ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಪಟ್ಟಲದಮ್ಮ ಸಿಡಿ ಹಬ್ಬವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಿಡಿ ಎಳೆದು ಕೊಂಡ ಹಾಯುವ ಮೂಲಕ ಯಶಸ್ವಿಯಾಗಿ ನಡೆಯಿತು.ನೂರಾರು ವರ್ಷಗಳಿಂದ ಪಟ್ಟಣದಲ್ಲಿ ವಾಸವಾಗಿರುವ ಎಲ್ಲಾ ಸಮುದಾಯದ ಒಂದೊಂದು ಜವಾಬ್ದಾರಿಯೊಂದಿಗೆ ನಡೆದುಕೊಂಡು ಬಂದಿರುವ ಪಟ್ಟಲದಮ್ಮ ಸಿಡಿ ಹಬ್ಬಕ್ಕೆ ಪಟ್ಟಣ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಧನ್ಯತೆ ಮೆರೆದರು.
ಹಬ್ಬದ ಪ್ರಮುಖ ಆಕರ್ಷಣೆ ಘಟ್ಟ ಮೆರವಣಿಗೆ ಕಾಲ ಮಿತಿಯೊಳಗೆ ನಡೆಯಿತು. ಮೊದಲಿಗೆ ಪೇಟಿ ಬೀದಿ, ಸಿದ್ಧಾರ್ಥ ನಗರ, ಗಂಗಮತಸ್ಥ, ಅಶೋಕ್ ನಗರ, ಕೀರ್ತಿ ನಗರ, ಬಸವಲಿಂಗಪ್ಪ ನಗರದ ಮಹಿಳೆಯರು ಘಟ್ಟ ಮೆರವಣಿಗೆಯಲ್ಲಿ ಸಾಗಿ ಪಟ್ಟಲದಮ್ಮ ದೇವರಿಗೆ ಪೂಜೆ ಸಲ್ಲಿಸಿದರು. ಪಟ್ಟಣದ ಅನಂತ್ ರಾಂ ವೃತ್ತದಲ್ಲಿ ಶಾಸಕ ಪಿ.ಎಂ ನರೇಂದ್ರಸ್ವಾಮಿ ಪೂಜೆ ಸಲ್ಲಿಸಿ ಈಡಗಾಯಿ ಹೊಡೆದು ನಮಿಸಿ, ಮೆರವಣಿಗೆಗೆ ಚಾಲನೆ ನೀಡಿದರು.ಪಟ್ಟಣದ ಅನಂತ್ ವೃತ್ತದವರೆವಿಗೂ ಮೆರವಣಿಗೆ ಜೊತೆಯಲ್ಲಿ ಹೆಜ್ಜೆ ಹಾಕಿದರು. ಎಡಿಜಿಪಿ ನಂಜುಂಡಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ತಹಸೀಲ್ದಾರ್ ಎಸ್.ವಿ ಲೊಕೇಶ್ ಸೇರಿದಂತೆ ಇತರೆ ಪ್ರಮುಖರು ಶಾಸಕರ ಜೊತೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಮತ್ತಷ್ಟು ಮೆರಗು ನೀಡಿದರು.
ಘಟ್ಟ ಮೆರವಣಿಗೆ ವೇಳೆ ಯುವಕ, ಯುವತಿ ಸೇರಿದಂತೆ ವಯಸ್ಸಿನ ಮಿತಿ ಇಲ್ಲದೇ ತಮಟೆ ತಾಳಕ್ಕೆ ಕುಣಿದು ಕುಪ್ಪಳಿಸಿದರು. ಪೊಲೀಸರು ಕೊಟ್ಟಿದ್ದ ಕಾಲಮಿತಿ ಮೀರದಂತೆ ಮೆರವಣಿಗೆ ಮುಂದಕ್ಕೆ ಸಾಗಿಸುವಲ್ಲಿ ಯಶಸ್ವಿಯಾದರು.ಕೋಟೆ ಪಟೇಲ್ ಚಿಣ್ಣೇಗೌಡರ ಮನೆಯ ಮುಂದೆ ಸಿದ್ಧಾರ್ಥ ನಗರದ ಮುಖಂಡರು ತಂದುಕೊಟ್ಟ ಅಗ್ಗದಿಂದ ಕೋಟೆ ಬೀದಿ ಮುಖಂಡರು 45 ಅಡಿ ಉದ್ದದ ಮರಕ್ಕೆ ಸಿಡಿಯನ್ನು ಕಟ್ಟಿ ಹೂವು, ಬಲೋನ್, ವಿವಿಧ ಬಣ್ಣದ ಬಟ್ಟೆಯಿಂದ ಆಲಂಕಾರ ಮಾಡಿದರು. ಗಂಗಾಮತ ಸಮುದಾಯದ ಮುಖಂಡರು ಮೆರವಣಿಗೆ ಮೂಲಕ ತಂದ ಸಿಡಿರಣ್ಣವನ್ನು ಕಟ್ಟಿ ಫೆ.7ರಂದು ಮಧ್ಯೆ ರಾತ್ರಿ 12ರ ಸಮಯಲ್ಲಿ ಪೂಜೆ ಸಲ್ಲಿಸಿ ಸಿಡಿ ಎಳೆಯುವುದಕ್ಕೆ ಚಾಲನೆ ನೀಡಲಾಯಿತು.
ಸಿಡಿಯೂ ಶರ್ಗಪಾಣಿ ಬೀದಿ , ಕೋಟೆ ಬೀದಿ , ಮೈಸೂರು ರಸ್ತೆ ಮುಖಾಂತರ ಪೇಟೆ ಬೀದಿ, ಗಂಗಾಮತ ಬೀದಿ ಸುತ್ತಿ ಅನಂತರಾಮ್ ಸರ್ಕಲ್ಗೆ ಬಂದು ಸುಲ್ತಾನ್ ರಸ್ತೆಯಲ್ಲಿ ಇರುವ ಪಟ್ಟಲದಮ್ಮ ದೇವಾಲಯಕ್ಕೆ ಸಾಗಿ ಮೂರು ಸುತ್ತು ಸುತ್ತಿದ ನಂತರ ಸಿಡಿಯನ್ನು ಅಂತಿಮಗೊಳಿಸಲಾಯಿತು. ಸಿಡಿಯನ್ನು ನೋಡಲು ಬಂದ ಲಕ್ಷಾಂತರ ಮಂದಿ ಹಣ್ಣು ಜವನ ಎಸೆದು ನಮಿಸಿದರು. ಈ ವೇಳೆ ಹರಕೆ ಕಟ್ಟಿಕೊಂಡಿದ್ದ ಭಕ್ತರು ತಮ್ಮ ಮನೆ ಮುಂದೆ ಬಂದ ಸಿಡಿಗೆ ದೊಡ್ಡಗಾತ್ರದ ಹೂವಿನ ಹಾರ ಹಾಕಿ ನೂರಾರು ತೆಂಗಿನಕಾಯಿ ಹೊಡೆದು ಹರಕೆ ತೀರಿಸಿದರು.ಕೊಂಡ ಹಾಯುವಿಕೆ:
ತಾಲೂಕಿನ ತಮ್ಮಡಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ರೈತರು ತಮ್ಮ ರಾಸುಗಳಿಗೆ ಹೂವಿನಿಂದ ಆಲಂಕರಿಸಿಕೊಂಡು ಮೆರವಣಿಗೆ ಮೂಲಕ ತಂದ ಸೌದೆಯನ್ನು ಪಟ್ಟಲದಮ್ಮ ದೇವಸ್ಥಾನದ ಉಸ್ತುವಾರಿ ಸಮಿತಿ ರಾತ್ರಿ ಪೂರ್ತಿ ಕೆಂಡವನ್ನು ಹದ ಮಾಡಿ ಕೊಂಡ ಹಾಯಲು ಸಿದ್ಧಪಡಿಸಿದರು.ಗಂಗಮತಸ್ಥ ಬೀದಿ, ಅಡ್ಡೆನಿಂಗಯ್ಯನ ಕೇರಿಯ ಗತ್ತಿಗೆ ಅರಸಮ್ಮನ ಪೂಜಾರಿ ರಘು ಕೊಂಡ ಹಾಯ್ದರು. ನಂತರ ಹರಕೆ ಕಟ್ಟಿಕೊಂಡಿದ್ದ ನೂರಾರು ಭಕ್ತರು ಕೊಂಡ ಹಾಯ್ದು ಹರಕೆ ತೀರಿಸಿದರು. ಹಬ್ಬದ ಅಂಗವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಸ್ಪಿ, ಎಎಸ್ಪಿ ಇ.ಸಿ ತಿಮ್ಮಯ್ಯ, ಡಿವೈಎಸ್ಪಿ ಕೃಷ್ಣಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು. ಹಬ್ಬದ ಅಂಗವಾಗಿ ಪಟ್ಟಣದ ಹಲವೆಡೆ ದಸರಾ ಮಾದರಿಯಲ್ಲಿ ವಿದ್ಯುತ್ ಆಲಂಕಾರ ಮಾಡಿದ್ದು ನೋಡುಗರನ್ನು ಮನಸೂರೆಗೊಳ್ಳುವಂತೆ ಮಾಡಿತು. ಯುವಕ ಯುವತಿಯರು ಸೆಲ್ಪಿ ತೆಗೆದುಕೊಳ್ಳುವುದರ ಮೂಲಕ ಖುಷಿ ಪಟ್ಟರು.ಭಾವೈಕ್ಯತೆ ಸಂಕೇತವಾದ ದಂಡಿನಮಾರಮ್ಮ ಪಟ್ಟಲದಮ್ಮ ಸಿಡಿ ಹಬ್ಬವು ಪಟ್ಟಣದ ಎಲ್ಲಾ ಕೋಮಿನ ಅವರದೇ ಆದ ಜವಾಬ್ದಾರಿಯೊಂದಿಗೆ ತಾಲೂಕು ಆಡಳಿತ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಹೊಸ ಮೆರಗಿನೊಂದಿಗೆ ನಡೆದಿದೆ. ಎಲ್ಲರ ಮನೆ ಮನಗಳಲ್ಲಿ ಹಬ್ಬದ ಸಡಗರ ತುಂಬಿದೆ. ಶಕ್ತಿ ದೇವತೆ ದಂಡಿನ ಮಾರಮ್ಮ ಹಾಗೂ ಪಟ್ಟಲದಮ್ಮ ಸರ್ವರಿಗೂ ಒಳಿತನ್ನು ಮಾಡಲಿ.
- ಪಿ.ಎಂ ನರೇಂದ್ರಸ್ವಾಮಿ, ಶಾಸಕರು, ಅಧ್ಯಕ್ಷರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ