ದೇವನಹಳ್ಳಿ: ತಾಲೂಕಿನ ಕುಂದಾಣ ಗ್ರಾಮದಲ್ಲಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ರ್ಯಾಗಿಂಗ್ ಮಾದರಿಯಲ್ಲಿ 10ನೇ ತರಗತಿಯ 11 ವಿದ್ಯಾರ್ಥಿಗಳು ಅದೇ ತರಗತಿ 9 ವಿದ್ಯಾರ್ಥಿಗಳ ಮೇಲೆ ಬೆಲ್ಟ್ನಿಂದ ಬಾಸುಂಡೆ ಬರುವಂತೆ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆಯಲ್ಲಿ ಹಲ್ಲೆಗೊಳಗಾದ ವಿದ್ಯಾರ್ಥಿಗಳು ಮನೆಯಲ್ಲಿ ಪೋಷಕರಿಗೆ ಹೇಳಲು ಹಿಂದೇಟು ಹಾಕಿ, ದಿನವೂ ಹೊಡೆಸಿಕೊಂಡು, ಕೊನೆಗೆ 11 ಜನ ವಿದ್ಯಾರ್ಥಿಗಳ ದೌರ್ಜನ್ಯ ಮಿತಿಮೀರಿ, ಬೆಲ್ಟ್ನಿಂದ ಮನಸೋ ಇಚ್ಚೆ ವಿದ್ಯಾರ್ಥಿಗಳ ಬೆನ್ನಿಗೆ ಬಾಸುಂಡೆ ಬರುವವರೆಗೂ ಹಲ್ಲೆ ಮಾಡಿದಾಗ ತಡೆಯಲಾಗದೆ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ವಸತಿ ಶಾಲಾ ಆಡಳಿತ ಮಂಡಲಿ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿ, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಪೋಷಕರು ವಸತಿ ಶಾಲೆಗೆ ಬಂದು ಮೇಲ್ವಿಚಾರಕರು ಮತ್ತು ಆಡಳಿತ ಮಂಡಲಿಯನ್ನು ಪ್ರಶ್ನಿಸಿದ್ದು, ಅವರಿಂದ ಸಮರ್ಪಕ ಉತ್ತರ ದೊರೆಯದೆ ಪೋಷಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಇಷ್ಟೆಲ್ಲಾ ಘಟನೆ ನಡೆದರೂ ಯಾಕೆ ನೀವು ಪೋಷಕರ ಗಮನಕ್ಕೆ ತಂದಿಲ್ಲ ಎಂದು ಪೋಷಕರು ರೊಚ್ಚಿಗೆದ್ದಾಗ, ಹಾಸ್ಟೆಲ್ ಸಿಬ್ಬಂದಿ ಇಂದಲ್ಲಾ ನಾಳೆ ಮಕ್ಕಳು ಸರಿ ಹೋಗಬಹುದು ಎಂದು ಸಮಾಧಾನ ಮಾಡುತ್ತಿದ್ದರೆನ್ನಲಾಗಿದೆ. ಆದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.ಹಲ್ಲಗೊಳಗಾದ ವಿದ್ಯಾರ್ಥಿ ಪೋಷಕಿ ಪಲ್ಲವಿ ಪ್ರತಿಕ್ರಿಯಿಸಿ, ವಸತಿ ಶಾಲೆಯಲ್ಲಿರುವ ಕೆಲವು ವಿದ್ಯಾರ್ಥಿಗಳು ಮಕ್ಕಳ ಮೇಲೆ ರ್ಯಾಗಿಂಗ್ ನೆಪದಲ್ಲಿ ಹಲ್ಲೆ ನಡೆಸಿದ್ದಾರೆ. ಇಲ್ಲಿರುವ 11 ವಿದ್ಯಾರ್ಥಿಗಳು ಏನೇ ಕೆಲಸ ಹೇಳಿದರೂ ಕೆಲವು ವಿದ್ಯಾರ್ಥಿಗಳ ಆ ಕೆಲಸವನ್ನು ಕೂಡಲೇ ಮಾಡಬೇಕಿತ್ತು. ಜೊತೆಗೆ ನಾವು ಮನೆಯಿಂದ ಏನೇ ತಿಂಡಿ ಅಥವಾ ಬಟ್ಟೆ ಕಳಿಸಿದರೂ ಮೊದಲು ಈ ವಿದ್ಯಾರ್ಥಿಗಳಿಗೆ ಕೊಡಬೇಕಾಗಿತ್ತು. ಅಷ್ಟರಮಟ್ಟಿಗೆ ಹಾಸ್ಟೆಲ್ನಲ್ಲಿ ಇವರು ಹಿಡಿತ ಸಾಧಿಸಿದ್ದರು. ಈ ವಿಚಾರವಾಗಿ ಪೋಷಕರಿಗೆ ತಿಳಿಸಿದರೆ ಇನ್ನಷ್ಟು ಹಲ್ಲೆ ಮಾಡುವ ಬೆದರಿಕೆ ಹಾಕಿ ಮಕ್ಕಳಿಗೆ ಮಾನಸಿಕ-ದೈಹಿಕ ಹಿಂಸೆ ನೀಡಿದ್ದಾರೆಂದು ಆರೋಪಿಸಿದ್ದಾರೆ.
ಘಟನೆ ಕುರಿತು ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಹಲ್ಲೆಗೆ ಒಳಗಾದ ವಿದ್ಯಾರ್ಥಿಗಳ ಪೋಷಕರು ದೂರು ನೀಡಿದ್ದಾರೆ. ಜೊತೆಗೆ ಹಾಸ್ಟೆಲ್ ಸಿಬ್ಬಂದಿ ಕೂಡ ಹಲ್ಲೆ ಮಾಡಿದ ವಿದ್ಯಾರ್ಥಿಗಳ ಪೋಷಕರಿಗೆ ಅವರನ್ನ ಬೇರೆ ಶಾಲೆಗೆ ಸೇರಿಸುವಂತೆ ತಿಳಿ ಹೇಳಿದ್ದಾರೆ. ಮತ್ತೆಂದೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಹಾಸ್ಟೆಲ್ ಸಿಬ್ಬಂದಿ ಪೋಷಕರಿಗೆ ಭರವಸೆ ನೀಡಿದ್ದಾರೆ.
ಪೋಟೋ 7 : ಹಾಸ್ಟೆಲ್ ನಲ್ಲಿ ಪೋಷಕರು ಹಾಗೂ ಹಾಸ್ಟೆಲ್ ಸಿಬ್ಬಂದಿ ಚರ್ಚಿಸಿರುತ್ತಿರುವುದು.
ಪೋಟೋ 8 :ಬಾಸುಂಡೆ ಬರುವಂತೆ ವಿದ್ಯಾರ್ಥಿಗಳಿಗೆ ಹೊಡೆದಿರುವುದು.