ಕಾರ್ಯಾಚರಣೆಯಲ್ಲಿ ಸೆಕ್ಷನ್ 4ರ ಅಡಿಯಲ್ಲಿ 48 ಪ್ರಕರಣಗಳನ್ನು ದಾಖಲಿಸಿ 5,700 ರು. ದಂಡ, ಸೆಕ್ಷನ್ 6 ಎ ಅಡಿಯಲ್ಲಿ 1 ಪ್ರಕರಣಗಳಿಗೆ 100 ರು. ದಂಡ ಹಾಗೂ ಸೆಕ್ಷನ್ ೬ಬಿ ಅಡಿಯಲ್ಲಿ 3 ಪ್ರಕರಣಗಳಿಗೆ 300 ರು. ದಂಡ ವಿಧಿಸಲಾಯಿತು. ಒಟ್ಟಾರೆ 52 ಪ್ರಕರಣಗಳನ್ನು ದಾಖಲಿಸಿ 6100 ರು. ದಂಡ ವಿಧಿಸಲಾಯಿತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕೆ.ಆರ್.ಎಸ್ ಪ್ರವಾಸಿ ತಾಣದ ವ್ಯಾಪ್ತಿಯಲ್ಲಿ ನಿಯಮಬಾಹಿರ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆಯ ವಿರುದ್ಧ ಕೋಟ್ಪಾ ಕಾಯ್ದೆ ನಿಯಮಗಳಡಿ ವಿಶೇಷ ಕಾರ್ಯಾಚರಣೆ ನಡೆಸಿ ದಂಡ ವಿಧಿಸಲಾಯಿತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಎನ್ಫೋರ್ಸ್ ಮೆಂಟ್ ಅಧಿಕಾರಿಗಳ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೆ.ಆರ್.ಎಸ್ ಹಾಗೂ ಕೆ.ಆರ್.ಎಸ್ ಪೊಲೀಸ್ ಠಾಣೆಗಳ ಸಹಭಾಗಿತ್ವದಲ್ಲಿ ಡಿಎಚ್‌ಒ ಡಾ.ಕೆ.ಮೋಹನ್ ಹಾಗೂ ಜಿಲ್ಲಾ ಎನ್ಫೋರ್ಸ್ ಮೆಂಟ್ ಅಧಿಕಾರಿ ಡಾ.ಬೆಟ್ಟಸ್ವಾಮಿ ಮಾರ್ಗದರ್ಶನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಕೆ.ಆರ್.ಎಸ್ ನ ಆಡಳಿತ ವೈದ್ಯಾಧಿಕಾರಿ ಡಾ.ಪ್ರಫುಲ್ಲ ರವರ ನೇತೃತ್ವದಲ್ಲಿ ಕಾರ್ಯಚರಣೆ ಜರುಗಿತು.

ಕಾರ್ಯಾಚರಣೆಯಲ್ಲಿ ಸೆಕ್ಷನ್ 4ರ ಅಡಿಯಲ್ಲಿ 48 ಪ್ರಕರಣಗಳನ್ನು ದಾಖಲಿಸಿ 5,700 ರು. ದಂಡ, ಸೆಕ್ಷನ್ 6 ಎ ಅಡಿಯಲ್ಲಿ 1 ಪ್ರಕರಣಗಳಿಗೆ 100 ರು. ದಂಡ ಹಾಗೂ ಸೆಕ್ಷನ್ ೬ಬಿ ಅಡಿಯಲ್ಲಿ 3 ಪ್ರಕರಣಗಳಿಗೆ 300 ರು. ದಂಡ ವಿಧಿಸಲಾಯಿತು. ಒಟ್ಟಾರೆ 52 ಪ್ರಕರಣಗಳನ್ನು ದಾಖಲಿಸಿ 6100 ರು. ದಂಡ ವಿಧಿಸಲಾಯಿತು.

ಈ ವೇಳೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ತಿಮ್ಮರಾಜು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ, ಸಮಾಜ ಕಾರ್ಯಕರ್ತ ಮೋಹನ್ ಕುಮಾರ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಯರಾಮು ಹಾಗೂ ಆರಕ್ಷಕರಾದ ಶ್ರೀಕಂಠಪ್ರಸಾದ್ ಭಾಗವಹಿಸಿದ್ದರು.

ಸಾರ್ವಜನಿಕರಿಗೆ ಕರಪತ್ರಗಳನ್ನು ವಿತರಿಸಿ ತಂಬಾಕು ಬಳಕೆ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. ಮುಂದಿನ ದಿನಗಳಲ್ಲಿ ನಿಯಮಬಾಹಿರ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಶಾಲೆ-ಕಾಲೇಜುಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಬಳಕೆ ಸಂಪೂರ್ಣ ನಿಷೇಧವಾಗಿರುವುದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.