ರಾಮನಗರ: ತಾಲೂಕಿನ ಕೇತೋಹಳ್ಳಿ ಗ್ರಾಮದ ಶ್ರೀಕಂಬದ ಮಾರಮ್ಮ ದೇವಾಲಯದ ನೂತನ ವಿಮಾನಗೋಪುರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು

ರಾಮನಗರ: ತಾಲೂಕಿನ ಕೇತೋಹಳ್ಳಿ ಗ್ರಾಮದ ಶ್ರೀಕಂಬದ ಮಾರಮ್ಮ ದೇವಾಲಯದ ನೂತನ ವಿಮಾನಗೋಪುರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು.

ಕಂಬದ ಮಾರಮ್ಮ ದೇಗುಲದ ವಿಮಾನಗೋಪುರ ಪ್ರತಿಷ್ಠಾಪನೆ ಹಾಗೂ ಕುಂಬಾಭಿಷೇಕದ ಹಿನ್ನೆಲೆಯಲ್ಲಿ ಎರಡು ದಿನದಿಂದ ದೇವಾಲಯದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಿದವು. ಬುಧವಾರ ಸಂಜೆ ಊರಿನ ಹೆಣ್ಣುಮಕ್ಕಳು ಮತ್ತು ಸುಮಂಗಲಿಯೊಂದಿಗೆ ವಿಮಾನಗೋಪುರ ಕಳಶದ ಉತ್ಸವ ಮೆರವಣಿಗೆ, ಗಂಗಾಪೂಜೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ರಕ್ಷಾಬಂಧನ, ಯಾಗಶಾಲೆ ಪ್ರವೇಶ, ಗಣಪತಿ ಹೋಮ, ವಾಸ್ತು ಹೋಮ, ಪರಿವಾರ ಹೋಮ, ಲಘು ಪೂರ್ಣಾಹುತಿ ಪೂಜಾ ಕಾರ್ಯಗಳು ನೆರವೇರಿದವು.

ಗುರುವಾರ ಬೆಳಗಿನ ಜಾವ ಪ್ರಾತಃಕಾಲದಲ್ಲಿ ಧಾರ್ಮಿಕ ಕಾರ್ಯಕ್ರಮದೊಂದಿಗೆ ಗೋಪುರದ ಕಳಸ ಪ್ರತಿಷ್ಠಾಪನೆ ಬಳಿಕ ಅಮ್ಮನವರಿಗೆ ಪ್ರಾತಃಕಾಲದ ಪಂಚಾಮೃತ ಅಭಿಷೇಕ, ಗಣಪತಿ ಹೋಮ, ದುರ್ಗಾಹೋಮ, ಚಂಡಿಕಾಹೋಮ, ಪ್ರತಿಷ್ಠಾಪನಾ ಹಾಗೂ ತತ್ವನ್ಯಾಸ ಹೋಮಗಳು, ಮಹಾಪೂರ್ಣಾಹುತಿ, ಬಲಿಹರಣ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನೆರವೇರಿತು. ಪೂಜಾ ಕಾರ್ಯಕ್ರಮದ ಅಂಗವಾಗಿ ಕಂಬದ ಮಾರಮ್ಮಮೂರ್ತಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಧಾರ್ಮಿಕ ಕೈಂಕರ್ಯದ ನಿಮಿತ್ತ ದೇವಾಲಯದ ಆವರಣದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ರಾಮನಗರ ತಾಲೂಕಿನ ವಿವಿಧ ಗ್ರಾಮಗಳಿಂದ ಮಾತ್ರವಲ್ಲದೆ ಬೆಂಗಳೂರು ಸೇರಿದಂತೆ ದೂರದ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.

ಈ ವೇಳೆ ದೇವಾಲಯದ ಪ್ರಧಾನ ಅರ್ಚಕಿ ಗೌರಮ್ಮ ಮಾತನಾಡಿ, ನಮ್ಮ ಪೂರ್ವಜರು ನೂರಾರು ವರ್ಷಗಳಿಂದ ಪೂಜಿಸುತ್ತಿದ್ದ ಕಂಬದ ಮಾರಮ್ಮನವರ ದೇವಾಲಯವನ್ನು ಕೇತೋಹಳ್ಳಿ ಭಕ್ತರು, ಗ್ರಾಮಸ್ಥರು ಹಾಗೂ ದಾನಿಗಳ ಸಹಕಾರದಲ್ಲಿ ದೇವಾಲಯಕ್ಕೆ ಇದೀಗ ವಿಮಾನಗೋಪುರ ಮತ್ತು ಕಳಶ ಪ್ರತಿಷ್ಠಾಪನಾ ಮಹೋತ್ಸವ ನೆರವೇರುತ್ತಿದೆ. ಪ್ರತಿವರ್ಷವೂ ಏಪ್ರಿಲ್ ತಿಂಗಳಲ್ಲಿ ಅಮ್ಮನವರ ಕರಗ ಮಹೋತ್ಸವ ನೆರವೇರಿಸುತ್ತೇವೆ ಎಂದರು.

ವಿಮಾನಗೋಪುರ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಮುತ್ತು, ತಾಲೂಕು ಘಟಕದ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಪ್ಪ, ಚನ್ನಪಟ್ಟಣ ತಾಲೂಕು ಅಧ್ಯಕ್ಷ ಗೋವಿಂದಹಳ್ಳಿ ನಾಗರಾಜು, ಮುಖಂಡರಾದ ಶಿವಕುಮಾರ್, ರಾಜಣ್ಣ, ಶಿವಕುಮಾರಸ್ವಾಮಿ, ಜಿ.ಟಿ. ಕೃಷ್ಣೇಗೌಡ, ಜನತಾನಾಗೇಶ್, ವಿ. ನರಸಿಂಹಮೂರ್ತಿ, ನರೇಂದ್ರ, ಮಲ್ಲಪ್ಪ, ದೇವಾಲಯ ಸೇವಾ ಟ್ರಸ್ಟ್ ಕಾರ್ಯದರ್ಶಿ ಆನಂದ್, ಪ್ರಮುಖರಾದ ಯೋಗೇಶ್ ಸೇರಿದಂತೆ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.

ಕೋಟ್‌..........

ಇಂದಿನ ಆಧುನಿಕತೆಯ ಭರಾಟೆ ಹಾಗೂ ಜೀವನದ ಜಂಜಾಟದಲ್ಲಿ ದೇವಾಲಯಗಳು ಮನುಷ್ಯನಿಗೆ ನೆಮ್ಮದಿ ನೀಡುವ ಶಕ್ತಿಕೇಂದ್ರಗಳಾಗಿವೆ. ಹಿಂದಿನಿಂದಲೂ ನಮ್ಮ ಪೂರ್ವಜರು ಆಚರಣೆ ಮಾಡಿಕೊಂಡ ಬಂದಿರುವ ಧಾರ್ಮಿಕ ಕಾರ್ಯಗಳನ್ನು ಮುನ್ನಡೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ.

- ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ

26ಕೆಆರ್ ಎಂಎನ್ 1,2.ಜೆಪಿಜಿ

1.ಕೇತೂಹಳ್ಳಿಯಲ್ಲಿ ಕಂಬದ ಮಾರಮ್ಮ ದೇಗುಲದ ವಿಮಾನಗೋಪುರ ಮತ್ತು ಕಳಶ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ನಿಖಿಲ್ ಕುಮಾರಸ್ವಾಮಿ ಭಾಗವಹಿಸಿದ್ದರು.