಶ ಜವಳಿ, ಸತೀಶ ಹಂಜಿ ಸೇರಿದಂತೆ ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು.ಶಮಿ ಪೂಜೆ: ಸಂಜೆ ಆಶ್ವವಾಹನೋತ್ಸವವು ನಗರದ ಪ್ರಮುಖ ಬೀದಿಯಲ್ಲಿ ಸಂಚರಿಸಿ ದೇವಸ್ಥಾನಕ್ಕೆ ಬಂದು ತಲುಪಿತು. ನಂತರ ಶ್ರೀ ದತ್ತ ದೇವಸ್ಥಾನದಲ್ಲಿ ಹಿರಿಯ ನ್ಯಾಯವಾದಿ ಕೃಷ್ಣ ಕೆರೂರ ಅವರು ಶಮಿ ಪೂಜೆ ನಡೆಸಿ ಬನ್ನಿ ಮುಡಿದರು. ಆಗ ಭಕ್ತರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ದಸರಾ ಶುಭಾಶಯ ಕೋರಿದರು.